ಬಾಗಲಕೋಟೆಯಲ್ಲಿ ಮರ್ಯಾದಾ ಹತ್ಯೆ: ಅಪ್ರಾಪ್ತೆ ಮತ್ತು ಬಾಯ್ಫ್ರೆಂಡ್ ಕೊಲೆ ಮಾಡಿದ ಕುಟುಂಬ
Bagalkot Honor Killing Case: ಅಪ್ರಾಪ್ತ ಮಗಳು ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದಾಳೆಂದು ತಿಳಿದ ಬಳಿಕ ಪೋಷಕರೇ ಮಗಳನ್ನು ಮತ್ತು ಮಗಳ ಬಾಯ್ಫ್ರೆಂಡನ್ನು ಕೊಲೆ ಮಾಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಬಾಗಲಕೋಟೆ: ಬಾಗಲಕೋಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮರ್ಯಾದಾ ಹತ್ಯೆ ಪ್ರಕರಣವೊಂದು ನಡೆದಿದೆ. ಅಪ್ರಾಪ್ತ ಮಗಳು ಪ್ರೀತಿಯಲ್ಲಿ ಬಿದ್ದಿದ್ದಾಳೆ ಎಂಬ ಕಾರಣಕ್ಕೆ ಮಗಳು ಮತ್ತು ಆಕೆಯ ಪ್ರಿಯಕರನನ್ನು ಕುಟುಂಬಸ್ಥರೇ ಕೊಲೆ ಮಾಡಿದ್ದಾರೆ. ಸದ್ಯ ಮೃತರ ಶವಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಕೊಲೆಯಾದವರನ್ನು ಬೇವಿನಮಟ್ಟಿ ಗ್ರಾಮದ ಅಪ್ರಾಪ್ತೆ ರಾಜೇಶ್ವರಿ (17) ಮತ್ತು ವಿಶ್ವನಾಥ (22) ಎಂದು ಗುರುತಿಸಲಾಗಿದೆ. ಹುಡುಗಿಯ ತಂದೆ ಪರಸಪ್ಪ ಕರಡಿ ಕುಮ್ಮಕ್ಕಿನಿಂದ ಸಹೋದರರು, ಮಾವಂದಿರಿಂದ ಕೊಲೆ ನಡೆದಿದೆ ಎನ್ನಲಾಗಿದೆ. ಅಕ್ಟೋಬರ್ 1 ರಂದು ಬೆಳಿಗ್ಗೆ 3 ರಿಂದ 4 ಗಂಟೆ ಮಧ್ಯೆ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಾಜೇಶ್ವರಿ ಕತ್ತನ್ನು ವೇಲ್ ನಿಂದ ಬಿಗಿದು ಕೊಲೆ ಮಾಡಿದ್ದರೆ, ವಿಶ್ವನಾಥ ನೆಲಗಿ ಎದೆಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡಲಾಗಿದೆ. ಇಬ್ಬರನ್ನು ಒಂದು ಮಾಡೋದಾಗಿ ನಂಬಿಸಿ ಕರೆದೊಯ್ದು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಟಾಟಾ ಏಸ್ ಹಾಗೂ ಬೊಲೆರೊ ವಾಹನದಲ್ಲೇ ಇಬ್ಬರನ್ನೂ ಕೊಲೆ ಮಾಡಿ ನಂತರ ಶವವನ್ನು ಬಿಸಾಕಿದ್ದಾರೆ ಎನ್ನಲಾಗಿದೆ. ನರಗುಂದ ಬಳಿ ವಿಶ್ವನಾಥ ಇದ್ದಾಗ, ರಾಜೇಶ್ವರಿಯನ್ನು ಆತನ ಬಳಿ ಒಂದು ಮಾಡೋದಾಗಿ ಬೇವಿನಮಟ್ಟಿ ಗ್ರಾಮದಿಂದ ಕರೆದೊಯ್ದಿದ್ದರು. ಅಲ್ಲಿಂದ ಇಬ್ಬರನ್ನು ವಾಹನದಲ್ಲಿ ಕರೆದೊಯ್ದು ಕೊಲೆ ಮಾಡಲಾಗಿದೆ.
ರವಿ ಹುಲ್ಲಣ್ಣವರ(19), ಹನುಮಂತ ಮಲ್ನಾಡದ (22), ಬೀರಪ್ಪ ದಳವಾಯಿ(18) ಎಂಬುವವರೇ ಪ್ರೇಮಿಗಳನ್ನು ಕೊಲೆ ಮಾಡಿರುವ ಆರೋಪಿಗಳು. ರವಿ ಹುಲ್ಲಣ್ಣವರ ರಾಜೇಶ್ವರಿ ಅಣ್ಣ, ಹನುಮಂತ, ಬೀರಪ್ಪ ಹುಡುಗಿಯ ಮಾವಂದಿರು. ಇಬ್ಬರನ್ನು ಕೊಲೆಗೈದು ಆಲಮಟ್ಟಿ ರಸ್ತೆ ಸೇತುವೆಯಿಂದ ಕೃಷ್ಣಾ ನದಿಗೆ ಶವಗಳನ್ನು ಎಸೆಯಲಾಗಿದೆ. ಶವ ಗುರುತು ಸಿಗದಂತೆ ಒಳ ಉಡುಪು ಹೊರತುಪಡಿಸಿ ಬಟ್ಟೆ ಬಿಚ್ಚಿ ಶವಗಳನ್ನು ನದಿಗೆ ಬಿಸಾಕಲಾಗಿದೆ. ನಂತರ ಅಕ್ಟೋಬರ್ 11 ಮಗಳು ಕಾಣೆಯಾಗಿದ್ದಾಳೆ ಎಂದು ಹುಡುಗಿಯ ತಂದೆ ಪರಸಪ್ಪ ದೂರು ನೀಡಿದ್ದ.
ಇದನ್ನೂ ಓದಿ: ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣ; ಒಂದೇ ವರ್ಷದಲ್ಲಿ 37 ಪೋಕ್ಸೋ ಕೇಸ್..!
ಅಕ್ಟೋಬರ್ 3 ರಂದು ಮಗ ಕಾಣೆ ಅಂತ ಗದಗ ಜಿಲ್ಲೆ ನರಗುಂದ ಠಾಣೆಯಲ್ಲಿ ದೂರು ನೀಡಿದ್ದ ವಿಶ್ವನಾಥ ತಂದೆ. ಅಕ್ಟೋಬರ್ 15 ರಂದು ಸಂಶಯ ಹಿನ್ನೆಲೆ ಹುಡುಗಿಯ ಕುಟುಂಬಸ್ಥರನ್ನು ವಿಚಾರಣೆಗೊಳಪಡಿಸಲಾಗಿತ್ತು. ರವಿ ಹುಲ್ಲಣ್ಣವರ ವಶಕ್ಕೆ ಪಡೆದ ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಪ್ರಶ್ನೆ ಆರಂಭಿಸಿದ್ದರು. ವಿಚಾರಣೆ ವೇಳೆ ಕೊಲೆ ರಹಸ್ಯ ಬಯಲಿಗೆ ಬಂದಿದೆ. ರವಿ ಹುಲ್ಲಣ್ಣವರ, ಹನುಮಂತ ಮಲ್ನಾಡದ, ಬೀರಪ್ಪ ದಳವಾಯಿಯನ್ನು ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: 'ಪತ್ನಿ ವಿನಿಮಯ' ಬೇಡಿಕೆ ನಿರಾಕರಿಸಿದ್ದಕ್ಕಾಗಿ ಪತಿಯಿಂದ ಲೈಂಗಿಕ ಕಿರಕುಳ: ಅತ್ತೆ ಮಾವಂದಿರ ಸಾಥ್
ಪತ್ತೆಯಾಗದ ಇಬ್ಬರ ಶವಗಳು:
ಕೃಷ್ಣಾ ನದಿಗೆ ಶವಗಳನ್ನು ಎಸೆದಿರುವ ಹಿನ್ನೆಲೆ ಶವಗಳು ಇನ್ನೂ ಪತ್ತೆಯಾಗಿಲ್ಲ. ಶವಗಳ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಆದರೆ ಹಲವು ದಿನಗಳೇ ಕಳೆದಿರುವ ಹಿನ್ನೆಲೆಯಲ್ಲಿ ಮೃತದೇಹ ಸಿಗುವುದು ಸಂಶಯವಾಗಿದೆ.