ವಿಶಾಖಪಟ್ಟಣದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ, ಕ್ವಿಂಟನ್ ಡಿ ಕಾಕ್ (106) ಅವರ ಆಕರ್ಷಕ ಶತಕದ ಹೊರತಾಗಿಯೂ ದಕ್ಷಿಣ ಆಫ್ರಿಕಾ 270 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಕುಲ್ದೀಪ್ ಯಾದವ್ ಮತ್ತು ಪ್ರಸಿದ್ದ್ ಕೃಷ್ಣ ತಲಾ ನಾಲ್ಕು ವಿಕೆಟ್ ಪಡೆದು ಮಿಂಚಿದರು.

ವಿಶಾಖಪಟ್ಟಣ: ಕ್ವಿಂಟನ್ ಡಿ ಕಾಕ್ ಆಕರ್ಷಕ ಶತಕದ ಹೊರತಾಗಿಯೂ ಕುಲ್ದೀಪ್ ಯಾದವ್ ಹಾಗೂ ಪ್ರಸಿದ್ದ್ ಕೃಷ್ಣ ಮಾರಕ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ತಂಡವು ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ 47.5 ಓವರ್‌ಗಳಲ್ಲಿ 270 ರನ್‌ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ಏಕದಿನ ಸರಣಿ ಗೆಲ್ಲಲು ಭಾರತಕ್ಕೆ ಸ್ಪರ್ಧಾತ್ಮಕ ಗುರಿ ನೀಡಿದೆ.

ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಕೆ ಎಲ್ ರಾಹುಲ್, ದಕ್ಷಿಣ ಆಫ್ರಿಕಾ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಅರ್ಶದೀಪ್ ಸಿಂಗ್ ಮೊದಲ ಓವರ್‌ನಲ್ಲೇ ರಿಯನ್ ರಿಕಲ್ಟನ್ ಅವರನ್ನು ಖಾತೆ ತೆರೆಯುವ ಮೊದಲೇ ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ಎರಡನೇ ವಿಕೆಟ್‌ಗೆ ನಾಯಕ ತೆಂಬಾ ಬವುಮಾ ಹಾಗೂ ಕ್ವಿಂಟನ್ ಡಿ ಕಾಕ್ 113 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ನಾಯಕ ತೆಂಬಾ ಬವುಮಾ 48 ರನ್ ಬಾರಿಸಿ ರವೀಂದ್ರ ಜಡೇಜಾಗೆ ವಿಕೆಟ್ ಒಪ್ಪಿಸಿದರು.

ಇನ್ನು ಮಧ್ಯಮ ಕ್ರಮಾಂಕದಲ್ಲಿ ಮ್ಯಾಥ್ಯೂ ಬ್ರೆಟ್‌ಕೀ(24) ಹಾಗೂ ಏಯ್ಡನ್ ಮಾರ್ಕ್‌ರಮ್ ಅವರನ್ನು ಒಂದೇ ಓವರ್‌ನಲ್ಲಿ ಕನ್ನಡಿಗ ವೇಗಿ ಪ್ರಸಿದ್ದ್ ಕೃಷ್ಣ ಯಶಸ್ವಿಯಾದರು. ಇದು ಹರಿಣಗಳ ಪಡೆ ಬೃಹತ್ ಮೊತ್ತ ಕಲೆಹಾಕುವ ಕನಸಿಗೆ ಬಲವಾದ ಪೆಟ್ಟು ಬೀಳುವಂತೆ ಮಾಡಿತು.

ಭಾರತ ಎದುರು ಏಳನೇ ಶತಕ ಸಿಡಿಸಿದ ಡಿ ಕಾಕ್:

ನಿವೃತ್ತಿ ವಾಪಾಸ್ ಪಡೆದು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಆಡುತ್ತಿರುವ ಕ್ವಿಂಟನ್ ಡಿ ಕಾಕ್ ಮತ್ತೊಮ್ಮೆ ಭಾರತ ಎದುರು ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ಯಶಸ್ವಿಯಾದರು. ಮೊದಲೆರಡು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಡಿ ಕಾಕ್, ನಿರ್ಣಾಯಕ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸುವಲ್ಲಿ ಯಶಸ್ವಿಯಾದರು. ಡಿ ಕಾಕ್ ಕೇವಲ 80 ಎಸೆತಗಳನ್ನು ಎದುರಿಸಿ ವೃತ್ತಿಜೀವನದ 23ನೇ ಹಾಗೂ ಭಾರತದ ಎದುರು ಏಳನೇ ಏಕದಿನ ಶತಕ ಸಿಡಿಸಿ ಸಂಭ್ರಮಿಸಿದರು. ಈ ಶತಕದೊಂದಿಗೆ ಭಾರತ ಎದುರು ಅತಿಹೆಚ್ಚು ಶತಕ ಸಿಡಿಸಿದ ವಿಕೆಟ್ ಕೀಪರ್ ಬ್ಯಾಟರ್ ಎನ್ನುವ ಹಿರಿಮೆ ಡಿ ಕಾಕ್ ಪಾಲಾಯಿತು. ಈ ಮೊದಲು ಕುಮಾರ ಸಂಗಕ್ಕರ ಭಾರತ ಎದುರು ಆರು ಶತಕ ಸಿಡಿಸಿದ್ದರು. ಅಂತಿಮವಾಗಿ ಕ್ವಿಂಟನ್ ಡಿ ಕಾಕ್ 89 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 106 ರನ್ ಸಿಡಿಸಿ ಪ್ರಸಿದ್ದ್‌ಗೆ ಮೂರನೇ ಬಲಿಯಾದರು.

Scroll to load tweet…

ಇನ್ನುಳಿದಂತೆ ಡೆವಾಲ್ಡ್ ಬ್ರೆವೀಸ್(29) ಹಾಗೂ ಮಾರ್ಕೊ ಯಾನ್ಸನ್(17) ಒಂದೇ ಓವರ್‌ನಲ್ಲಿ ಕುಲ್ದೀಪ್‌ ಯಾದವ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಕೊನೆಯಲ್ಲಿ ಕೇಶವ್ ಮಹರಾಜ್ 20 ರನ್ ಗಳಿಸಿ ಅಜೇಯರಾಗುಳಿದರು.

ಕುಲ್ದೀಪ್-ಪ್ರಸಿದ್ದ್‌ಗೆ ತಲಾ ವಿಕೆಟ್‌: 

ಭಾರತ ಪರ ಶಿಸ್ತುಬದ್ದ ದಾಳಿ ನಡೆಸಿದ ಕುಲ್ದೀಪ್ ಯಾದವ್ 10 ಓವರ್‌ನಲ್ಲಿ ಒಂದು ಮೇಡನ್ ಓವರ್ ಸಹಿತ ಕೇವಲ 41 ರನ್ ನೀಡಿ 4 ವಿಕೆಟ್ ಪಡೆದರು. ಇನ್ನು ಮೊದಲೆರಡು ಓವರ್‌ನಲ್ಲಿ ಸಾಕಷ್ಟು ದುಬಾರಿಯಾಗಿದ್ದ ಪ್ರಸಿದ್ದ್ ಕೃಷ್ಣ ಆ ಬಳಿಕ ಕಮ್‌ಬ್ಯಾಕ್ ಮಾಡಿದರು. ಪ್ರಸಿದ್ದ್ 66 ರನ್ ನೀಡಿ 4 ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು. ಇನ್ನು ಅರ್ಶದೀಪ್ ಸಿಂಗ್ ಹಾಗೂ ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದರು.