ವಿರಾಟ್ ಕೊಹ್ಲಿ ನನ್ನ ಮೇಲೆ ಉಗುಳಿದ್ದರು: ಗಂಭೀರ ಆರೋಪ ಮಾಡಿದ ದಕ್ಷಿಣ ಆಫ್ರಿಕಾ ಮಾಜಿ ನಾಯಕ..!
ಪಾಡ್ಕಾಸ್ಟ್ವೊಂದರಲ್ಲಿ ದ.ಆಫ್ರಿಕಾದ ಮಾಜಿ ಆಲ್ರೌಂಡರ್ ಕ್ರಿಸ್ ಮೋರಿಸ್ ಹಾಗೂ ರಗ್ಬಿ ಆಟಗಾರ ಜೀನ್ ಡಿ ವಿಲಿಯರ್ಸ್ ಜೊತೆ ಮಾತನಾಡುತ್ತಾ, ಎಲ್ಗರ್ ಈ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಘಟನೆ ನಡೆದ 2 ವರ್ಷಗಳ ಬಳಿಕ ವಿರಾಟ್ ತಮ್ಮಲ್ಲಿ ಕ್ಷಮೆಯಾಚಿಸಿದ್ದರು. ಇದಕ್ಕೆ ಎಬಿ ಡಿ ವಿಲಿಯರ್ಸ್ ಕಾರಣ ಎಂದು ಎಲ್ಗರ್ ಹೇಳಿದ್ದಾರೆ.
![Virat Kohli spat at me South Africa great recalls lesser known first duel with ex India skipper kvn Virat Kohli spat at me South Africa great recalls lesser known first duel with ex India skipper kvn](https://static-ai.asianetnews.com/images/01hjrss47nsre6ftvdh82bxzaj/ind-vs-sa-test-7_363x203xt.jpg)
ಕೇಪ್ ಟೌನ್(ಜ.30): ಭಾರತದ ತಂಡ ದಿಗ್ಗಜ ಬ್ಯಾಟರ್ ವಿರಾಟ್ ಕೊಹ್ಲಿ ಟೆಸ್ಟ್ ಪಂದ್ಯವೊಂದರ ವೇಳೆ ತಮ್ಮ ಮೇಲೆ ಉಗುಳಿದ್ದರು ಎಂದು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಡೀನ್ ಎಲ್ಗರ್ ಆರೋಪಿಸಿದ್ದಾರೆ. ಈ ಘಟನೆ ಯಾವಾಗ ನಡೆಯಿತು ಎನ್ನುವುದನ್ನು ಎಲ್ಗರ್ ಬಹಿರಂಗಪಡಿಸದೆ ಇದ್ದರೂ, 2015ರ ಭಾರತ ಪ್ರವಾಸದ ವೇಳೆ ನಡೆದಿರಬಹುದು ಎಂದು ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಪಾಡ್ಕಾಸ್ಟ್ವೊಂದರಲ್ಲಿ ದ.ಆಫ್ರಿಕಾದ ಮಾಜಿ ಆಲ್ರೌಂಡರ್ ಕ್ರಿಸ್ ಮೋರಿಸ್ ಹಾಗೂ ರಗ್ಬಿ ಆಟಗಾರ ಜೀನ್ ಡಿ ವಿಲಿಯರ್ಸ್ ಜೊತೆ ಮಾತನಾಡುತ್ತಾ, ಎಲ್ಗರ್ ಈ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಘಟನೆ ನಡೆದ 2 ವರ್ಷಗಳ ಬಳಿಕ ವಿರಾಟ್ ತಮ್ಮಲ್ಲಿ ಕ್ಷಮೆಯಾಚಿಸಿದ್ದರು. ಇದಕ್ಕೆ ಎಬಿ ಡಿ ವಿಲಿಯರ್ಸ್ ಕಾರಣ ಎಂದು ಎಲ್ಗರ್ ಹೇಳಿದ್ದಾರೆ. ‘ಕೊಹ್ಲಿ ನನ್ನ ಮೇಲೆ ಉಗುಳಿದ ವಿಷಯ ಎಬಿಡಿಗೆ ತಿಳಿದಾಗ ಅವರು ಐಪಿಎಲ್ ವೇಳೆ, ಕೊಹ್ಲಿಯನ್ನು ಪ್ರಶ್ನಿಸಿದ್ದಾರೆ. ಬಳಿಕ ದ. ಆಫ್ರಿಕಾಕ್ಕೆ ಬಂದಿದ್ದ ವೇಳೆ ಕೊಹ್ಲಿ ನನ್ನ ಕ್ಷಮೆ ಕೋರಿದರು. ಆ ದಿನ ಇಬ್ಬರೂ ಬೆಳಗ್ಗಿನ ಜಾವ 3ರ ವರೆಗೂ ಕುಡಿದಿದ್ದೆವು’ ಎಂದು ಎಲ್ಗರ್ ಹೇಳಿದ್ದಾರೆ.
ಈ ಕ್ರಿಕೆಟಿಗನ ಬಳಿಯಿದೆ ₹1.5 ಲಕ್ಷ ಕೋಟಿ ಸಂಪತ್ತು..! ಈತನ ಪಿತ್ರಾರ್ಜಿತ ಆಸ್ತಿಯೇ 70 ಸಾವಿರ ಕೋಟಿ..!
ಎಲ್ಗರ್ ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಪಡೆದಿದ್ದರು. ಭಾರತ ವಿರುದ್ಧವೇ ತಮ್ಮ ಕೊನೆಯ ಪಂದ್ಯವನ್ನಾಡಿದ್ದ ಎಲ್ಗರ್ರ ಕ್ಯಾಚ್ ಪಡೆದಾಗ ಕೊಹ್ಲಿ ಸಂಭ್ರಮಿಸಿರಲಿಲ್ಲ. ಪಂದ್ಯ ಮುಗಿದ ಬಳಿಕ ವಿರಾಟ್, ತಮ್ಮ ಜೆರ್ಸಿವೊಂದನ್ನು ಎಲ್ಗರ್ಗೆ ಉಡುಗೊರೆಯಾಗಿ ನೀಡಿದ್ದರು.
ಅನುಚಿತ ವರ್ತನೆ ತೋರಿದ ಜಸ್ಪ್ರೀತ್ ಬುಮ್ರಾಗೆ ಐಸಿಸಿ ಛೀಮಾರಿ
ದುಬೈ: ಹೈದರಾಬಾದ್ನಲ್ಲಿ ಭಾನುವಾರ ಮುಕ್ತಾಯವಾದ ಇಂಗ್ಲೆಂಡ್ ವಿರುದ್ದದ ಮೊದಲ ಟೆಸ್ಟ್ನಲ್ಲಿ ಅನುಚಿತ ವರ್ತನೆ ತೋರಿದ್ದಕ್ಕೆ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾಗೆ ಐಸಿಸಿ ಛೀಮಾರಿ ಹಾಕಿದೆ. ಇದರ ಜತೆಗೆ ಒಂದು ಋಣಾತ್ಮಕ ಅಂಕಕ್ಕೂ ಬುಮ್ರಾ ಗುರಿಯಾಗಿದ್ದಾರೆ.
ಇಂಗ್ಲೆಂಡ್ ಎದುರಿನ ಎರಡನೇ ಇನಿಂಗ್ಸ್ನ 81ನೇ ಓವರ್ನಲ್ಲಿ ಬುಮ್ರಾ ಓಲಿ ಪೋಪ್ ರನ್ ಗಳಿಸಲು ಓಡುವಾಗ ಉದ್ದೇಶಪೂರ್ವಕವಾಗಿಯೇ ಅವರಿಗೆ ಅಡ್ಡಿಯನ್ನುಂಟು ಮಾಡಿದ್ದರು.
ಶುಭ್ಮನ್ ಗಿಲ್ಗೆ ಪೂಜಾರಗಿಂತ ಹೆಚ್ಚು ಆದ್ಯತೆ ಸಿಗುತ್ತಿದೆ: ಅನಿಲ್ ಕುಂಬ್ಳೆ
ಹೈದರಾಬಾದ್: ಭಾರತ ಕ್ರಿಕೆಟ್ ತಂಡದಲ್ಲಿ ಶುಭ್ಮನ್ ಗಿಲ್ಗೆ ಅನುಭವಿ ಬ್ಯಾಟರ್ ಚೇತೇಶ್ವರ್ ಪೂಜಾರಗಿಂತ ಹೆಚ್ಚಿನ ಆದ್ಯತೆ ಸಿಗುತ್ತಿದೆ ಎಂದು ಟೀಂ ಇಂಡಿಯಾ ಮಾಜಿ ನಾಯಕ ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.
ಶುಭ್ಮನ್ ಗಿಲ್ ಟೆಸ್ಟ್ ಕ್ರಿಕೆಟ್ನಲ್ಲಿ ಸತತ ವೈಫಲ್ಯ ಕಾಣುತ್ತಿರುವುದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅನಿಲ್ ಕುಂಬ್ಳೆ, ಶುಭ್ಮನ್ ಗಿಲ್, ಇಂಗ್ಲೆಂಡ್ ವಿರುದ್ದದ ಎರಡನೇ ಟೆಸ್ಟ್ನಲ್ಲಿ ಗಮನಾರ್ಹ ಪ್ರದರ್ಶನ ನೀಡಲೇಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ ಎಂದಿದ್ದಾರೆ. ಶುಭ್ಮನ್ ಗಿಲ್ ಕಳೆದ 11 ಟೆಸ್ಟ್ಗಳಲ್ಲಿ ಒಂದೇ ಒಂದು ಅರ್ಧಶತಕವನ್ನೂ ಬಾರಿಸಿಲ್ಲ.