ವಿನೋದ್‌ ಕಾಂಬ್ಳಿ ಕ್ರಿಕೆಟ್‌ ಜೀವನ 10 ವರ್ಷ ಕೂಡ ನಡೆಯಲಿಲ್ಲ..ಇದಕ್ಕೆ ಕಾರಣ ತಿಳಿಸಿದ್ರು ರಾಹುಲ್‌ ದ್ರಾವಿಡ್‌!

ವಿನೋದ್ ಕಾಂಬ್ಳಿ ಸಚಿನ್ ತೆಂಡೂಲ್ಕರ್ ಅವರ ಬಾಲ್ಯದ ಗೆಳೆಯ. ಕಾಂಬ್ಳಿ ಅದ್ಭುತ ಕ್ರಿಕೆಟ್ ಪ್ರತಿಭೆ ಹೊಂದಿದ್ದರೂ, ಒಂದು ದಶಕವೂ ಆಡಲು ಸಾಧ್ಯವಾಗಲಿಲ್ಲ.

 

Sachin Kambli Reunion Rahul Dravid Explains Kamblis Short Cricket Career

ಬೆಂಗಳೂರು (ಡಿ.11) ದಿಗ್ಗಜ ಬ್ಯಾಟ್ಸ್‌ಮನ್ ಸಚಿನ್ ತೆಂಡುಲ್ಕರ್ ಮತ್ತು ವಿನೋದ್ ಕಾಂಬ್ಳಿ ಭೇಟಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ. ಇದು ಹೊಸ ವಿಷಯವಲ್ಲ. ವಿನೋದ್‌ ಕಾಂಬ್ಳಿ ಸಾಮಾನ್ಯವಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅದು ವೈರಲ್‌ ಆಗುತ್ತದೆ. ಅದ್ಭುತ ಆಟಗಾರನಾಗಿದ್ದ ವಿನೋದ್‌ ಕಾಂಬ್ಳಿ ಕ್ರಿಕೆಟ್‌ ಜೀವನ ಸರಿಯಾಗಿ 10 ವರ್ಷ ಕೂಡ ನಡೆಯಲಿಲ್ಲ. ಇದಕ್ಕೆ ಕಾರಣವೇನು ಅನ್ನೋದರ ಬಗ್ಗೆ ಟೀಂ ಇಂಡಿಯಾದ ಮಾಜಿ ಆಟಗಾರ ಹಾಗೂ ಮಾಜಿ ಕೋಚ್ ರಾಹುಲ್ ದ್ರಾವಿಡ್ ಒಮ್ಮೆ ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಿದ್ದರು. ವಿಶ್ವಶ್ರೇಷ್ಠ ಸ್ಪಿನ್ನರ್‌ ಅನಿಲ್‌ ಕುಂಬ್ಳೆ ಅವರ ಮೊದಲ ಎಸೆತವನ್ನೇ ಸಿಕ್ಸರ್‌ಗಟ್ಟಿದ್ದ ವಿನೋದ್‌ ಕಾಂಬ್ಳಿ ಹಾಗೂ ಕ್ರಿಕೆಟ್‌ ದೇವರು ಸಚಿನ್‌ ತೆಂಡುಲ್ಕರ್‌ ನಡುವಿನ ವ್ಯತ್ಯಾಸ, ಇಬ್ಬರೂ ಇಂದು ಇರುವ ಸ್ಥಾನದ ಬಗ್ಗೆ ಬಹಳ ವರ್ಷಗಳ ಹಿಂದೆಯೇ ಅತ್ಯಂತ ಸ್ಪಷ್ಟವಾಗಿ ಮಾತನಾಡಿದ್ದರು.

ಕ್ರಿಕೆಟ್‌ಗೆ ಬಂದಾಗ ಸಂಚಲನ: ವಿನೋದ್ ಕಾಂಬ್ಳಿ, ಮಾಸ್ಟರ್ ಬ್ಲಾಸ್ಟರ್‌ ಸಚಿನ್‌ ಅವರ ಬಾಲ್ಯದ ಗೆಳೆಯ, ಕ್ರಿಕೆಟ್‌ಗೆ ಕಾಲಿಟ್ಟಾಗ ಸಂಚಲನ ಮೂಡಿಸಿದ್ದರು. ಅವರ ಆಟ ಎಲ್ಲರನ್ನೂ ಬೆರಗುಗೊಳಿಸಿತ್ತು. ಆದರೆ ಕ್ರಿಕೆಟ್‌ನಲ್ಲಿ ಅವರು ದೀರ್ಘಕಾಲ ಉಳಿಯಲು ಸಾಧ್ಯವಾಗಲಿಲ್ಲ. ಕಾಂಬ್ಳಿ 1991 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ, 104 ಏಕದಿನ ಮತ್ತು 17 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಭಾರತೀಯ ತಂಡದ 'ದಿ ವಾಲ್' ರಾಹುಲ್ ದ್ರಾವಿಡ್,  ವಿನೋದ್‌ ಕಾಂಬ್ಳಿ ಬ್ಯಾಟಿಂಗ್‌ನ ಅದ್ಭುತ ಪ್ರತಿಭೆ ಇದ್ದರೂ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೀರ್ಘಕಾಲ ಉಳಿಯಲು ಶ್ರೇಷ್ಠ ಕ್ರಿಕೆಟ್‌ ಜೀವನ ನಡೆಸಲು ಏನು ಮಾಡಬೇಕು ಅನ್ನೋದರ ಬಗ್ಗೆ ತಿಳಿದಿರಲಿಲ್ಲ ಎಂದಿದ್ದರು.

ಪ್ರತಿಭೆಯನ್ನು ನೋಡುವ ನಮ್ಮ ದೃಷ್ಟಿಕೋನ ಬೇರೆ: ರಾಹುಲ್ ದ್ರಾವಿಡ್ ವಿಡಿಯೋದಲ್ಲಿ, "ಪ್ರತಿಭೆಯನ್ನು ನೋಡುವ ನಮ್ಮ ದೃಷ್ಟಿಕೋನ ಬೇರೆಯಾಗಿದೆ. ನಾವು ಪ್ರತಿಭೆಯನ್ನು ಹೇಗೆ ನೋಡುತ್ತೇವೆ? ನಾನೂ ಈ ತಪ್ಪು ಮಾಡಿದ್ದೇನೆ. ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಚೆಂಡನ್ನು ಹೊಡೆಯುವ ಸಾಮರ್ಥ್ಯವನ್ನು ಪ್ರತಿಭೆ ಎಂದು ಭಾವಿಸುತ್ತೇವೆ. ಕ್ಲಾಸ್ ಮತ್ತು ಟೈಮಿಂಗ್ ಅನ್ನು ಮಾತ್ರ ಪ್ರತಿಭೆ ಎಂದು ಪರಿಗಣಿಸುತ್ತೇವೆ. ಆದರೆ ಧೈರ್ಯ, ಬದ್ಧತೆ, ಶಿಸ್ತು, ನಡವಳಿಕೆ ಕೂಡ ಪ್ರತಿಭೆಗಳು. ಪ್ರತಿಭೆಯನ್ನು ನಿರ್ಣಯಿಸುವಾಗ ಇವೆಲ್ಲವನ್ನೂ ಪರಿಗಣಿಸಬೇಕು" ಎಂದು ಹೇಳಿದ್ದಾರೆ.

 

ವಿನೋದ್‌ಗೆ ಚೆಂಡನ್ನು ಬಾರಿಸುವ ಪ್ರತಿಭೆ ಇತ್ತು ಬೇರೆ ಪ್ರತಿಭೆ ಇರಲಿಲ್ಲ: "ಅನೇಕ ಬ್ಯಾಟ್ಸ್‌ಮನ್‌ಗಳು ಚೆಂಡನ್ನು ಟೈಮ್ ಮಾಡಿ, ಬಲವಾಗಿ ಹೊಡೆಯಬಲ್ಲರು. ಸೌರವ್ ಗಂಗೂಲಿ ಚೆನ್ನಾಗಿ ಕವರ್ ಡ್ರೈವ್ ಹೊಡೆಯುತ್ತಿದ್ದರು. ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡುಲ್ಕರ್ ಕೂಡ. ಗೌತಮ್ ಗಂಭೀರ್ ಬಗ್ಗೆ ನೀವು ಚರ್ಚಿಸುವುದಿಲ್ಲ. ಗಂಭೀರ್ ಕಡಿಮೆ ಅದ್ಭುತ ಪ್ರತಿಭಾವಂತ ಆಟಗಾರ. ಆದರೆ, ಬ್ಯಾಟ್ಸ್‌ಮನ್‌ವೊಬ್ಬ ಚೆಂಡನ್ನು ಯಾವ ರೀತಿ ಬಾರಿಸುತ್ತಾನೆ ಅನ್ನೋದು ಮಾತ್ರವೇ ಪ್ರತಿಭೆಯಲ್ಲ. ಪ್ರತಿಭೆಯ ಇತರ ಅಂಶಗಳನ್ನು ನಾವು ಗಮನಿಸುವುದಿಲ್ಲ. ಪ್ರತಿಭಾವಂತರಿಗೆ ಅವಕಾಶ ಸಿಗಲಿಲ್ಲ ಎಂದು ಪ್ರಶ್ನಿಸುತ್ತೇವೆ. ಕಾಂಬ್ಳಿಯಲ್ಲಿ ವಿಶೇಷ ಪ್ರತಿಭೆ ಇರಲಿಲ್ಲ" ಎಂದಿದ್ದಾರೆ.

ತ್ಯಾಗಕ್ಕೆ ಸಿದ್ಧರಿರಲಿಲ್ಲ: "ಕಾಂಬ್ಳಿ ಒಳ್ಳೆಯ ವ್ಯಕ್ತಿ. ಚೆಂಡನ್ನು ಭರ್ಜರಿಯಾಗಿ ಬಾರಿಸುವ ಸಾಮರ್ಥ್ಯ ಅವರಿಗಿತ್ತು. ರಾಜ್‌ಕೋಟ್ ಪಂದ್ಯ ನನಗಿನ್ನೂ ನೆನಪಿದೆ. ಕಾಂಬ್ಳಿ ಶ್ರೀನಾಥ್ ಮತ್ತು ಕುಂಬ್ಳೆ ವಿರುದ್ಧ 150 ರನ್ ಗಳಿಸಿದ್ದರು. ಕುಂಬ್ಳೆ ಎಸೆದ ಮೊದಲ ಚೆಂಡನ್ನೇ ರಾಜ್‌ಕೋಟ್‌ ಸ್ಟೇಡಿಯಂನ ಹೊರಗಿದ್ದ ಕಲ್ಲಿನ ಗೋಡೆಗೆ ಬಾರಿಸಿದ್ದರು.ಅವರ ಹೊಡೆತ ನೋಡಿ ನಾವೆಲ್ಲಾ ಬೆರಗಾಗಿದ್ದೆವು. ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಲು ಏನು ತ್ಯಾಗ ಮಾಡಬೇಕೆಂದು ಅವರಿಗೆ ತಿಳಿದಿರಲಿಲ್ಲ" ಎಂದಿದ್ದಾರೆ.

 

Latest Videos
Follow Us:
Download App:
  • android
  • ios