ಪಡಿಕ್ಕಲ್ ಕನ್ನಡಾಭಿಮಾನ: ನಾವು ಕನ್ನಡಿಗರು, ಭಾರತಕ್ಕಾಗಿ ಆಡುವಾಗಲೂ ಕನ್ನಡದಲ್ಲೇ ಮಾತು!
* ಹೊಸ ವಿಡಿಯೋ ಬಿಡುಗಡೆ ಮಾಡಿದ ಆರ್ಸಿಬಿ
* ಬೆಂಗಳೂರು ತಂಡದ ಆಟಗಾರ ಪಡಿಕ್ಕಲ್ ಕನ್ನಡಾಭಿಮಾನ
* ನಾವು ಕನ್ನಡಿಗರೆಲ್ಲ, ಭಾರತಕ್ಕಾಗಿ ಆಡುವಾಗಲೂ ಕನ್ನಡದಲ್ಲಿಯೇ ಮಾತಾಡೋದು
* ಗೌತಮ್ ಇರಲಿ, ರಾಹುಲ್ ಸರ್ ಇರಲಿ, ನಾವೆಲ್ಲರೂ ಕನ್ನಡದಲ್ಲಿಯೇ ಮಾತನಾಡುತ್ತೇವೆ
ಬೆಂಗಳೂರು(ಸೆ.27): ಐಪಿಎಲ್(IPL) ಹಬ್ಬ ಮತ್ತೆ ಆರಂಭವಾಗಿದೆ. ಪ್ರತಿ ಬಾರಿ ಐಪಿಲ್ ಸೀಜನ್ ಆರಂಭವಾಗುವಾಗ ಆರ್ಸಿಬಿ(Royal Challengers Bangalore) ವಿಭಿನ್ನ ಕಾರಣಗಳಿಂದ ಸದ್ದು ಮಾಡುತ್ತಿರುತ್ತದೆ. ಅತ್ತ ಗ್ರೌಂಡ್ನಲ್ಲಿ ದಾಖಲೆಗಳನ್ನು ಬರೆಯುತ್ತಿದ್ದರೆ, ಇತ್ತ ಸೋಶಿಯಲ್ ಮೀಡಿಯಾ ವಿಡಿಯೋ ಮೂಲಕವೂ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗುತ್ತದೆ. ಅದರಲ್ಲೂ ಬೆಂಗಳೂರಿನ ಈ ತಂಡ ಕನ್ನಡದ ಪರ ಹಾಕುವ ವಿಡಿಯೋಗಳು ಭಾರೀ ವೈರಲ್ ಆಗುತ್ತವೆ. ಸದ್ಯ ಆರ್ಸಿಬಿ(RCB) ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತನ್ನ ತಂಡದ ಯುವ ಎಡಗೈ ಆರಂಭಿಕ ಬ್ಯಾಟ್ಸ್ಮನ್, ಕನ್ನಡಿಗ ದೇವದತ್ತ ಪಡಿಕ್ಕಲ್(Devdutt Padikkal) ಮಾತನಾಡುತ್ತಿರುವ ವಿಡಿಯೋ ಒಂದನ್ನು ಪೋಸ್ಟ್ ಮಾಡಿದೆ ಇದರಲ್ಲಿ ಪಡಿಕ್ಕಲ್ ಕ್ರಿಕೆಟ್ನಲ್ಲಿ ಕನ್ನಡ(kannada) ಬಳಕೆಯ ಬಗ್ಗೆ ಕೆಲ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.
ದೇವದತ್ ಪಡಿಕ್ಕಲ್ ಅವರ ವಿಡಿಯೋ ಪೋಸ್ಟ್ ಮಾಡಿರುವ ಆರ್ಸಿಬಿ ಶೀರ್ಷಿಕೆಯಲ್ಲಿ "ನಾವು ಕನ್ನಡಿಗರೆಲ್ಲ, ಭಾರತಕ್ಕಾಗಿ ಆಡುವಾಗಲೂ ಕನ್ನಡದಲ್ಲಿಯೇ ಮಾತಾಡೋದು - ಗೌತಮ್ ಇರಲಿ ರಾಹುಲ್ ಸಾರ್ ಇರಲಿ, ನಾವೆಲ್ಲರೂ ಕನ್ನಡದಲ್ಲಿಯೇ ಮಾತನಾಡುತ್ತೇವೆ." ಎಂದು ದೇವದತ್ ಪಡಿಕ್ಕಲ್ ಹೇಳಿರುವ ಮಾತುಗಳನ್ನು ಹೈಲೈಟ್ ಮಾಡಿದೆ.
ಇನ್ನು ವಿಡಿಯೋದಲ್ಲಿ ತನ್ನ ಕ್ರಿಕೆಟ್(Cricket) ವೃತ್ತಿ ಬದುಕಿನ ಬಗ್ಗೆ ಮಾತನಾಡಿದ ದೇವದತ್ ಪಡಿಕ್ಕಲ್ ತಾನು ಈ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದು ಹೇಗೆ? ಕುಟುಂಬ ಕೊಟ್ಟ ಸಹಕಾರ ಹೀಗೆ ಎಲ್ಲಾ ವಿಚಾರವನ್ನೂ ಕನ್ನಡದಲ್ಲೇ ವಿವರಿಸಿದ್ದಾರೆ. ತನ್ನ ಕುಟುಂಬ ತನ್ನ ಕ್ರಿಕೆಟ್ ವೃತ್ತಿ ಬದುಕಿಗೆ ಸಪೋರ್ಟ್ ಮಾಡಲೆಂದೇ ಬೆಂಗಳೂರಿಗೆ ಶಿಫ್ಟ್ ಆಗಿದೆ ಎಂದೂ ಈ ವೆಳೆ ಉಲ್ಲೇಖಿಸಿದ್ದಾರೆ.
ಕನ್ನಡದ ಬಗ್ಗೆ ಹೇಳಿದ್ದೇನು?
ಇನ್ನು ಕ್ರಿಕೆಟ್ ಮೈದಾನದಲ್ಲಿ ಕ್ರಿಕೆಟಿಗರು ಕನ್ನಡ ಮಾತನಾಡುವ ಬಗ್ಗೆ ವಿವರಿಸಿರುವ ಪಡಿಕ್ಕಲ್ 'ಕನ್ನಡಿಗರೆಲ್ಲರೂ ಕನ್ನಡದಲ್ಲೇಢ ಮಾತನಾಡುತ್ತಾರೆ. ನಾವು ಕನ್ನಡಿಗರೆಲ್ಲ, ಭಾರತಕ್ಕಾಗಿ ಆಡುವಾಗಲೂ ಕನ್ನಡದಲ್ಲಿಯೇ ಮಾತಾಡೋದು, ಗೌತಮ್ ಇರಲಿ, ರಾಹುಲ್ ಸರ್ ಇರಲಿ, ನಾವೆಲ್ಲರೂ ಕನ್ನಡದಲ್ಲಿಯೇ ಮಾತನಾಡುತ್ತೇವೆ. ಬೇರೆ ರಾಜ್ಯದ ಆಟಗಾರರೊಂದಿಗೆ ಆಂಗ್ಲ ಹಾಗೂ ಹಿಂದಿ ಭಾಷೆಯಲ್ಲಿ ಮಾತನಾಡುತ್ತೇವೆ. ಕನ್ನಡಿಗರೆಲ್ಲ ಕನ್ನಡದಲ್ಲೇ ಮಾತಾಡೋದು' ಎಂದಿದ್ದಾರೆ.
ಈ ವಿಚಾರ ಹೊರತುಪಡಿಸಿ ಪಡಿಕ್ಕಲ್ ಕ್ರಿಕೆಟ್ ಬದುಕಿನಲ್ಲಿ ತಮಗೆದುರಾದ ಸವಾಲು ಹಾಗೂ ಇನ್ನಿತರ ಕಡಲ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.
ಅದೇನಿದ್ದರೂ ಸದ್ಯ ಕನ್ನಡಿಗ ಸಂದರ್ಶನವನ್ನು ಕನ್ನಡದಲ್ಲೇ ನೀಡಿ, ಕನ್ನಡಾಭಿಮಾನ ಮೆರೆದಿರುವ ವಿಚಾರ ಕರ್ನಾಟಕದ ಜನತೆಯನ್ನು ಬಹಳಷ್ಟು ಖುಷಿಗೊಳಿಸಿದೆ.