ಟಿಮ್ ಸೌಥಿ ಜೀವದಾನ: ರಿಷಭ್ ಪಂತ್ ಬಚಾವ್..!
* ರಿಷಭ್ ಪಂತ್ಗೆ ಜೀವದಾನ ನೀಡಿದ ಟಿಮ್ ಸೌಥಿ
* ಕೈಲ್ ಜೇಮಿಸನ್ ಬೌಲಿಂಗ್ನಲ್ಲಿ ಕ್ಯಾಚ್ ಕೈಚೆಲ್ಲಿದ ಸೌಥಿ
* ಆರಂಭಿಕ ಆಘಾತಕ್ಕೊಳಗಾಗಿರುವ ಟೀಂ ಇಂಡಿಯಾ
ಸೌಥಾಂಪ್ಟನ್(ಜೂ.23): ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನ ಕೊನೆಯ ದಿನದಾಟ ಸಾಕಷ್ಟು ರೋಚಕತೆಯನ್ನು ಹುಟ್ಟುಹಾಕಿದ್ದು, ಭಾರತ ಆರಂಭದಲ್ಲೇ ನಾಯಕ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ್ ಪೂಜಾರ ವಿಕೆಟ್ ಕಳೆದುಕೊಂಡು ಆರಂಭಿಕ ಸಂಕಷ್ಟಕ್ಕೆ ಒಳಗಾಗಿದೆ.
ನ್ಯೂಜಿಲೆಂಡ್ನ ನೀಳಕಾಯದ ವೇಗಿ ಕೈಲ್ ಜೇಮಿಸನ್ ಆರಂಭದಲ್ಲೇ ಟೀಂ ಇಂಡಿಯಾದ ಎರಡು ವಿಕೆಟ್ ಕಬಳಿಸುವ ಮೂಲಕ ಭಾರತ ಕ್ರಿಕೆಟ್ ತಂಡಕ್ಕೆ ಶಾಕ್ ನೀಡಿದ್ದಾರೆ. ಕೊಹ್ಲಿ 13 ಹಾಗೂ ಪೂಜಾರ 15 ರನ್ ಬಾರಿಸಿ ಪೆವಿಲಿಯನ್ ಸೇರಿದ್ದಾರೆ. ಪೂಜಾರ ವಿಕೆಟ್ ಪತನದ ಬಳಿಕ ಕ್ರೀಸ್ಗಿಳಿದ ರಿಷಭ್ ಪಂತ್ಗೆ ನ್ಯೂಜಿಲೆಂಡ್ ಬೌಲರ್ ಟಿಮ್ ಸೌಥಿ ಜೀವದಾನ ನೀಡಿದ್ದಾರೆ.
ಹೌದು, ಪಂತ್ 5 ರನ್ ಗಳಿಸಿದ್ದಾಗ ಜೇಮಿಸನ್ ಬೌಲಿಂಗ್ನಲ್ಲಿ ಬ್ಯಾಟ್ ಅಂಚು ಸವರಿದ ಚೆಂಡು ಎರಡನೇ ಸ್ಲಿಪ್ನಲ್ಲಿದ್ದ ಟಿಮ್ ಸೌಥಿ ಬಳಿ ಹೋಯಿತಾದರು, ಚೆಂಡಿನ ವೇಗವನ್ನು ಗ್ರಹಿಸಲಾರದೇ ಕ್ಯಾಚನ್ನು ಕೈಚೆಲ್ಲಿದರು. ಇದರಿಂದ ಪಂತ್ಗೆ ಜೀವದಾನ ಸಿಕ್ಕಂತಾಗಿದೆ. ಈ ಜೀವದಾನವನ್ನು ಪಂತ್ ಯಾವ ರೀತಿ ಬಳಸಿಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಸದ್ಯ ಟೀಂ ಇಂಡಿಯಾ 43 ಓವರ್ ಅಂತ್ಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 89 ರನ್ ಬಾರಿಸಿದ್ದು, ಒಟ್ಟಾರೆ 57 ರನ್ಗಳ ಮುನ್ನಡೆ ಸಾಧಿಸಿದೆ. ಪಂತ್ 11 ಹಾಗೂ ರಹಾನೆ 5 ರನ್ ಬಾರಿಸಿ ಕ್ರೀಸ್ನಲ್ಲಿದ್ದಾರೆ.