Asianet Suvarna News Asianet Suvarna News

Rohit Replaced Kohli : ಆಯ್ಕೆ ಸಮಿತಿಗೆ ದಿಲೀಪ್ ವೆಂಗ್ಸರ್ಕಾರ್ ಕೊಟ್ಟ ಎಚ್ಚರಿಕೆ ಏನು?

ನಾಯಕನ ಜವಾಬ್ದಾರಿ ವಹಿಸಿಕೊಳ್ಳುವ ಯುವ ಪ್ಲೇಯರ್ ಗಳನ್ನು ಗುರುತಿಸಬೇಕು
ಆಯ್ಕೆ ಸಮಿತಿಯ ವಾಬ್ದಾರಿಯ ಬಗ್ಗೆ ತೀಕ್ಷ್ಣ ಮಾತುಗಳಲ್ಲಿ ತಿವಿದ ಆಯ್ಕೆ ಸಮಿತಿ ಮಾಜಿ ಅಧ್ಯಕ್ಷ
ವೆಸ್ಟ್ ಇಂಡೀಸ್ ತಂಡದಲ್ಲಿ ಆದ ಸಮಸ್ಯೆ ನಮ್ಮ ತಂಡದಲ್ಲಿ ಆಗಬಾರದು

Former India captain and selector Dilip Vengsarkar warns BCCI san
Author
Bengaluru, First Published Dec 10, 2021, 1:08 PM IST

ಬೆಂಗಳೂರು (ಡಿ.10): ಭಾರತ ಏಕದಿನ ತಂಡಕ್ಕೆ (Team India) ವಿರಾಟ್ ಕೊಹ್ಲಿ (Virat Kohli) ಅವರ ಬದಲಿಯಾಗಿ ರೋಹಿತ್ ಶರ್ಮ (Rohit Sharma) ಅವರನ್ನು ನೇಮಕ ಮಾಡಿದ ಆಯ್ಕೆ ಬಿಸಿಸಿಐ (BCCI) ನಿರ್ಧಾರ ಒಪ್ಪುವಂಥದ್ದೇ. ಆದರೆ, ಭವಿಷ್ಯದ ದೃಷ್ಟಿಯನ್ನೂ ಗಮನದಲ್ಲಿಟ್ಟುಕೊಂಡು ಆಯ್ಕೆ ಸಮಿತಿ ಯೋಚನೆ ಮಾಡಬೇಕಿತ್ತು ಎಂದು ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಟೀಮ್ ಇಂಡಿಯಾ ಮಾಜಿ ಆಟಗಾರ ದಿಲೀಪ್ ವೆಂಗ್ಸರ್ಕಾರ್ (Dilip Vengsarkar) ಹೇಳಿದ್ದಾರೆ. ಭವಿಷ್ಯದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಳ್ಳದೇ ತಪ್ಪು ಮಾಡಿದ್ದರಿಂದಲೇ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ವೆಸ್ಟ್ ಇಂಡೀಸ್ (West Indies) ತಂಡ ತನ್ನ ಹಿರಿಮೆಯನ್ನು ಕಳೆದುಕೊಂಡಿತು, ಅಂಥ ಸ್ಥಿತಿ ಭಾರತ ತಂಡಕ್ಕೆ ಆಗಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ರೋಹಿತ್ ಶರ್ಮ ಅವರನ್ನು ನಾಯಕರನ್ನಾಗಿ ನೇಮಕ ಮಾಡುವ ಹೊತ್ತಿನಲ್ಲಿ ನಾಯಕತ್ವದ ಜವಾಬ್ದಾರಿ ಹೊರಬಲ್ಲ ಕೆಲ ಯುವ ಆಟಗಾರರನ್ನು ಗುರುತಿಸಿ ಅವರನ್ನು ತಯಾರು ಮಾಡಬೇಕು. ಇದರಿಂದಾಗಿ ಭವಿಷ್ಯದಲ್ಲಿ ಅವರ ಎದುರಿಗೆ ಈ ಜವಾಬ್ದಾರಿ ಸಿಕ್ಕಾಗ ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ.

ಆಯ್ಕೆ ಸಮಿತಿಯ (National Selection Committee) ಜವಾಬ್ದಾರಿ ಕೇವಲ ತಂಡಗಳನ್ನು ಆಯ್ಕೆ ಮಾಡುವುದಲ್ಲ, ಆಟಗಾರರನ್ನು ಬೆಳೆಸುವ ಅವರಲ್ಲಿನ ನಾಯಕತ್ವ ಗುಣಗಳನ್ನು ಪೋಷಣೆ ಮಾಡುವ ಜವಾಬ್ದಾರಿಯೂ ಇರುತ್ತದೆ. ಯುವ ಆಟಗಾರರನ್ನು ಆಳ ಸಮುದ್ರಕ್ಕೆ ಎಸೆದು, ಈಜಿ ದಡ ಸೇರಲಿ ಎಂದು ನಾವು ನಂಬಿಕೆ ಇಡೋದಿಕ್ಕೆ ಆಗೋದಿಲ್ಲ. ನಾನು ಇಂಥ ಸಂಗತಿಗಳನ್ನು ನಂಬೋದಿಲ್ಲ.

Virat Kohli: ಏಕದಿನ ಕ್ರಿಕೆಟ್ ನಲ್ಲಿ ಮುಗಿದ ವಿರಾಟ್ ನಾಯಕತ್ವ ಯುಗ, ಕೊಹ್ಲಿಯ ದಾಖಲೆಗಳೇನು ಗೊತ್ತಾ?
ನಾನು ಆಯ್ಕೆ ಸಮಿತಿ ಅಧ್ಯಕ್ಷನಾಗಿದ್ದ ವೇಳೆ ಅನಿಲ್ ಕುಂಬ್ಳೆ (Anil Kumble) ಅವರನ್ನು ನಾಯಕರನ್ನಾಗಿ ಘೋಷಣೆ ಮಾಡಿದ್ದೆವು ಅದರ ಜೊತೆಗೆ ಎಂಎಸ್ ಧೋನಿ (MS Dhoni) ಹಾಗೂ ಇತರ ಆಟಗಾರರಿಗೆ ತರಬೇತಿ ನೀಡಿದೆವು. ಇಂಗ್ಲೆಂಡ್ (England) ಪ್ರವಾಸದಲ್ಲಿ ಇಶಾಂತ್ ಶರ್ಮಗೆ (Ishant Sharma) ಆಡುವ ಅವಕಾಶ ಸಿಗುವುದಿಲ್ಲ ಎಂದು ತಿಳಿದಿದ್ದರೂ ಅವರನ್ನು ತಂಡಕ್ಕೆ ಆಯ್ಕೆ ಮಾಡಿ ಕರೆದುಕೊಂಡು ಹೋಗಿದ್ದೆವು. ಯಾಕೆಂದರೆ, ಮುಂದಿನ ಆಸ್ಟ್ರೇಲಿಯಾ (Australia) ಪ್ರವಾಸದಲ್ಲಿ ಅವರು ತಂಡದ ಪ್ರಧಾನ ಅಸ್ತ್ರವಾಗಲಿದ್ದಾರೆ ಎನ್ನುವುದು ನಮಗೆ ತಿಳಿದಿತ್ತು ಎಂದು ಪತ್ರಿಕೆಗೆ ಬರೆದ ಲೇಖನವೊಂದರಲ್ಲಿ ತಿಳಿಸಿದ್ದಾರೆ.

ತಪ್ಪು ಮಾಡಿದ್ದರಿಂದಲೇ ವೆಸ್ಟ್ ಇಂಡೀಸ್ ಕೆಟ್ಟ ಸ್ಥಿತಿಗೆ ತಲುಪಿತು
ಯುವ ಆಟಗಾರರನ್ನು ಮುಂದಿನ ಸವಾಲುಗಳಿಗೆ ಸಿದ್ಧರಾಗಿರುವಂತೆ ಮಾಡುವುದು ಆಯ್ಕೆ ಸಮಿತಿಯ ಮೊದಲ ಜವಾಬ್ದಾರಿ.  ಯಾವುದಾದರೂ ದೊಡ್ಡ ಆಟಗಾರ ನಿವೃತ್ತಿಯಾದಾಗ ತಂಡಕ್ಕೆ ಯಾವುದೇ ಸಮಸ್ಯೆ ಆಗದ ರೀತಿಯಲ್ಲಿ ಇರುವ ಬೆಂಚ್ ಸ್ಟ್ರೆಂಥ್ (Bench Strength) ಅನ್ನು ಬಲಗೊಳಿಸುವುದು ಇವರ ಕಾರ್ಯ. ಇದನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗದಿದ್ದಾಗ ಪರಿಸ್ಥಿತಿ ಕೈಮೀರಿ ಹೋಗುತ್ತದೆ. ವೆಸ್ಟ್ ಇಂಡೀಸ್ ತಂಡದ ಉದಾಹರಣೆಯನ್ನೇ ತೆಗೆದುಕೊಳ್ಳಿ. 15 ವರ್ಷಗಳ ಕಾಲ ವಿಶ್ವ ಕ್ರಿಕೆಟ್ ನ ನಂ.1 ಟೀಮ್ ಆಗಿ ಆಳಿದ ತಂಡ ಶ್ರೇಯಾಂಕದಲ್ಲಿ ಕಡೆಯ ಸ್ಥಾನವನ್ನೂ ತಲುಪಿತ್ತು.

ODI Captaincy: ಕೊಹ್ಲಿ, ರೋಹಿತ್ ಜೊತೆ ಚರ್ಚಿಸಿ ಏಕದಿನ ತಂಡದ ನಾಯಕತ್ವ ನಿರ್ಧಾರ
ಇದೇ ವೇಳೆ ಟೆಸ್ಟ್ ಹಾಗೂ ಸೀಮಿತ ಓವರ್ ಗಳ ಕ್ರಿಕೆಟ್ ಗೆ ಇಬ್ಬರು ಭಿನ್ನ ನಾಯಕರನ್ನು ನೇಮಕ ಮಾಡಿದ್ದರಿಂದ ಟೀಮ್ ಇಂಡಿಯಾದಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ ಎನ್ನುವ ವಿಶ್ವಾಸವನ್ನೂ ದಿಲೀಪ್ ವೆಂಗ್ಸರ್ಕಾರ್ ವ್ಯಕ್ತಪಡಿಸಿದ್ದಾರೆ. "ಭಾರತದ ಡ್ರೆಸಿಂಗ್ ರೂಮ್ ನಲ್ಲಿ (Indian Dressing Room) ಎರಡು ಶಕ್ತಿಕೇಂದ್ರಗಳನ್ನು ಹೊಂದುವುದರಿಂದ ಯಾವುದೇ ಸಮಸ್ಯೆ ಆಗಲಾರದು. ಇವರೆಲ್ಲರೂ ವೃತ್ತಿಪರ ಆಟಗಾರರು, ತಮ್ಮ ಎದುರಿಗೆ ಇರುವ ಜವಾಬ್ದಾರಿಯ ಬಗ್ಗೆ ಇವರು ಹೆಚ್ಚಿನ ಗಮನ ನೀಡುತ್ತಾರೆ.  ಇದೇ ಮಾತನ್ನು ಯುವ ಆಟಗಾರರ ಕುರಿತಾಗಿಯೂ ಹೇಳಬಹುದು. ಅವರೂ ಕೂಡ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಸಿಕ್ಕ ಅವಕಾಶವನ್ನು ಬಾಚಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಾರೆ" ಎಂದರು.

Follow Us:
Download App:
  • android
  • ios