ಸತತ ಗಲುವಿನ ಮೂಲಕ ಆರ್‌ಸಿಬಿ ಇದೀಗ ಪ್ಲೇ ಆಫ್ ಪ್ರವೇಶದ ವಿಶ್ವಾಸದಲ್ಲಿದೆ. ಸಿಎಸ್‌ಕೆ ವಿರುದ್ಧ ಅಂತಿಮ ಲೀಗ್ ಪಂದ್ಯ ಗೆದ್ದು ಇತಿಹಾಸ ರಚಿಸಲು ಸಜ್ಜಾಗಿದೆ. ಆದರೆ ಸಿಎಸ್‌ಕೆ ಸೇರಿದಂತೆ ಇನ್ನುಳಿದ ಪಂದ್ಯಕ್ಕೆ ವಿಲ್ಸ್ ಜ್ಯಾಕ್ಸ್, ರೀಸ್ ಟಾಪ್ಲೆ ಸೇರಿದಂತೆ ಕೆಲ ಆಟಗಾರರು ಅಲಭ್ಯರಾಗಿದ್ದಾರೆ. 

ಬೆಂಗಳೂರು(ಮೇ.13) ಐಪಿಎಲ್ ಟೂರ್ನಿಯಲ್ಲಿ ಪ್ಲೇ ಆಫ್ ಸ್ಥಾನಕ್ಕೇರಲು ಆರ್‌ಸಿಬಿ ತುದಿಗಾಲಲ್ಲಿ ನಿಂತಿದೆ. ಆದರೆ ಸಿಎಸ್‌ಕೆ ವಿರುದ್ಧದ ಪಂದ್ಯವನ್ನು ಉತ್ತಮ ರನ್‌ರೇಟ್ ಮೂಲಕ ಗೆದ್ದು ಪ್ಲೇ ಆಫ್ ಪ್ರವೇಶ ಮಾಡಬೇಕಿದೆ. ಸತತ ಗೆಲುವಿನ ಮೂಲಕ ಆರ್‌ಸಿಬಿ, ಚೆನ್ನೈ ವಿರುದ್ದ ಗೆಲುವಿನ ಫೇವರಿಟ್ ಎನಿಸಿಕೊಂಡಿದೆ. ಆದರೆ ಸಿಎಸ್‌ಕೆ ಪಂದ್ಯಕ್ಕೂ ಮೊದಲೇ ಆರ್‌ಸಿಬಿಗೆ ಆಘಾತ ಎದುರಾಗಿದೆ. ಇನ್ನುಳಿದ ಆರ್‌ಸಿಬಿ ಪಂದ್ಯಕ್ಕೆ ತಂಡದ ಸ್ಟಾರ್ ಆಟಗಾರರಾದ ವಿಲ್ ಜ್ಯಾಕ್ಸ್, ರೀಸ್ ಟಾಪ್ಲೆ ಅಲಭ್ಯರಾಗಿದ್ದಾರೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುವ ಇಂಗ್ಲೆಂಡ್ ತಂಡದ ಆಟಗಾರರಿಗೆ ಬುಲಾವ್ ನೀಡಿದ ಹಿನ್ನಲೆಯಲ್ಲಿ ಇಬ್ಬರು ತವರಿಗೆ ಮರಳಿದ್ದಾರೆ.

ಇಂಗ್ಲೆಂಡ್ ತಂಡದ ಕರ್ತವ್ಯದ ಕಾರಣ ರೀಸ್ ಟಾಪ್ಲೆ, ವಿಲ್ ಜ್ಯಾಕ್ಸ್ ಆರ್‌ಸಿಬಿ ತಂಡ ತೊರೆದಿದ್ದಾರೆ. ಇದರಿಂದ ಮುಂದಿನ ಪಂದ್ಯದಲ್ಲಿ ಆರ್‌ಸಿಬಿ ಅನಿವಾರ್ಯವಾಗಿ ತಂಡದ ಪ್ಲೇಯಿಂಗ್ 11 ಕಾಂಬಿನೇಷನ್ ಬದಲಾಯಿಸಬೇಕಿದೆ. ಸದ್ಯದ ಕಾಂಬಿನೇಷನ್ ಅತ್ಯುತ್ತಮವಾಗಿದ್ದು, ಗೆಲುವಿನ ಸಂಭ್ರಮಕ್ಕೆ ಕಾರಣವಾಗಿತ್ತು. ಆದರೆ ಇದೀಗ ಬದಲಾವಣೆ ತಂಡದ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಆರ್‌ಸಿಬಿ ಸತತ ಸೋಲಿನ ಬಳಿಕ ತಂಡದಲ್ಲಿ ಮಹತ್ತರ ಬದಲಾವಣೆ ಮಾಡಿಕೊಂಡು ಕಣಕ್ಕಿಳಿದಿತ್ತು. ಇದರಿಂದ ಆರ್‌ಸಿಬಿ ಸತತ ಗೆಲುವು ಕಂಡಿತ್ತು. ಈ ಗೆಲುವಿನಲ್ಲಿ ವಿಲ್ ಜ್ಯಾಕ್ಸ್ ಪಾತ್ರ ಪ್ರಮುಖವಾಗಿತ್ತು. ಇದೀಗ ವಿಲ್ ಜ್ಯಾಕ್ಸ್ ಸೇವೆ ಆರ್‌ಸಿಬಿಗೆ ಅಲಭ್ಯವಾಗಿದೆ. ಇದು ತೀವ್ರ ಹೊಡೆತ ನೀಡುವ ಸಾಧ್ಯತೆ ಇದೆ. 

ಆರ್‌ಸಿಬಿ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಬೆಂಗಳೂರಿನ ಚಿನಸ್ವಾಮಿ ಕ್ರೀಡಾಂಗಣದಲ್ಲಿ ಹೋರಾಟ ನಡೆಲಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ಉತ್ತಮ ರನ್‌ರೇಟ್‌ನೊಂದಿಗೆ ಗೆಲ್ಲಬೇಕು. ಹೀಗಾದರೆ ಮಾತ್ರ ಪ್ಲೇ ಆಫ್ ಅವಕಾಶ. ಸದ್ಯ ಆರ್‌ಸಿಬಿ ಫಾರ್ಮ್ ನೋಡಿದರೆ ಗೆಲುವು ಕಷ್ಟವಲ್ಲ. ಅಂತಿಮ ಹಂತದಲ್ಲಿ ವಿಲ್ ಜ್ಯಾಕ್ಸ್ , ರೀಸ್ ಟಾಪ್ಲೆ ತವರಿಗೆ ಮರಳಿರುವ ಕಾರಣ ಇದೀಗ ತಂಡಕ್ಕೆ ಹೊಸ ಕಾಂಬಿನೇಷನ್ ಸೆಟ್ ಮಾಡಬೇಕಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಆರ್‌ಸಿಬಿ 18.1 ಓವರ್‌ಗಳಲ್ಲಿ ಗೆಲ್ಲಬೇಕು, ಅಥವಾ 18 ರನ್‌ಗಳ ಅಂತರದಿಂದ ಗೆಲ್ಲಬೇಕು. ಹೀಗಾದರೆ ರನ್‌ರೇಟ್ ಆಧಾರದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮಣಿಸಿ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸಲಿದೆ.