ಜ.16ರಂದು ಬೀದರ್‌ನಲ್ಲಿ ಎಸ್‌ಬಿಐ ಎಟಿಎಂಗೆ ಹಣ ತುಂಬಲು ಬಂದಿದ್ದ ಇಬ್ಬರ ಮೇಲೆ ಲೂಟಿಕೋರರು ಗುಂಡು ಹಾರಿಸಿ 93 ಲಕ್ಷ ರು. ಕೊಳ್ಳೆ ಹೊಡೆದಿದ್ದರು. ಗುಂಡೇಟು ತಿಂದಿದ್ದ ಇಬ್ಬರ ಪೈಕಿ ಒಬ್ಬರು ಮೃತಪಟ್ಟಿದ್ದರು. ಬೀದರ್‌ನಲ್ಲಿ ಲೂಟಿ ಬಳಿಕ ಹೈದರಾಬಾದ್‌ನಲ್ಲಿ ಇವರು ಪತ್ತೆಯಾಗಿದ್ದರು. 

ಹೈದರಾಬಾದ್(ಜ.18): ಬೀದರ್‌ನಲ್ಲಿ ಎಟಿಎಂಗೆ ತುಂಬಲು ಒಯ್ಯುತ್ತಿದ್ದ 93 ಲಕ್ಷ ರು. ಹಣ ಲೂಟಿ ಮಾಡಿದಲ್ಲದೆ, ಆ ಹಣದ ಬಗ್ಗೆ ಕೇಳಿದ ಹೈದರಾಬಾದ್‌ನ ಸಾರಿಗೆ ಸಂಸ್ಥೆಯೊಂದರ ಮಾನೇಜರ್ ಮೇಲೆ ಗುಂಡು ಹಾರಿಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲು ತೆಲಂಗಾಣ ಪೊಲೀಸರು ತಂಡ ರಚಿಸಿ ಶೋಧ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಬಿಹಾರದವರು ಎಂದು ತಿಳಿದುಬಂದಿದೆ. 

ಜ.16ರಂದು ಬೀದರ್‌ನಲ್ಲಿ ಎಸ್‌ಬಿಐ ಎಟಿಎಂಗೆ ಹಣ ತುಂಬಲು ಬಂದಿದ್ದ ಇಬ್ಬರ ಮೇಲೆ ಲೂಟಿಕೋರರು ಗುಂಡು ಹಾರಿಸಿ 93 ಲಕ್ಷ ರು. ಕೊಳ್ಳೆ ಹೊಡೆದಿದ್ದರು. ಗುಂಡೇಟು ತಿಂದಿದ್ದ ಇಬ್ಬರ ಪೈಕಿ ಒಬ್ಬರು ಮೃತಪಟ್ಟಿದ್ದರು. ಬೀದರ್‌ನಲ್ಲಿ ಲೂಟಿ ಬಳಿಕ ಹೈದರಾಬಾದ್‌ನಲ್ಲಿ ಇವರು ಪತ್ತೆಯಾಗಿದ್ದರು. ಅಲ್ಲಿಂದ ಛತ್ತೀಸ್‌ಗಢದ ರಾಯ್‌ಪುರಕ್ಕೆ ಪರಾರಿ ಆಗಲು ಬಸ್ ಬುಕ್ ಮಾಡಿದರು. ಆಗ ಇವರ ಬ್ಯಾಗ್‌ನಲ್ಲಿನ ಹಣವನ್ನು ಸಾರಿಗೆ ಸಂಸ್ಥೆ ಮ್ಯಾನೇಜರ್ ಗಮನಿಸಿದಾಗ, ಅವರ ಮೇಲೂ ಗುಂಡು ಹಾರಿಸಿ ಪರಾರಿಯಾಗಿದ್ದರು. 

ಬೀದರ್‌ನಲ್ಲಿ ಎಟಿಎಂ ಸಿಬ್ಬಂದಿ ಮೇಲೆ ದಾಳಿ, ಲಕ್ಷ ಲಕ್ಷ ರೂಪಾಯಿ ದರೋಡೆ: ಇಬ್ಬರು ಸಾವು

ಇದರ ಬೆನ್ನಲ್ಲೇ ಬೀದರ್‌ ಪೊಲೀಸ್‌ ವರಿಷ್ಠಾಧಿಕಾರಿ ನೇತೃತ್ವದ ತಂಡ ಹೈದರಾಬಾದ್ ತಲುಪಿದ್ದು, ತನಿಖೆಯಲ್ಲಿ ಸಹಕರಿಸುತ್ತಿದೆ. ನಗರ ಪೊಲೀಸರು 10 ತಂಡ ರಚಿಸಿ ರಾಜ್ಯಾದ್ಯಂತ ಶೋಧ ನಡೆಸುತ್ತಿದ್ದಾರೆ. ಹೈದರಾಬಾದ್‌ನಲ್ಲಿ ಅಲರ್ಟ್ ಘೋಷಿಸಲಾಗಿದೆ. ಛತ್ತೀಸಗಢ ಪೊಲೀಸರಿಗೂ ಶಂಕಿತರ ಫೋಟೋಗಳನ್ನು ಒದಗಿಸಿ ಮಾಹಿತಿ ನೀಡಲಾಗಿದೆ.

ಶೀಘ್ರ ಆರೋಪಿಗಳ ಸೆರೆ ಬೀದರ್ ದರೋಡೆ ಪ್ರಕರಣದ ಇಬ್ಬರು ಆರೋಪಿಗಳ ಗುರುತು ಪತ್ತೆಯಾಗಿದ್ದು, ಶೀಘ್ರದಲ್ಲೇ ಬಂಧನ ಆಗಲಿದೆ. ಮೇಲ್ನೋಟಕ್ಕೆ ಆರೋಪಿಗಳು ಹಲವು ದಿನಗಳಿಂದ ಎಟಿಎಂಗೆ ಹಣ ತುಂಬುವ ಸಿಬ್ಬಂದಿಯನ್ನು ಹಿಂಬಾಲಿಸಿರುವಂತಿದೆ. ಈ ಬ್ಯಾಂಕ್ ಹೈದಾರಾಬಾದ್ ಕಂಪನಿಗೆ ಎಟಿಎಂ ಹಣ ತುಂಬುವ ಗುತ್ತಿಗೆ ಕೊಟ್ಟಿದೆ. ಸೆಕ್ಯುರಿಟಿ ಇಲ್ಲದ್ದನ್ನು ನೋಡಿಕೊಂಡು ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. 

ಎಟಿಎಂ ಏಜೆನ್ಸಿ ಜಾಗೃತೆ ವಹಿಸದ ಕಾರಣ ಈ ಘಟನೆ ಆಗಿದೆ: ಗೃಹ ಸಚಿವ ಪರಮೇಶ್ವರ್‌

ದರೋಡೆಕೋರರ ಸೆರೆಗೆ 8 ವಿಶೇಷ ತಂಡ: ಎಡಿಜಿಪಿ

ಬೀದರ್: ನಗರದಲ್ಲಿ ಗುರುವಾರ ನಡೆದ ಬ್ಯಾಂಕ್ ಹಣ ದರೋಡೆ ಪ್ರಕರಣದ ಆರೋಪಿಗಳ ಗುರುತು ಪತ್ತೆಯಾಗಿದ್ದು, ಮಹಾರಾಷ್ಟ್ರ, ತೆಲಂಗಾಣ ಪೊಲೀಸರ ಸಹಕಾರದಿಂದ ಶೀಘ್ರದಲ್ಲಿ ದುಷ್ಕರ್ಮಿಗಳನ್ನು ಬಂಧಿಸಲಾಗುವದು ಎಂದು ರಾಜ್ಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಅಪರಾಧ ವಿಭಾಗ) ಪಿ.ಹರಿಶೇಖರನ್ ತಿಳಿಸಿದರು. 

ಆರೋಪಿಗಳು ವೃತ್ತಿಪರ, ಅಪರಾಧಿಕ ಹಿನ್ನೆಲೆಯುಳ್ಳವರಾಗಿದ್ದಾರೆ. ಆರೋಪಿಗಳ ಪತ್ತೆಗೆ ಒಟ್ಟು 8 ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.