ಬಿಬಿಎಂಪಿ ಮಾಜಿ ಸದಸ್ಯ ಜಯಪ್ರಕಾಶ್‌ ಪತ್ನಿ ವಿನೋದಾ ಆತ್ಮಹತ್ಯೆ|ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ| ವೈಟ್‌ಸಿಟಿ ಲೇಔಟ್‌ನಲ್ಲಿ ಪತ್ನಿ ಮತ್ತು ಮಗಳ ಜತೆ ನೆಲೆಸಿದ್ದ ಜಯಪ್ರಕಾಶ್‌| 

ಬೆಂಗಳೂರು(ಅ.28): ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರದ ಸ್ಥಳೀಯ ಬಿಜೆಪಿ ಮುಖಂಡ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ಜಯಪ್ರಕಾಶ್‌ ಅವರ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳವಾರ ಮುಂಜಾನೆ ನಡೆದಿದೆ.

Add Asianetnews Kannada as a Preferred SourcegooglePreferred

ಸಿಗೇಹಳ್ಳಿ ಸಮೀಪದ ವೈಟ್‌ಸಿಟಿ ಲೇಔಟ್‌ ನಿವಾಸಿ ವಿನೋದಾ (35) ಮೃತ ದುರ್ದೈವಿ. ಮನೆಯಲ್ಲಿ ತನ್ನ ಕೊಠಡಿಯಲ್ಲಿ ವಿನೋದಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕೆಲ ಹೊತ್ತಿನ ಬಳಿಕ ಕೊಠಡಿಗೆ ಮೃತಳ ಪತಿ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಮುಖ್ಯಮಂತ್ರಿ ಆಗುವ ಆಸೆ ಈಡೇರ​ದ್ದಕ್ಕೆ ಯುವಕ ನೇಣಿಗೆ ಶರಣು

ಮೂರು ವರ್ಷಗಳ ಹಿಂದೆ ಸರ್ಜಾಪುರದ ಗೋಣಿಗೊಟ್ಟಿಪುರದ ವಿನೋದಾ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ಜಯಪ್ರಕಾಶ್‌ ವಿವಾಹವಾಗಿದ್ದು, ಈ ದಂಪತಿಗೆ ಎರಡು ವರ್ಷದ ಹೆಣ್ಣು ಮಗುವಿದೆ. ವೈಟ್‌ಸಿಟಿ ಲೇಔಟ್‌ನಲ್ಲಿ ಪತ್ನಿ ಮತ್ತು ಮಗಳ ಜತೆ ಜಯಪ್ರಕಾಶ್‌ ನೆಲೆಸಿದ್ದರು. ರಿಯಲ್‌ ಎಸ್ಟೇಟ್‌ ಉದ್ಯಮ ಜೊತೆ ಅವರು ರಾಜಕೀಯದಲ್ಲೂ ಸಹ ಸಕ್ರಿಯವಾಗಿದ್ದಾರೆ. ಕೆ.ಆರ್‌.ಪುರ ಕ್ಷೇತ್ರ ಪ್ರತಿನಿಧಿಸುವ ಸಚಿವ ಬೈರತಿ ಬಸವರಾಜ್‌ ಆಪ್ತ ಕೂಟದಲ್ಲಿ ಜಯಪ್ರಕಾಶ್‌ ಗುರುತಿಸಿಕೊಂಡಿದ್ದಾರೆ.

ಅಲ್ಲದೆ, ಕಾನೂನುಬಾಹಿರ ಕೃತ್ಯಗಳ ಆರೋಪದ ಮೇರೆಗೆ ಜಯಪ್ರಕಾಶ್‌ ವಿರುದ್ಧ ಕೆ.ಆರ್‌.ಪುರ ಸೇರಿದಂತೆ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಅವರ ಮೇಲೆ ಹಿಂದೆ ರೌಡಿಶೀಟ್‌ ಸಹ ತೆರೆಯಲಾಗಿತ್ತು. ಆದರೆ, ಅಪರಾಧ ಚಟುವಟಿಕೆಗಳಿಂದ ದೂರ ಸರಿದ ಕಾರಣ ನೀಡಿ ರೌಡಿಪಟ್ಟಿಯಿಂದ ಆತನನ್ನು ಕೈಬಿಡಲಾಗಿತ್ತು. ಕಳೆದ ಬಾರಿ ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಬಸವನಪುರ ವಾರ್ಡ್‌ನಲ್ಲಿ ಜಯಪ್ರಕಾಶ್‌ ಗೆದ್ದಿದ್ದರು. ನಂತರ ಬೈರತಿ ಬಸವರಾಜ್‌ ಜತೆ ಬಿಜೆಪಿ ಸೇರಿದ್ದರು.