Kohli vs Rohit: ಮೊದಲ ಬಾರಿಗೆ ತುಟಿಬಿಚ್ಚಿದ ಮಾಜಿ ಕೋಚ್ ರವಿಶಾಸ್ತ್ರಿ
ಕೊಹ್ಲಿ ವರ್ಸಸ್ ರೋಹಿತ್ ಚರ್ಚೆ ಬಗ್ಗೆ ತುಟಿಬಿಚ್ಚಿದ ರವಿಶಾಸ್ತ್ರಿ
ಕೊಹ್ಲಿ-ರೋಹಿತ್ ಚರ್ಚೆ ಅಪ್ರಸ್ತುತವೆಂದ ಮಾಜಿ ಕೋಚ್
ಇಬ್ಬರ ನಡುವೆ ಎಲ್ಲವೂ ಚೆನ್ನಾಗಿದೆ ಎಂದು ರವಿಶಾಸ್ತ್ರಿ
ನವದೆಹಲಿ(ಡಿ.04): ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ಎದುರು ಹೀನಾಯ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿತ್ತು. ಇದರ ಬೆನ್ನಲ್ಲೇ ಟೀಂ ಇಂಡಿಯಾ ನಾಯಕತ್ವದಲ್ಲಿ ಬದಲಾವಣೆಗಳನ್ನು ತರಬೇಕು ಎನ್ನುವ ಮಾತುಗಳು ಜೋರಾಗಿ ಕೇಳಿ ಬಂದಿದ್ದವು.
ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ಐಸಿಸಿ ಟೂರ್ನಿಯಲ್ಲಿ ಮೊದಲ ಬಾರಿಗೆ ಭಾರತ ತಂಡವನ್ನು ಮುನ್ನಡೆಸಿದ್ದ ರೋಹಿತ್ ಶರ್ಮಾ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಐಪಿಎಲ್ನ ಯಶಸ್ವಿ ನಾಯಕ ಎನಿಸಿಕೊಂಡಿರುವ ರೋಹಿತ್ ಶರ್ಮಾ, ಐಸಿಸಿ ಟೂರ್ನಿಯಲ್ಲಿ ಭಾರತಕ್ಕೆ ಟ್ರೋಫಿ ಗೆದ್ದುಕೊಡಬಹುದು ಎನ್ನುವ ನಿರೀಕ್ಷೆ ಕೂಡಾ ಹುಸಿಯಾಗಿದೆ. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಭಾರತ ಕಂಡ ಅತ್ಯುತ್ತಮ ಬ್ಯಾಟರ್ಗಳೆನಿಸಿಕೊಂಡಿದ್ದಾರೆ. ಇನ್ನು ವಿರಾಟ್ ಕೊಹ್ಲಿಯಿಂದ ನಾಯಕತ್ವವನ್ನು ಪಡೆದ ಬೆನ್ನಲ್ಲೇ ರೋಹಿತ್ ಶರ್ಮಾ ಹಾಗೂ ಕೊಹ್ಲಿ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಗಾಳಿಸುದ್ದಿಗಳು ಹರಿದಾಡಿದ್ದವು. ಈ ಎಲ್ಲಾ ವಿಚಾರಗಳ ಕುರಿತಂತೆ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ತುಟಿಬಿಚ್ಚಿದ್ದಾರೆ.
ಅಷ್ಟೊಂದು ಶಕ್ತಿ ಹಿಂದೆಂದೂ ಅನುಭವವಾಗಿರಲಿಲ್ಲ; ಪಾಕ್ ಎದುರಿನ ದಿಟ್ಟ ಹೋರಾಟ ಸ್ಮರಿಸಿಕೊಂಡ ವಿರಾಟ್ ಕೊಹ್ಲಿ..!
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ನಡುವೆ ಬಿನ್ನಾಭಿಪ್ರಾಯಗಳಿವೆ ಎನ್ನುವುದು ಸುಮ್ಮನೆ ಟೈಮ್ ಪಾಸ್ ಮಾಡುವುದಕ್ಕಾಗಿ ಅಷ್ಟೇ. ಈ ವಿಚಾರದ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ. ಅವರಿಬ್ಬರ ನಡುವೆ ಒಳ್ಳೆಯ ಹೊಂದಾಣಿಕೆ ಇದೆ. ಎಲ್ಲವೂ ಚೆನ್ನಾಗಿಯೇ ಇದೆ. ಆದರೆ ನೀವೆಲ್ಲ ಈ ಇಬ್ಬರ ಬಗ್ಗೆ ಕಿಚಿಡಿ(ಮಿಕ್ಸ್) ಮಾಡುತ್ತಿದ್ದೀರ. ಈ ವಿಚಾರದ ಬಗ್ಗೆ ನನಗೆ ಮಾತನಾಡಲು ಸಮಯವಿಲ್ಲ. ಇವೆಲ್ಲ ಸಣ್ಣಪುಟ್ಟ ವಿಚಾರಗಳು ಎಂದು ಯೂಟ್ಯೂಬ್ನಲ್ಲಿ ವಿಮಲ್ ಕುಮಾರ್ ಜತೆ ಮಾತನಾಡಿದ್ದಾರೆ.
2021ರಲ್ಲಿ ಯುಎಇನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಗ್ರೂಪ್ ಹಂತದಲ್ಲೇ ಹೊರಬೀಳುವ ಮೂಲಕ ನಿರಾಸೆ ಅನುಭವಿಸಿತ್ತು. ಇದರ ಬೆನ್ನಲ್ಲೇ ಕೊಹ್ಲಿ ಚುಟುಕು ಕ್ರಿಕೆಟ್ ತಂಡದ ನಾಯಕತ್ವಕ್ಕೆ ಗುಡ್ಬೈ ಹೇಳಿದ್ದರು. ಇನ್ನು ಇದಾದ ಬಳಿಕ ಸೀಮಿತ ಓವರ್ಗಳ ಕ್ರಿಕೆಟ್ಗೆ ಒಬ್ಬನೇ ನಾಯಕನಿರಲಿ ಎನ್ನುವ ಉದ್ದೇಶದಿಂದ ಬಿಸಿಸಿಐ, ಭಾರತ ಟಿ20 ಹಾಗೂ ಏಕದಿನ ತಂಡದ ನಾಯಕನಾಗಿ ರೋಹಿತ್ ಶರ್ಮಾಗೆ ನಾಯಕ ಪಟ್ಟ ಕಟ್ಟಲಾಯಿತು. ಇನ್ನು ದಕ್ಷಿಣ ಆಫ್ರಿಕಾ ಎದುರಿನ ಸರಣಿ ಸೋಲಿನ ಬೆನ್ನಲ್ಲೇ ಟೆಸ್ಟ್ ತಂಡದ ನಾಯಕತ್ವದಿಂದಲೂ ವಿರಾಟ್ ಕೊಹ್ಲಿ ಕೆಳಗಿಳಿದಿದ್ದರು.