Ranji Trophy Final: Karnataka vs J&K in Hubballi; Batters Shine ಹುಬ್ಬಳ್ಳಿಯಲ್ಲಿ ನಡೆಯಲಿರುವ ರಣಜಿ ಟ್ರೋಫಿ ಫೈನಲ್‌ನಲ್ಲಿ ಕರ್ನಾಟಕವು ಜಮ್ಮು ಮತ್ತು ಕಾಶ್ಮೀರವನ್ನು ಎದುರಿಸಲಿದೆ. ಪಡಿಕ್ಕಲ್, ರಾಹುಲ್ ಮತ್ತು ರವಿ ಸ್ಮರಣ್ ಅವರಂತಹ ಬಲಿಷ್ಠ ಬ್ಯಾಟ್ಸ್‌ಮನ್‌ಗಳ ಬಲ ರಾಜ್ಯ ತಂಡಕ್ಕಿದೆ.

ಣಜಿ ಟ್ರೋಫಿ ಫೈನಲ್‌ ಹುಬ್ಬಳ್ಳಿಯಲ್ಲಿ ಆರಂಭವಾಗಿದೆ. ರಣಜಿ ಟ್ರೋಫಿ ಫೈನಲ್‌ನಲ್ಲಿ ಕರ್ನಾಟಕವನ್ನು ಕರ್ನಾಟಕದಲ್ಲೇ ಮಣಿಸಲು ಜಮ್ಮು ಕಾಶ್ಮೀರ ಉತ್ಸುಕವಾಗಿದ್ದರೆ, ಜಮ್ಮು ಕಾಶ್ಮೀರವನ್ನು ಮಣಿಸಿ ತವರಿನಲ್ಲಿಯೇ ಟ್ರೋಫಿ ಎತ್ತುವ ವಿಶ್ವಾಸದಲ್ಲಿ ಕರ್ನಾಟಕ ತಂಡವಿದೆ. ಈ ಋತುವಿನಲ್ಲಿ ಕರ್ನಾಟಕ ತಂಡ ಎರಡು ಬಾರಿ ರಣಜಿ ಟ್ರೋಫಿಯಿಂದ ಹೊರಗುಳಿಯುವ ಅಂಚಿನಲ್ಲಿತ್ತು. ಎದುರಾಳಿ ತಂಡ ಕರ್ನಾಟಕ ತಂಡದ ಪಾಲಿಗೆ ಅಸಾಧ್ಯ ಎನ್ನುವಂತೆ ಕಾಣುತ್ತಿದ್ದ ಗುರಿಯನ್ನು ನೀಡಿದ್ದವು. ಆತಿಥೇಯ ಪಂಜಾಬ್‌ ವಿರುದ್ಧ ಗೆಲ್ಲಲೇಬೇಕಾಗಿದ್ದ ಕೊನೆಯ ಲೀಗ್‌ ಪಂದ್ಯದಲ್ಲಿ ಕರ್ನಾಟಕ ಸೀಮಿತ ಸಮಯದಲ್ಲಿ 250 ರನ್‌ಗಳ ಗುರಿಯನ್ನು ಸಾಧಿಸಬೇಕಿತ್ತು. ಇದನ್ನು ಯಶಸ್ವಿಯಾಗಿ ಸಾಧಿಸುವ ಮೂಲಕ ಸೌರಾಷ್ಟ್ರ ತಂಡವನ್ನು ಹೊರಹಾಕಿ ಕ್ವಾರ್ಟರ್‌ ಫೈನಲ್‌ ಸ್ಥಾನ ಪಡೆದುಕೊಂಡಿತ್ತು.

ಅದಾದ ಬಳಿಕ ಮುಂಬೈ ವಿರುದ್ಧ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲೂ ಇದೇ ರೀತಿಯಾಗಿತ್ತು. ಸವಾಲಿನ ಪಿಚ್‌ನಲ್ಲಿ ನಾಲ್ಕನೇ ಇನ್ನಿಂಗ್ಸ್‌ನಲ್ಲಿ 325 ರನ್‌ ಚೇಸಿಂಗ್‌ ಮಾಡುವ ಸವಾಲಿತ್ತು. ಎರಡೂ ಬಾರಿಯೂ ಕರ್ನಾಟಕಕ್ಕೆ ಕೈಹಿಡಿದ್ದು ಬ್ಯಾಟ್ಸ್‌ಮನ್‌ಗಳು. ಈಗ ಈ ಬ್ಯಾಟ್ಸ್‌ಮನ್‌ಗಳನ್ನು ಟೀಮ್‌ ಇಂಡಿಯಾ ಸೆಲೆಕ್ಟರ್‌ಳು ಕೈಹಿಡಿಯುತ್ತಾರಾ ಎನ್ನುವ ಪ್ರಶ್ನೆಗಳಿವೆ.

ಪಂಜಾಬ್ ವಿರುದ್ಧದ ಪಂದ್ಯದಲ್ಲಿ ನಾಯಕ ದೇವದತ್ ಪಡಿಕ್ಕಲ್ ಕೇವಲ 85 ಎಸೆತಗಳಲ್ಲಿ ಅಜೇಯ 120 ರನ್ ಸಿಡಿಸಿ, 250 ರನ್‌ಗಳ ಗುರಿಯನ್ನು ಕೇವಲ 27.5 ಓವರ್‌ಗಳಲ್ಲಿ ತಲುಪಲು ನೆರವಾಗಿದ್ದರು. ಮುಂಬೈ ವಿರುದ್ಧದ ಗೆಲುವಿನಲ್ಲಿ ಕೆ.ಎಲ್. ರಾಹುಲ್ ಅವರ ಭರ್ಜರಿ ಶತಕ ಪ್ರಮುಖ ಪಾತ್ರ ವಹಿಸಿತ್ತು. ಇನ್ನು ಸೆಮಿಫೈನಲ್‌ನಲ್ಲಿ ಉತ್ತರಾಖಂಡ್ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 736 ರನ್ ಪೇರಿಸುವ ಮೂಲಕ ಕರ್ನಾಟಕ ಹಿಡಿತ ಸಾಧಿಸಿತ್ತು.

ಘಾತಕ ಬ್ಯಾಟಿಂಗ್ ಲೈನ್-ಅಪ್

ಹುಬ್ಬಳ್ಳಿಯಲ್ಲಿ ಆರಂಭವಾಗಿರುವ ಜಮ್ಮು ಮತ್ತು ಕಾಶ್ಮೀರ ವಿರುದ್ಧದ ಫೈನಲ್ ಪಂದ್ಯಕ್ಕೂ ಮುನ್ನ ಕರ್ನಾಟಕ ತಂಡದ ಬ್ಯಾಟಿಂಗ್ ಲೈನ್-ಅಪ್ ಎದುರಾಳಿಗಳಿಗೆ ನಡುಕ ಹುಟ್ಟಿಸುವಂತಿದೆ.

ರವಿ ಸ್ಮರಣ್: ಈ ಋತುವಿನ ರಣಜಿ ಟ್ರೋಫಿಯ ಅತಿ ಹೆಚ್ಚು ರನ್ ಬಾರಿಸಿರುವ ಆಟಗಾರ (8 ಪಂದ್ಯಗಳಲ್ಲಿ 950 ರನ್, ಸರಾಸರಿ 95.00). ಸೆಮಿಫೈನಲ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಹಾಗೂ ಮುಂಬೈ ವಿರುದ್ಧ ಅಜೇಯ 83 ರನ್ ಬಾರಿಸಿದ್ದರು.

ಕರುಣ್ ನಾಯರ್ ಸರಾಸರಿ 63.54 ರಂತೆ 699 ರನ್ ಬಾರಿಸಿದ್ದರೆ, ನಾಯಕ ದೇವದತ್‌ ಪಡಿಕ್ಕಲ್‌ ಕೇವಲ 5 ಪಂದ್ಯಗಳಲ್ಲಿ 66.50ರ ಸರಾಸರಿಯಲ್ಲಿ 532 ರನ್‌ ಬಾರಿಸಿದ್ದಾರೆ. ಮಯಾಂಕ್ ಅಗರ್ವಾಲ್ 518 ರನ್ ಸಿಡಿಸಿದ್ದರೆ. ಕೆ.ಎಲ್. ರಾಹುಲ್ ಕೇವಲ 3 ಇನಿಂಗ್ಸ್‌ಗಳಲ್ಲಿ 2 ಶತಕಗಳ ಸಹಿತ 457 ರನ್ ಬಾರಿಸಿದ್ದಾರೆ.

ಭವಿಷ್ಯದ ಬ್ಯಾಟ್ಸ್‌ಮನ್‌ ರವಿ ಸ್ಮರಣ್‌

22 ವರ್ಷದ ರವಿ ಸ್ಮರಣ್ ಕರ್ನಾಟಕದ ಮುಂದಿನ ಪ್ರಮುಖ ಆಟಗಾರ ಎಂದು ಗುರುತಿಸಲ್ಪಟ್ಟಿದ್ದಾರೆ. "ಅವರು ಒಮ್ಮೆ ಕ್ರೀಸ್‌ಗೆ ಅಂಟಿಕೊಂಡರೆ ದೊಡ್ಡ ಮೊತ್ತವನ್ನೇ ಕಲೆಹಾಕುತ್ತಾರೆ. ಈಗಾಗಲೇ ಎರಡು ದ್ವಿಶತಕ ಬಾರಿಸಿರುವ ಅವರಲ್ಲಿ ಪಂದ್ಯದ ಗತಿಯನ್ನು ಅರ್ಥೈಸಿಕೊಳ್ಳುವ ಉತ್ತಮ ತಾಳ್ಮೆಯಿದೆ," ಎಂದು ಕೋಚ್‌ ಕರ್ನಾಟಕ ಯರೇಗೌಡ ಶ್ಲಾಘಿಸಿದ್ದಾರೆ. ಸ್ಮರಣ್ ಅವರ ಬಾಲ್ಯದ ತರಬೇತುದಾರ ಸೈಯದ್ ಝಬೀವುಲ್ಲಾ ಅವರ ಪ್ರಕಾರ, "ತಂಡದ ಗೆಲುವಿಗೆ ನೆರವಾಗುವ 30 ರನ್ ಕೂಡ ಶತಕಕ್ಕಿಂತ ಮೌಲ್ಯಯುತವಾದುದು. ಸ್ಮರಣ್ ಅವರ ಆಟ ಯಾವಾಗಲೂ ತಂಡದ ಹಿತದೃಷ್ಟಿಯಿಂದ ಕೂಡಿರುತ್ತದೆ' ಎಂದಿದ್ದಾರೆ.

ನಾಯಕನಾಗಿ ಪಡಿಕ್ಕಲ್ ಮ್ಯಾಜಿಕ್

ಲೀಗ್ ಹಂತದಲ್ಲಿ ಹೊರಬೀಳುವ ಹಂತದಲ್ಲಿದ್ದ ಕರ್ನಾಟಕ ತಂಡಕ್ಕೆ ಪಡಿಕ್ಕಲ್ ನಾಯಕತ್ವ ಬದಲಾವಣೆ ನೀಡಿತು. ಕಳೆದ ಮೂರು ಪಂದ್ಯಗಳಲ್ಲಿ ಅವರು ಅಜೇಯ 120 ಮತ್ತು 232 ರನ್ ಗಳಿಸಿದ್ದಾರೆ. ಟಿ20 ಕ್ರಿಕೆಟ್‌ನಿಂದಾಗಿ ಬದಲಾಗಿದ್ದ ಅವರ ಬ್ಯಾಟಿಂಗ್ ತಂತ್ರವನ್ನು ರೆಡ್-ಬಾಲ್ ಕ್ರಿಕೆಟ್‌ಗೆ ಸರಿಹೊಂದುವಂತೆ ಬದಲಿಸಿಕೊಂಡಿರುವುದು ಈಗ ಯಶಸ್ಸು ನೀಡುತ್ತಿದೆ ಎಂದು ಅವರ ತರಬೇತುದಾರ ನಾಸಿರುದ್ದೀನ್ ಹೇಳಿದ್ದಾರೆ.

ರಾಜ್ಯ ತಂಡಕ್ಕೆ ರಾಹುಲ್ ಗೌರವ

ಅಂತರಾಷ್ಟ್ರೀಯ ಕ್ರಿಕೆಟಿಗರು ದೇಶೀಯ ಕ್ರಿಕೆಟ್ ಆಡುವುದು ಕಡ್ಡಾಯವಾದರೂ, ರಾಹುಲ್ ಅದನ್ನು ಪೂರ್ಣ ಮನಸ್ಸಿನಿಂದ ಮಾಡುತ್ತಿದ್ದಾರೆ. "ರಾಹುಲ್ ಕರ್ನಾಟಕ ತಂಡಕ್ಕೆ ಬಂದಾಗಲೆಲ್ಲಾ ಗೆಲುವಿನ ಉದ್ದೇಶದಿಂದಲೇ ಆಡುತ್ತಾರೆ. ಅವರ ಉಪಸ್ಥಿತಿ ತಂಡದ ಯುವ ಆಟಗಾರರಿಗೆ ದೊಡ್ಡ ಸ್ಫೂರ್ತಿ," ಎಂದು ಯರೇ ಗೌಡ ಅಭಿಪ್ರಾಯಪಟ್ಟಿದ್ದಾರೆ. ಈಗ ಎಲ್ಲರ ಕಣ್ಣು ಜಮ್ಮು ಮತ್ತು ಕಾಶ್ಮೀರದ ವೇಗಿಗಳು ಹಾಗೂ ಕರ್ನಾಟಕದ ಬ್ಯಾಟರ್‌ಗಳ ನಡುವಿನ ಹಣಾಹಣಿಯ ಮೇಲಿದೆ.