ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್ ಕೋಚ್ ಆಗಿ ನೇಮಕವಾಗುತ್ತಿದ್ದಂತೆಯೇ ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಡೇಲ್ ಸ್ಟೇಯ್ನ್ ಅಚ್ಚರಿಯ ಮಾತುಗಳನ್ನಾಡಿ ಗಮನ ಸೆಳೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಮುಂಬೈ: ಭಾರತ ಕ್ರಿಕೆಟ್ ತಂಡದ ನೂತನ ಹೆಡ್ ಕೋಚ್ ಆಗಿ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ನೇಮಕವಾಗಿದ್ದಾರೆ. ಬಿಸಿಸಿಐ ಕೈಗೊಂಡ ಈ ತೀರ್ಮಾನದಿಂದ ಟೀಂ ಇಂಡಿಯಾ ಒಳ್ಳೆಯ ಪ್ರಯೋಜನವಾಗಲಿದೆ ಎಂದು ದಕ್ಷಿಣ ಆಫ್ರಿಕಾ ಮಾಜಿ ವೇಗಿ ಡೇಲ್ ಸ್ನೇಯ್ನ್ ಅಭಿಪ್ರಾಯಪಟ್ಟಿದ್ದಾರೆ. ಗೌತಮ್ ಗಂಭೀರ್ ಅವರ ಆಕ್ರಮಣಶೀಲ ಮನೋಭಾವ ಹಾಗೂ ಗೇಮ್ ಅವೇರ್‌ನೆಸ್‌ ಭಾರತ ತಂಡಕ್ಕೆ ಅನುಕೂಲವಾಗಲಿದೆ ಎಂದು ಸ್ಟೇಯ್ನ್ ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಇದೇ ವೇಳೆ ವಿರಾಟ್ ಕೊಹ್ಲಿ ಸೇರಿದಂತೆ ಹಿರಿಯ ಆಟಗಾರರ ಕುರಿತಂತೆ ಸ್ಟೇಯ್ನ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ಇತ್ತೀಚೆಗಷ್ಟೇ ಮುಕ್ತಾಯವಾದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದರ ಬೆನ್ನಲ್ಲೇ ಟೀಂ ಇಂಡಿಯಾ ಹೆಡ್ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರೊಂದಿಗೆ ಬಿಸಿಸಿಐ ಒಪ್ಪಂದಾವಧಿ ಕೂಡಾ ಮುಕ್ತಾಯವಾಗಿತ್ತು. ಹೀಗಾಗಿ ನೂತನ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದ ಬಿಸಿಸಿಐ, ಕಳೆದ ಜುಲೈ 09ರಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಗೌತಮ್ ಗಂಭೀರ್ ಅವರು ಟೀಂ ಇಂಡಿಯಾ ನೂತನ ಹೆಡ್ ಕೋಚ್ ಆಗಿ ನೇಮಕವಾಗಿದ್ದಾರೆ ಎಂದು ಖಚಿತಪಡಿಸಿದ್ದರು.

ವಿನಯ್ ಕುಮಾರ್ ಬೇಡ, ಈ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಲು ಗಂಭೀರ್‌ಗೆ ಬಿಸಿಸಿಐ ಸಲಹೆ..!

ಇದೀಗ ಗೌತಮ್ ಗಂಭೀರ್ ಅವರನ್ನು ಟೀಂ ಇಂಡಿಯಾ ಹೆಡ್ ಕೋಚ್ ಆಗಿ ನೇಮಕಗೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಟೇಯ್ನ್, "ನಾನು ಗೌತಮ್ ಗಂಭೀರ್ ಅವರ ದೊಡ್ಡ ಅಭಿಮಾನಿ. ನನಗೆ ಅವರ ಆಕ್ರಮಣಶಾಲಿ ಮನೋಭಾವವೆಂದರೆ ಇಷ್ಟ. ನನ್ನ ಎದುರು ದಿಟ್ಟ ಹೋರಾಟ ನಡೆಸಿದ ಕೆಲವೇ ಕೆಲವು ಭಾರತೀಯ ಆಟಗಾರರಲ್ಲಿ ಗಂಭೀರ್ ಕೂಡಾ ಒಬ್ಬರಾಗಿದ್ದಾರೆ. ನನ್ನ ಪ್ರಕಾರ ಗೌತಮ್ ಗಂಭೀರ್, ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂ ಪ್ರವೇಶಿಸಿದ ಬಳಿಕ ವಿರಾಟ್ ಕೊಹ್ಲಿ ಅವರಂತಹ ಹಿರಿಯ ಆಟಗಾರರು ಮುಂಬರುವ ದಿನಗಳಲ್ಲಿ ದೊಡ್ಡ ಪಾತ್ರ ನಿಭಾಯಿಸಲಿದ್ದಾರೆ ಎಂದೆನಿಸುತ್ತಿಲ್ಲ" ಎಂದು ದಕ್ಷಿಣ ಆಫ್ರಿಕಾ ಮಾಜಿ ವೇಗಿ ಅಭಿಪ್ರಾಯಪಟ್ಟಿದ್ದಾರೆ.

"ಕೇವಲ ಭಾರತಕ್ಕೆ ಮಾತ್ರವಲ್ಲ, ವಿಶ್ವ ಕ್ರಿಕೆಟ್‌ನಲ್ಲೂ ಕೊಂಚ ಆಕ್ರಣಕಾರಿ ಮನೋಭಾವ ಹೊಂದಿರುವ ಇಂತಹ ವ್ಯಕ್ತಿಗಳ ಅಗತ್ಯವಿದೆ. ನಾವೆಲ್ಲರೂ ಎದುರಬದುರಾಗಿ ಸಾಕಷ್ಟು ಲೀಗ್ ಕ್ರಿಕೆಟ್‌ಗಳನ್ನು ಅಡಿದ್ದೇವೆ. ಜಂಟಲ್‌ಮನ್ ಕ್ರೀಡೆ ಎನಿಸಿಕೊಂಡಿರುವ ಈ ಕ್ರಿಕೆಟ್‌ನಲ್ಲಿ ಗಂಭೀರ್ ಅವರು ಮೈದಾನದಲ್ಲಿ ತೋರುವ ಆಕ್ರಮಣಶೀಲ ಮನೋಭಾವ ನನಗೆ ಇಷ್ಟವಾಗುತ್ತದೆ. ಅವರೊಬ್ಬ ‍‍ಚಾಣಾಕ್ಷ ಕ್ರಿಕೆಟಿಗ ಎಂದು ಸ್ಟೇಯ್ನ್, ಗೌತಿ ಗುಣಗಾನ ಮಾಡಿದ್ದಾರೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ಹೋಗಲ್ಲ: ಬಿಸಿಸಿಐ ಖಡಕ್ ತೀರ್ಮಾನ..!

ಗೌತಮ್ ಗಂಭೀರ್ ಇದೇ ಜುಲೈ 27ರಿಂದ ಆರಂಭವಾಗಲಿರುವ ಶ್ರೀಲಂಕಾ ಎದುರಿನ ಸೀಮಿತ ಓವರ್‌ಗಳ ಸರಣಿಯ ಮೂಲಕ ಹೆಡ್ ಕೋಚ್ ಆಗಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಲಿದ್ದಾರೆ. ಶ್ರೀಲಂಕಾ ಪ್ರವಾಸದಲ್ಲಿ ಟೀಂ ಇಂಡಿಯಾ, ಮೂರು ಪಂದ್ಯಗಳ ಟಿ20 ಸರಣಿ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ.