ಉಳುಮೆ ಮಾಡುತ್ತಿರುವ ವೇಳೆ ವಿದ್ಯುತ್‌ ಸ್ಪರ್ಶಿಸಿದ ನೆಚ್ಚಿನ ಕೊಬ್ಬರಿ ಹೋರಿ (ಬ್ಯಾಡಗಿ ಗಿಂಗ್‌) ಜೀವ ಉಳಿಸಲು ಹೋದ ರೈತನೂ ಸೇರಿದಂತೆ ಎರಡು ಎತ್ತುಗಳು ಮೃತಪಟ್ಟಧಾರುಣ ಘಟನೆ ತಾಲೂಕು ಮಲ್ಲೂರು ಗ್ರಾಮದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.

ಬ್ಯಾಡಗಿ (ಜು.6) : ಉಳುಮೆ ಮಾಡುತ್ತಿರುವ ವೇಳೆ ವಿದ್ಯುತ್‌ ಸ್ಪರ್ಶಿಸಿದ ನೆಚ್ಚಿನ ಕೊಬ್ಬರಿ ಹೋರಿ (ಬ್ಯಾಡಗಿ ಗಿಂಗ್‌) ಜೀವ ಉಳಿಸಲು ಹೋದ ರೈತನೂ ಸೇರಿದಂತೆ ಎರಡು ಎತ್ತುಗಳು ಮೃತಪಟ್ಟಧಾರುಣ ಘಟನೆ ತಾಲೂಕು ಮಲ್ಲೂರು ಗ್ರಾಮದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.

Add Asianetnews Kannada as a Preferred SourcegooglePreferred

ಸಂತೋಷಗೌಡ ಪ್ರಭುಗೌಡ ಹೊಮ್ಮರಡಿ (22) ಮೃತ ರೈತ. ಎಂದಿನಂತೆ ಎಲೆಕೋಸು ಬೆಳೆಗೆ ರಂಟಿ ಮೂಲಕ ಸಾಲು ಮಾಡಲು ಹೋಗಿದ್ದ. ಈ ವೇಳೆ ಬೋರ್‌ವೆಲ್‌ಗೆ ಅಳವಡಿಸಿದ್ದ ಸರ್ವಿಸ್‌ ವೈರ್‌ ಕೈಗೆಟುಕುವಂತಿತ್ತು. ಅದರ ಮೇಲಿದ್ದ ಸೇಫ್ಟಿಕೋಟಿಂಗ್‌ ಸಹ ಕಿತ್ತು ಹೋಗಿದೆ. ಇದು ಎತ್ತಿನ ಕೊಂಬಿಗೆ ತಾಕಿ ವಿದ್ಯುತ್‌ ಪ್ರವಹಿಸಿದೆ. ಇದರಿಂದ ಎತ್ತು ಸ್ಥಳದಲ್ಲಿಯೇ ಬಿದ್ದಿದೆ. ಇದನ್ನು ಅಪಾಯದಿಂದ ಪಾರು ಮಾಡಲು ಹೋದ ಸಂತೋಷಗೌಡ ಅವರಿಗೆ ವಿದ್ಯುತ್‌ ಪ್ರವಹಿಸಿದೆ. ಇದನ್ನು ನೋಡಿದ ಪಕ್ಕದ ಜಮೀನಿನವರು ಅವರನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾದರೂ ಮಾರ್ಗ ಮಧ್ಯೆದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಹಾವೇರಿ: ಬಾರದ ಮಳೆ ಒಣಗಿ ನಿಂತ ಬೆಳೆ, ರೈತರು ಕಂಗಾಲು!

ಸಾವು ತಂದ ಹೋರಿ ಹುಚ್ಚು:

ಸಂತೋಷಗೌಡನಿಗೆ ಕೊಬ್ಬರಿ ಹೋರಿ ಎಂದರೆ ಎಲ್ಲಿಲ್ಲದ ಹುಚ್ಚು. ಹೀಗಾಗಿಯೇ ತನ್ನ ಎತ್ತಿಗೆ ಬ್ಯಾಡಗಿ ಕಿಂಗ್‌ ಎಂದು ನಾಮಕರಣ ಮಾಡಿದ್ದ. ಸಾವನ್ನಪ್ಪಿದ ಹೋರಿ ಬಹಳಷ್ಟುಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿತ್ತು ಎನ್ನಲಾಗಿದೆ. ತನ್ನ ನೆಚ್ಚಿನ ಹೋರಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ವೇಳೆ ಏಕಾಏಕಿ ಕೊಂಬಿಗೆ ಸಿಕ್ಕಿದ್ದ ವೈರ್‌ ತಪ್ಪಿಸಲು ಮುಂದಾಗಿದ್ದಾನೆ. ಈ ವೇಳೆ ಹೊಲದಲ್ಲಿದ್ದ ಜನರೂ ಸಹ ಎತ್ತಿಗೆ ಕರೆಂಟ್‌ ಹೊಡೆದಿದೆ ಹೋಗಬೇಡ ಎಂದು ಕೂಗಿದರೂ ಸಹ ಕೇಳದ ಸಂತೋಷಗೌಡ ಎತ್ತಿನ ಜೀವ ಉಳಿಸಲು ಮುಂದಾದಾಗ ಕರೆಂಟ್‌ ತಗುಲಿದೆ. ಜತೆಯಲ್ಲಿದ್ದ ಇನ್ನೊಂದು ಎತ್ತಿಗೂ ವಿದ್ಯುತ್‌ ಸ್ಪರ್ಶಿಸಿ ಸಾವನ್ನಪ್ಪಿದೆ. ಘಟನೆ ಕುರಿತು ಬ್ಯಾಡಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಾರ ಜನಸ್ತೋಮ:

ಕೊಬ್ಬರಿ ಹೋರಿಯಿಂದ (ಬ್ಯಾಡಗಿ ಕಿಂಗ್‌) ಅಪಾರ ಜನಪ್ರಿಯತೆ ಗಳಿಸಿದ್ದ ಸಂತೋಷಗೌಡನ ಅಂತ್ಯಕ್ರಿಯೆಯಲ್ಲಿ ಹಾವೇರಿ ಮತ್ತು ಶಿವಮೊಗ್ಗ ಜಿಲ್ಲೆಯ ಕೊಬ್ಬರಿ ಹೋರಿಗಳ ಮಾಲೀಕರು ಸಾಕಷ್ಟುಸಂಖ್ಯೆಯಲ್ಲಿ ಸೇರಿದ್ದರು. ಮಳೆ ಲೆಕ್ಕಿಸದೆ ಅಂತಿಮಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜನರು ಸಂತೋಷಗೌಡನ ಸಾವಿಗೆ ಕಂಬನಿ ಮಿಡಿದರು. ಇನ್ನೂ ಏಕೈಕ ಪುತ್ರನನ್ನು ಕಳೆದುಕೊಂಡ ಪ್ರಭುಗೌಡ ಹೊಮ್ಮರಡಿ ದಂಪತಿಗಳು ಕಣ್ಣೀರ ಕಟ್ಟೆಒಡೆದಿತ್ತು.

ಹಾವೇರಿ: ಸಾಲಭಾದೆಯಿಂದ ಮನನೊಂದು ರೈತ ಆತ್ಮಹತ್ಯೆ!

ಸಂತಾಪ:

ಸಂತೋಷಗೌಡನ ಸಾವಿಗೆ ಸಂಸದ ಶಿವಕುಮಾರ ಉದಾಸಿ(Shivakumar udasi MP), ಶಾಸಕ ಬಸವರಾಜ ಶಿವಣ್ಣನವರ, ಮಾಜಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಸುರೇಶಗೌಡ ಪಾಟೀಲ, ಮುಖಂಡ ಎಸ್‌.ಆರ್‌. ಪಾಟೀಲ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಗಂಗಾಧರ ಎಲಿ ಸಂತಾಪ ಸೂಚಿಸಿದ್ದಾರೆ.