ಇಂಗ್ಲೆಂಡ್ನಲ್ಲಿ ಸುನಿಲ್ ಗವಾಸ್ಕರ್ ಮೈದಾನ ಉದ್ಘಾಟನೆ: ಭಾವನಾತ್ಮಕ ಕ್ಷಣ ಮೆಲುಕು ಹಾಕಿದ ಸನ್ನಿ..!
ಸುನಿಲ್ ಗವಾಸ್ಕರ್ ಸಾಧನೆಗೆ ಮತ್ತೊಂದು ಗರಿ
ಲೀಸೆಸ್ಟರ್ನಲ್ಲಿ ಕ್ರಿಕೆಟ್ ಮೈದಾನ ಉದ್ಘಾಟಿಸಿದ ಗವಾಸ್ಕರ್
ಕ್ರಿಕೆಟ್ ಮೈದಾನ ಉದ್ಘಾಟಿಸಿ ಸಂತಸ ಹಂಚಿಕೊಂಡ ಸನ್ನಿ
ಲೀಸೆಸ್ಟರ್(ಜು.26): ವಿಶ್ವ ಕ್ರಿಕೆಟ್ನ ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಸುನಿಲ್ ಗವಾಸ್ಕರ್, ಅಸಂಖ್ಯಾತ ಯುವ ಕ್ರಿಕೆಟಿಗರ ಪಾಲಿಗೆ ಸ್ಪೂರ್ತಿಯ ಚಿಲುಮೆ ಎನಿಸಿಕೊಂಡಿದ್ದಾರೆ. ಭಾರತ ಕ್ರಿಕೆಟ್ನ ಮಾಜಿ ನಾಯಕ ಗವಾಸ್ಕರ್, ಕ್ರಿಕೆಟ್ ಜಗತ್ತು ಕಂಡಂತಹ ಅತ್ಯುತ್ತಮ ಕೌಶಲ್ಯಯುತ ಬ್ಯಾಟರ್ ಎನಿಸಿಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ 10,000 ರನ್ ಬಾರಿಸಿದ ಜಗತ್ತಿನ ಮೊದಲ ಬ್ಯಾಟರ್ ಎನ್ನುವ ಹಿರಿಮೆ ಕೂಡಾ ಸುನಿಲ್ ಗವಾಸ್ಕರ್ ಅವರದ್ದು.
70 ಹಾಗೂ 80ರ ದಶಕದಲ್ಲಿ ವೆಸ್ಟ್ ಇಂಡೀಸ್ ತಂಡವು ಬಲಾಢ್ಯ ತಂಡವಾಗಿ ಗುರುತಿಸಿಕೊಂಡಿತ್ತು. ಆ ಕಾಲಘಟ್ಟದಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ಜಗತ್ತಿನಲ್ಲಿ ಮೆರೆದಾಡುತ್ತಿದ್ದ ಸಂದರ್ಭದಲ್ಲಿ ಕೆರಿಬಿಯನ್ ಬೌಲರ್ಗಳೆದುರೇ ಗವಾಸ್ಕರ್ ತಮ್ಮ ಕಲಾತ್ಮಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು. 1983ರಲ್ಲಿ ಭಾರತ ತಂಡವು ಚೊಚ್ಚಲ ಏಕದಿನ ವಿಶ್ವಕಪ್ ಜಯಿಸಿದ ಸಂದರ್ಭದಲ್ಲಿ, ಸುನಿಲ್ ಗವಾಸ್ಕರ್ ಟೀಂ ಇಂಡಿಯಾ ಸದಸ್ಯರಾಗಿದ್ದರು. ಇದೀಗ ಟೀಂ ಇಂಡಿಯಾ ದಿಗ್ಗಜ ಆಟಗಾರನ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದ್ದು, ಲೀಸೆಸ್ಟರ್ನಲ್ಲಿ ಸುನಿಲ್ ಗವಾಸ್ಕರ್ ಅವರ ಹೆಸರಿನಲ್ಲಿ ಹೊಸದೊಂದು ಕ್ರಿಕೆಟ್ ಮೈದಾನ ಉದ್ಘಾಟನೆಯಾಗಿದೆ.
ಲೀಸೆಸ್ಟರ್ನಲ್ಲಿನ ಮೈದಾನಕ್ಕೆ ನನ್ನ ಹೆಸರಿಟ್ಟಿರುವುದು ತುಂಬಾ ಸಂತೋಷವಾಗುತ್ತಿದೆ. ನನಗೆ ಸಿಕ್ಕ ಗೌರವ ಇದು ಕೇವಲ ನನಗೆ ಮಾತ್ರ ಸಲ್ಲುವಂತಹದ್ದಲ್ಲ, ಬದಲಾಗಿ ಟೆನಿಸ್ ಬಾಲ್ನಿಂದ ಹಿಡಿದು ಅಂತರರಾಷ್ಟ್ರೀಯ ಕ್ರಿಕೆಟ್ವರೆಗೆ ನನ್ನ ಜತೆ ಆಡಿದ ಎಲ್ಲ ಸಹ ಆಟಗಾರರಿಗೂ, ನನ್ನ ಕುಟುಂಬಕ್ಕೆ ಹಾಗೂ ನನ್ನಲ್ಲಾ ಅಭಿಮಾನಿಗಳಿಗೆ ಹಾಗೂ ಪ್ರೇಕ್ಷಕರಿಗೆ ಸಲ್ಲುವಂತಹದ್ದು. ನನ್ನ ಈ ಪಯಣವನ್ನು ಮತ್ತಷ್ಟು ಸ್ಮರಣೀಯವಾಗಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಸುನಿಲ್ ಗವಾಸ್ಕರ್ ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗನ ಹೆಸರು..!
ಲೀಸೆಸ್ಟರ್ನಲ್ಲಿ ಸ್ಟೇಡಿಯಂ ನಿರ್ಮಾಣವಾಗುವುದರ ಹಿಂದೆ ಅಲ್ಲಿನ ಭಾರತೀಯ ಮೂಲದ ಸಂಸದ ಕೇಥ್ ವ್ಯಾಜ್ ಅವರ ಪರಿಶ್ರಮ ಸಾಕಷ್ಟಿದೆ. ಯುನೈಟೆಡ್ ಕಿಂಗ್ಡಮ್ನ ಪಾರ್ಲಿಮೆಂಟ್ನಲ್ಲಿ ಕಳೆದ 32 ವರ್ಷಗಳಿಂದ ಕೇಥ್ ವ್ಯಾಜ್ ಸಂಸದರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ಈ ಸ್ಟೇಡಿಯಂಗೆ ಸುನಿಲ್ ಗವಾಸ್ಕರ್ ಅವರ ಹೆಸರಿನ್ನಿಡಲು ಅವರು ಒಪ್ಪಿಕೊಂಡಿದ್ದನ್ನು ಕೇಳಿ ನಾವಂತೂ ರೋಮಾಂಚಿತರಾಗಿದ್ದೇವೆ. ಅವರೊಬ್ಬ ಜೀವಂತ ದಂತಕಥೆ. ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನವನ್ನು ಕೇವಲ ಭಾರತೀಯರಷ್ಟೇ ಅಲ್ಲದೇ ಇಡೀ ಕ್ರಿಕೆಟ್ ಜಗತ್ತೇ ಎಂಜಾಯ್ ಮಾಡಿದೆ. ಅವರು ಕೇವಲ ಲಿಟ್ಲ್ ಮಾಸ್ಟರ್ ಅಲ್ಲ ಬದಲಾಗಿ ಇಡೀ ಕ್ರಿಕೆಟ್ಗೆ ಮಾಸ್ಟರ್ ಎಂದು ವ್ಯಾಜ್ ಹೇಳಿದ್ದರು.