ಮಾಂಗಲ್ಯ ಅಪಹರಿಸಲು ಯತ್ನಿಸಿದ ಆರೋಪಿಗೆ ಸಾರ್ವಜನಿಕರು ಥಳಿಸಿದ ಘಟನೆ ತಾಲೂಕಿನ ಹೇರೂರಿನಲ್ಲಿ ಬುಧವಾರ ನಡೆದಿದೆ.

ಗಂಗಾವತಿ (ಜೂ.29) : ಮಾಂಗಲ್ಯ ಅಪಹರಿಸಲು ಯತ್ನಿಸಿದ ಆರೋಪಿಗೆ ಸಾರ್ವಜನಿಕರು ಥಳಿಸಿದ ಘಟನೆ ತಾಲೂಕಿನ ಹೇರೂರಿನಲ್ಲಿ ಬುಧವಾರ ನಡೆದಿದೆ.

ಪಾದಚಾರಿ ಮಹಿಳೆಯ ಕೊರಳಲ್ಲಿದ್ದ ಮಾಂಗಲ್ಯವನ್ನು ಬೈಕ್‌ನಲ್ಲಿ ಬಂದ ಇಬ್ಬರು ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಮಹಿಳೆಯ ಚೀರಾಟ ಕೇಳಿದ ಸಾರ್ವಜನಿಕರು ಪವನ್‌ ಎನ್ನುವ ಆರೋಪಿಯನ್ನು ಹಿಡಿದು ಕಂಬಕ್ಕೆ ಕಟ್ಟಿಥಳಿಸಿದ್ದಾರೆ.ಇನ್ನೋರ್ವ ವ್ಯಕ್ತಿ ಪರಾರಿಯಾಗಿದ್ದಾನೆ. ಆರೋಪಿಯನ್ನು ಪೊಲೀಸರ ಸುಪರ್ದಿಗೆ ಕೊಡಲಾಗಿದೆ.ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಲ್ಯಾಣ ಮಂಟಪದಲ್ಲಿ ಕಳವು, ಆರೋಪಿ ಬಂಧನ

ದಾವಣಗೆರೆ: ಮದುವೆಗೆ ಬಂದಿದ್ದ ಮಹಿಳೆಯೊಬ್ಬರು ಕೊಠಡಿಯಲ್ಲಿ ಲಗೇಜ್‌ನ ಬ್ಯಾಗ್‌ನಲ್ಲಿಟ್ಟಿದ್ದ 40 ಸಾವಿರ ರು. ಮೌಲ್ಯದ ತಾಳಿ ಸರ, 8300 ರು. ನಗದು ಕಳವು ಮಾಡಿದ್ದ ಆರೋಪಿಯನ್ನು ಇಲ್ಲಿನ ಗಾಂಧಿ ನಗರ ಪೊಲೀಸರು ಬಂಧಿಸಿದ್ದಾರೆ.

ನಗರದ ಆರ್‌ಟಿಓ ಕಚೇರಿ ಬಳಿಯ ಫ್ಲೈಓವರ್‌ ಸಮೀಪದ ಶ್ರೀ ಶಾಮನೂರು ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಮದುವೆಗೆ ಬಂದಿದ್ದ ಎನ್‌.ಎಂ.ಶೋಭಾ ಎಂಬುವರು ರೂಮ್‌ನಲ್ಲಿ ಲಗೇಜ್‌ ಇಟ್ಟಿದ್ದರು. ಮಧ್ಯಾಹ್ನ ಬ್ಯಾಗ್‌ ತೆಗೆದುಕೊಂಡಾಗ ಅದರಲ್ಲಿ ಇಟ್ಟಿದ್ದ 10 ಗ್ರಾಂ ತೂಕವುಳ್ಳ ಕರಿಮಣಿಯಿಂದಕೂಡಿದ ಚಿನ್ನದ ಗುಂಡುಗಳಿಗಿರುವ ತಾಳಿ ಸರ ಹಾಗೂ ನಗದು ಕಳುವಾಗಿತ್ತು. ಎಲ್ಲಾ ಕಡೆ ಹುಡುಕಿದರೂ ಸಿಗದಿದ್ದಾಗ ಶೋಭಾ ಅವರು ಇಲ್ಲಿನ ಗಾಂಧಿ ನಗರ ಪೊಲೀರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಮಾಂಗಲ್ಯ ತೆೆಗೆಯೋದು ಪತಿಗೆ ನೀಡೋ ಮಾನಸಿಕ ಕ್ರೌರ್ಯ: ಮದ್ರಾಸ್ ಹೈ ಕೋರ್ಟ್

ಪ್ರಕರಣ ದಾಖಲಾದ 24 ಗಂಟೆಯಲ್ಲೇ ತೀವ್ರ ಕಾರ್ಯಾಚರಣೆ ನಡೆಸಿದ ಗಾಂಧಿ ನಗರ ಪೊಲೀಸರು ಇಲ್ಲಿನ ಶಾಂತಿ ನಗರದ ಮಸಾಲೆ ಪದಾರ್ಥಗಳ ವ್ಯಾಪಾರಿಯಾದ ಆರೋಪಿ ಕಿರಣ್‌ ನಾಯ್ಕ(24 ವರ್ಷ) ಎಂಬಾತನನ್ನು ಬಂಧಿಸಿ, ಆತನಿಂದ 9 ಚಿನ್ನದ ಗುಂಡು, 2 ಮಾಂಗಲ್ಯದ ತಾಳಿ, 2500 ರು. ಜಪ್ತು ಮಾಡಿದ್ದು, ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಗಾಂಧಿ ನಗರ ಠಾಣೆ ಎಸ್‌ಐಗಳಾದ ಅಂಜಿನಪ್ಪ, ಶಮೀಮ್‌ ಉನ್ನೀಸಾ ಹಾಗೂ ಸಿಬ್ಬಂದಿಯಾದ ಎಎಸ್‌ಐ ನಾಗೇಂದ್ರಪ್ಪ, ಮಾರುತಿ, ಅಸ್ಗರ್‌ ಅಲಿ, ಖಾಜಾ ಹುಸೇನ್‌ ಅತ್ತಾರ್‌, ಷಫೀವುಲ್ಲಾ ಸಿದ್ದಿಕ್‌ ಅಲಿ, ಚನ್ನಬಸವ ಗೋಡೆಕರ್‌, ಲಕ್ಷ್ಮೀದೇವಿ, ಲತಾ, ರಮೇಶ್‌ರನ್ನು ಒಳಗೊಂಡ ತಂಡ ಆರೋಪಿಯನ್ನು ಬಂಧಿಸಿದೆ.