Asianet Suvarna News Asianet Suvarna News

ಸರ್ಕಾರ ಒಪ್ಪಿಗೆ ನೀಡಿದರೆ ಭಾರತ ತಂಡ ಪಾಕ್‌ಗೆ: ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ

2025ರಲ್ಲಿ ಪಾಕಿಸ್ತಾನದಲ್ಲಿ ನಡೆಯಬೇಕಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಟೀಂ ಇಂಡಿಯಾ ಪಾಲ್ಗೊಳ್ಳುವ ಕುರಿತಂತೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಚುಟುಕಾಗಿ ಉತ್ತರಿಸಿದ್ದಾರೆ

Indian government will take a call on travelling to Pakistan for Champions Trophy says Rajeev Shukla kvn
Author
First Published Oct 1, 2024, 11:06 AM IST | Last Updated Oct 1, 2024, 11:06 AM IST

ಕಾನುರ: 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು ಭಾರತ ಪಾಕಿಸ್ತಾನಕ್ಕೆ ತೆರಳಲು ಕೇಂದ್ರ ಸರ್ಕಾರದ ಒಪ್ಪಿಗೆ ಅಗತ್ಯ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, 'ಭಾರತ ತಂಡ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಬಗ್ಗೆ ಈ ವರೆಗೂ ನಿರ್ಧಾರ ಕೈಗೊಂಡಿಲ್ಲ. ಯಾವುದೇ ಅಂತಾ ರಾಷ್ಟ್ರೀಯ ಟೂರ್ನಿಯಲ್ಲಿ ಆಡಬೇಕಿದ್ದರೂ ನಮಗೆ ಸರ್ಕಾರದ ಅನುಮತಿ ಬೇಕು. ಹೀಗಾಗಿ ಭಾರತ ತಂಡ ಪಾಕ್‌ ಗೆ ತೆರಳಬೇಕೇ ಬೇಡವೇ ಎಂಬುದನ್ನು ಕೇಂದ್ರ ಸರ್ಕಾರವೇ ನಿರ್ಧರಿಸಲಿದೆ' ಎಂದಿದ್ದಾರೆ.

2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯು ಮುಂಬರುವ ಫೆಬ್ರವರಿ 19ರಿಂದ ಮಾರ್ಚ್‌ 09ರ ವರೆಗೆ ಪಾಕಿಸ್ತಾನದಲ್ಲಿ ನಡೆಯಬೇಕಿದೆ. ರಾಜತಾಂತ್ರಿಕ ಬಿಕ್ಕಟ್ಟು ಹಾಗೂ ಭದ್ರತೆ ಕಾರಣದಿಂದ ಟೀಂ ಇಂಡಿಯಾ ಕಳೆದೊಂದು ದಶಕದಿಂದ ಪಾಕಿಸ್ತಾನ ಪ್ರವಾಸ ಮಾಡಲು ಹಿಂದೇಟು ಹಾಕುತ್ತಿದೆ. ಭಾರತ ಹಾಗೂ ಪಾಕಿಸ್ತಾನ ತಂಡಗಳು ಕೇವಲ ಐಸಿಸಿ ಟೂರ್ನಿಗಳಲ್ಲಿ ಹಾಗೂ ಏಷ್ಯಾಕಪ್ ಟೂರ್ನಿಯಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. 2008ರಲ್ಲಿ ಮುಂಬೈ ಮೇಲಿನ ಉಗ್ರಗಾಮಿಗಳ ದಾಳಿಯ ಬಳಿಕ ಉಭಯ ತಂಡಗಳ ನಡುವೆ ದ್ವಿಪಕ್ಷೀಯ ಸರಣಿಗಳೇ ನಡೆದಿಲ್ಲ.  

ಚೊಚ್ಚಲ ಮಾಸ್ಟರ್ಸ್ ಲೀಗ್ ಆಡಲಿರುವ ಸಚಿನ್ ತೆಂಡುಲ್ಕರ್, ಸುನಿಲ್ ಗವಾಸ್ಕರ್

ಇಂದಿನಿಂದ ಇರಾನಿ ಕಪ್

ಕಾನ್ಸುರ: ಹಾಲಿ ರಣಜಿ ಚಾಂಪಿಯನ್ ಮುಂಬೈ ಹಾಗೂ ರೆಸ್ಟ್ ಆಫ್ ಇಂಡಿಯಾ(ಶೇಷ ಭಾರತ) ತಂಡಗಳ ನಡುವಿನ ಇರಾನಿ ಕಪ್ ಕ್ರಿಕೆಟ್ ಪಂದ್ಯ ಮಂಗಳವಾರದಿಂದ ಲಖನೌ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿದೆ. ಮುಂಬೈ ತಂಡವನ್ನು ಅಜಿಂಕ್ಯ ರಹಾನೆ, ಶೇಷ ಭಾರತ ತಂಡವನ್ನು ಋತುರಾಜ್ ಗಾಯಕ್ವಾಡ್ ಮುನ್ನಡೆಸಲಿದ್ದಾರೆ. 

ಈ ನಡುವೆ ಇರಾನಿ ಕಪ್‌ಗಾಗಿ ಸರ್ಫರಾಜ್ ಖಾನ್, ಯಶ್ ದಯಾಳ್, ಧ್ರುವ ಜುರೆಲ್‌ರನ್ನು ಭಾರತ ಕ್ರಿಕೆಟ್ ತಂಡದಿಂದ ಬಿಡುಗಡೆ ಮಾಡಲಾಗಿದೆ. ಈ ಮೂವರಿಗೂ ಬಾಂಗ್ಲಾದೇಶ ವಿರುದ್ಧ 2ನೇ ಟೆಸ್ಟ್‌ನಲ್ಲಿ ಸ್ಥಾನ ಲಭಿಸಿಲ್ಲ. ಹೀಗಾಗಿ ಇರಾನಿ ಕಪ್ ಆಡಲು ಅವಕಾಶ ಮಾಡಿಕೊಡಲಾಗಿದೆ. ಸರ್ಫರಾಜ್ ಮುಂಬೈ, ಜುರೆಲ್, ದಯಾಳ್ ಶೇಷ ಭಾರತ ತಂಡದಲ್ಲಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 27,000 ರನ್ ಚಚ್ಚಿದ ಕಿಂಗ್ ಕೊಹ್ಲಿ; ಕ್ರಿಕೆಟ್ ದೇವರ ರೆಕಾರ್ಡ್ ನುಚ್ಚುನೂರು!

ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಗೆದ್ದ ಆಸ್ಟ್ರೇಲಿಯಾ

ಬ್ರಿಸ್ಟೋಲ್ (ಇಂಗ್ಲೆಂಡ್): ಆತಿಥೇಯ ಇಂಗ್ಲೆಂಡ್ ತಂಡ ತವರಿನಲ್ಲೇ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಸೋಲನುಭವಿಸಿದೆ. ಭಾನುವಾರ ರಾತ್ರಿ ನಡೆದ 5ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಡಕ್ಟರ್ಥ್‌ ಲೂಯಿಸ್ ನಿಯಮದನ್ವಯ 49 ರನ್ ಜಯಗಳಿಸಿತು. ಈ ಮೂಲಕ 5 ಪಂದ್ಯಗಳ ಸರಣಿಯನ್ನು 3-2 ಅಂತರದಲ್ಲಿ ಕೈವಶಪಡಿಸಿ ಕೊಂಡಿತು. 

ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 49.2 ಓವರ್‌ಗಳಲ್ಲಿ 309 ರನ್‌ಗೆ ಆಲೌಟಾಯಿತು. ಬೆನ್ ಡಕೆಟ್ 107, ಹ್ಯಾರಿ ಬ್ರೂಕ್ 72 ರನ್ ಸಿಡಿಸಿದರು. ದೊಡ್ಡ ಗುರಿ ಬೆನ್ನತ್ತಿದ ಆಸೀಸ್ 20.4 ಓವರ್‌ಗಳಲ್ಲಿ 2 ವಿಕೆಟ್‌ಗೆ 165 ರನ್ ಗಳಿಸಿದ್ದಾಗ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಡಿಎಲ್‌ಎಸ್ ನಿಯಮದ ಪ್ರಕಾರ 49 ರನ್‌ ಮುಂದಿದ್ದ ಕಾರಣ ಆಸೀಸ್ ಗೆಲುವು ತನ್ನದಾಗಿಸಿಕೊಂಡಿತು.

ಬಾಂಗ್ಲಾದೇಶದಲ್ಲಿ ಸರಣಿ ಆಡಲು ಒಪ್ಪಿದ ದ.ಆಫ್ರಿಕಾ

ಜೋಹಾನ್ಸ್‌ ಬರ್ಗ್: ಹಿಂಸಾಚಾರ ಪೀಡಿತ ಬಾಂಗ್ಲಾದೇಶದಲ್ಲಿ ಕ್ರಿಕೆಟ್ ಸರಣಿ ಆಡಲು ದಕ್ಷಿಣ ಆಫ್ರಿಕಾ ಒಪ್ಪಿದೆ. ಬಾಂಗ್ಲಾದಲ್ಲಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದ ಬಳಿಕ ಪ್ರವಾಸ ಕೈಗೊಳ್ಳಲು ದ.ಆಫ್ರಿಕಾ ತಂಡ ನಿರ್ಧರಿಸಿದೆ. ತಂಡ ಅಕ್ಟೋಬರ್-ನವೆಂಬರ್‌ನಲ್ಲಿ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿವೆ. ಅ.16ರಂದು ಬಾಂಗ್ಲಾಕ್ಕೆ ಪ್ರಯಾಣಿಸಲಿರುವ ತಂಡ, ಅ.21ರಿಂದ ಆತಿಥೇಯರ ವಿರುದ್ಧ ಢಾಕಾದಲ್ಲಿ ಮೊದಲ ಟೆಸ್ಟ್, ಅ.29ರಿಂದ ಚಿತ್ತಗಾಂಗ್‌ನಲ್ಲಿ 2ನೇ ಟೆಸ್ಟ್ ಆಡಲಿದೆ.

Latest Videos
Follow Us:
Download App:
  • android
  • ios