ಒಂದೇ ಮನೆಯಲ್ಲಿ ಸಹಜೀವನದಲ್ಲಿದ್ದ ವಿಚ್ಛೇದಿತ ಮಹಿಳೆ ಬಿಟ್ಟುಹೋಗಿದ್ದಕ್ಕೆ ಮನನೊಂದು ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 

ಬೆಂಗಳೂರು (ಫೆ.10): ಒಂದೇ ಮನೆಯಲ್ಲಿ ಸಹಜೀವನದಲ್ಲಿದ್ದ ವಿಚ್ಛೇದಿತ ಮಹಿಳೆ ಬಿಟ್ಟುಹೋಗಿದ್ದಕ್ಕೆ ಮನನೊಂದು ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಮಿಳುನಾಡು ಮೂಲದ ಅನ್ಬು ಅರಸನ್‌ (24) ಆತ್ಮಹತ್ಯೆ ಮಾಡಿಕೊಂಡವ. ಜ.18ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಮೃತನ ಪ್ರೇಯಸಿ ವಿದ್ಯಾ (24) ವಿರುದ್ಧ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Add Asianetnews Kannada as a Preferred SourcegooglePreferred

ಏನಿದು ಪ್ರಕರಣ?: ಆತ್ಮಹತ್ಯೆಗೆ ಶರಣಾದ ಅನ್ಬು ಅರಸನ್‌ ಪರಪ್ಪನ ಅಗ್ರಹಾರ ಸಮೀಪದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಪತಿಯಿಂದ ವಿಚ್ಛೇದನ ಪಡೆದಿದ್ದ ವಿದ್ಯಾ ಸಹ ಅನ್ಬು ಕಂಪನಿಯ ಪಕ್ಕದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಇಬ್ಬರಿಗೂ ಪರಸ್ಪರ ಪರಿಚಯವಾಗಿ ಬಳಿಕ ಆತ್ಮೀಯತೆ ಬೆಳೆದು ಪ್ರೀತಿಸಲು ಆರಂಭಿಸಿದ್ದರು. ಕಳೆದೊಂದು ವರ್ಷದಿಂದ ರಾಯಸಂದ್ರದ ಬಾಡಿಗೆ ಮನೆಯಲ್ಲಿ ಸಹಜೀವನದಲ್ಲಿ ಇದ್ದರು. ಈ ನಡುವೆ ವಿದ್ಯಾ ತನ್ನ ಸಹೋದ್ಯೋಗಿಗಳ ಜತೆಗೆ ಮಾತನಾಡಿದರೂ ಅನ್ಬು ಸಹಿಸುತ್ತಿರಲಿಲ್ಲ. ಬೇರೆಯವರ ಜತೆಗೆ ಮಾತನಾಡದಂತೆ ಎಚ್ಚರಿಕೆ ನೀಡುತ್ತಿದ್ದ. 

ಒಂದು ವೇಳೆ ಪರಿಚಿತ ವ್ಯಕ್ತಿಗಳೊಂದಿಗೆ ಮಾತನಾಡಿದರೆ ಅವರ ಎದುರೇ ಅವಮಾನಿಸುತ್ತಿದ್ದ. ಈತನ ವರ್ತನೆಯಿಂದ ಬೇಸರಗೊಂಡಿದ್ದ ವಿದ್ಯಾ, ಅನ್ಬುನಿಂದ ದೂರವಾಗಿದ್ದಳು. ಪ್ರೇಯಸಿ ದೂರವಾದ ಹಿನ್ನೆಲೆಯಲ್ಲಿ ಅನ್ಬು ಮನನೊಂದು ಜ.18ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನ ಪೋಷಕರು ನೀಡಿದ ದೂರಿನ ಮೇರೆಗೆ ವಿದ್ಯಾ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೆ ವಿಷಯಕ್ಕೆ ವರ್ತಕರ ಜೋಡಿ ಕೊಲೆ ಆಗಿದ್ದು: ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದ್ದೇನು?

ಸ್ಕೂಟರ್‌ ಡಿಕ್ಕಿಯಾಗಿ ಸವಾರ ಸಾವು: ರಸ್ತೆ ವಿಭಜಕಕ್ಕೆ ಸ್ಕೂಟರ್‌ ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ದೇವನಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆನೇಕಲ್ ತಾಲೂಕಿನ ಸರ್ಜಾಪುರ ಸಮೀಪದ ವಿ.ಕಲ್ಲಹಳ್ಳಿ ಗ್ರಾಮದ ಮಂಜುನಾಥ್ (38) ಮೃತ ವ್ಯಕ್ತಿ. ಟ್ರ್ಯಾಕ್ಟರ್ ಚಾಲಕರಾಗಿದ್ದ ಮಂಜುನಾಥ್‌, ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿಲ್ಲಿದ್ದ ತಮ್ಮ ಅತ್ತೆ ಮನೆಗೆ ಸ್ನೇಹಿತ ಗಣೇಶ್ ಜತೆ ಹೋಗಿದ್ದರು. ಅಲ್ಲಿಂದ ಎರಡು ಸ್ಕೂಟರ್‌ಗಳಲ್ಲಿ ಪ್ರತ್ಯೇಕವಾಗಿ ಗೆಳೆಯರು ಮನೆಗೆ ಮರಳುತ್ತಿದ್ದರು. ಮಾರ್ಗ ಮಧ್ಯೆ ರಾಣಿ ಕ್ರಾಸ್ ಬಳಿ ಸ್ಕೂಟರ್‌ ತಿರುವು ತೆಗೆದುಕೊಳ್ಳುವಾಗ ನಿಯಂತ್ರಣ ತಪ್ಪಿ ರಸ್ತೆ ವಿಭಜಕ್ಕೆ ಮಂಜುನಾಥ್ ಗುದ್ದಿಸಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.