ಮಸ್ತ್ ಮಜಾ ಬಂತು; ಪಾಕ್ ಮಣಿಸಿದ ಟೀಂ ಇಂಡಿಯಾಗೆ ವಿನೂತನವಾಗಿ ಅಭಿನಂದಿಸಿದ ಸೆಹ್ವಾಗ್, ತೆಂಡುಲ್ಕರ್..!
ಏಷ್ಯಾಕಪ್ ಕ್ರಿಕೆಟ್ ಪಾಕಿಸ್ತಾನವನ್ನು ಮಣಿಸಿದ ಟೀಂ ಇಂಡಿಯಾ
ಟೀಂ ಇಂಡಿಯಾ ಪ್ರದರ್ಶನಕ್ಕೆ ಹರಿದುಬಂತು ಅಭಿನಂದನೆಗಳ ಮಹಾಪೂರ
ಮಸ್ತ್ ಮಜಾ ಬಂತು ಎಂದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್
ದುಬೈ(ಆ.29): ಏಷ್ಯಾಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 5 ವಿಕೆಟ್ಗಳ ರೋಚಕ ಗೆಲುವು ಸಾಧಿಸಿದ ಬೆನ್ನಲ್ಲೇ ಭಾರತ ಕ್ರಿಕೆಟ್ ತಂಡದ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಸಾಮಾಜಿಕ ಜಾಲತಾಣಗಳಲ್ಲಿ ವಿನೂತನವಾಗಿ ಶುಭ ಹಾರೈಸಿದ್ದಾರೆ. ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಂ ಹಾಗೂ ಕೂ ಆ್ಯಪ್ ಮೂಲಕ ಭಾರತ ಕ್ರಿಕೆಟ್ ತಂಡದ ಪ್ರದರ್ಶನಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಇಲ್ಲಿನ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಪಾಕಿಸ್ತಾನ ನೀಡಿದ್ದ 148 ರನ್ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಟೀಂ ಇಂಡಿಯಾ, ಅರಂಭಿಕ ಆಘಾತದ ನಡುವೆಯೂ, ಗೆಲುವಿನತ್ತ ದಿಟ್ಟ ಹೆಜ್ಜೆ ಹಾಕಿತು. ಅದರಲ್ಲೂ ಮಧ್ಯಮ ಕ್ರಮಾಂಕದಲ್ಲಿ ರವೀಂದ್ರ ಜಡೇಜಾ ಹಾಗೂ ಹಾರ್ದಿಕ್ ಪಾಂಡ್ಯ ಸಮಯೋಚಿತ ಅರ್ಧಶತಕದ ಜತೆಯಾಟ ನಿಭಾಯಿಸುವ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು. ಎಡಗೈ ಬ್ಯಾಟರ್ ರವೀಂದ್ರ ಜಡೇಜಾ 35 ರನ್ ಬಾರಿಸಿ ಕೊನೆಯ ಓವರ್ನಲ್ಲಿ ವಿಕೆಟ್ ಒಪ್ಪಿಸಿದರೇ, ಹಾರ್ದಿಕ್ ಪಾಂಡ್ಯ ಕೇವಲ 17 ಎಸೆತಗಳಲ್ಲಿ 4 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಅಜೇತ 33 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಟೀಂ ಇಂಡಿಯಾದ ಈ ಪ್ರದರ್ಶನ ಕ್ರಿಕೆಟ್ ಅಭಿಮಾನಿಗಳಿಗೆ ಮಾತ್ರವಲ್ಲದೇ ಭಾರತದ ಹಿರಿ-ಕಿರಿಯ ಆಟಗಾರರ ಮೆಚ್ಚುಗೆಗೂ ಪಾತ್ರವಾಗಿದೆ. ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್, ವೇಗದ ಬೌಲರ್ಗಳು ಸಾಕಷ್ಟು ಫಿಟ್ನೆಸ್ ಹೊಂದಿದ್ದರಿಂದ ಬ್ಯಾಟರ್ಗಳು ಹೆಚ್ಚು ರನ್ಗಳಿಸದಂತೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು. ಎರಡೂ ತಂಡದ ವೇಗದ ಬೌಲರ್ಗಳು ಮುಂಚೂಣಿಯಲ್ಲಿದರು. ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಅವರ ಜತೆ ಕೊನೆಯವರೆಗೂ ಕ್ರೀಸ್ನಲ್ಲಿದ್ದ ತಂಡವನ್ನು ಗೆಲುವಿನ ದಡ ಸೇರಿಸಿದ ಹಾರ್ದಿಕ್ ಪಾಂಡ್ಯ ಇನಿಂಗ್ಸ್ ಮಹತ್ವದ್ದೆನಿಸಿತು ಎಂದು ಮಾಸ್ಟರ್ ಬ್ಲಾಸ್ಟರ್ ಟ್ವೀಟ್ ಮಾಡಿದ್ದಾರೆ.
ವಾವ್ ವಾವ್ ವಾವ್..! ಅದ್ಭುತ ಹಾರ್ದಿಕ್ ಪಾಂಡ್ಯ. ಎಲ್ಲವನ್ನು ನಾನೇ ಮಾಡುತ್ತೇನೆ ಎನ್ನುವಂತಿತ್ತು ಹಾರ್ದಿಕ್ ಪಾಂಡ್ಯ ಆಟ. ಭುವನೇಶ್ವರ್ ಕುಮಾರ್ ಅವರಿಂದ ಚಾಣಾಕ್ಷ ಪ್ರದರ್ಶನ. ರವೀಂದ್ರ ಜಡೇಜಾ ಹಾಗೂ ವಿರಾಟ್ ಕೊಹ್ಲಿ ಕೂಡಾ ಉತ್ತಮ ಸಹಯೋಗ ನೀಡಿದರು. ಸಾಕಷ್ಟು ಸಮಯದ ನಂತರ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಒಂದು ಜಿದ್ದಾಜಿದ್ದಿನ ಪಂದ್ಯ ನೋಡಲು ಸಿಕ್ಕಿತು. ಮಸ್ತ್ ಮಜಾ ಬಂತು ಎಂದು ವಿರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ
Asia Cup: ನರೇಂದ್ರ ಮೋದಿ to ರಾಹುಲ್ ಗಾಂಧಿ, ಪಾಕ್ ಬಗ್ಗುಬಡಿದ ಟೀಂ ಇಂಡಿಯಾಗೆ ಜೈ ಹೋ..!
ಟೀಂ ಇಂಡಿಯಾ ವಿಶ್ವಕಪ್ ಹೀರೋ ಯುವರಾಜ್ ಸಿಂಗ್, ಸಾಕಷ್ಟು ಒತ್ತಡವಿದ್ದಂತಹ ಪಂದ್ಯದಲ್ಲಿ ಭಾರತಕ್ಕೆ ಒಳ್ಳೆಯ ಗೆಲುವು ಸಿಕ್ಕಿತು. ಚೆನ್ನಾಗಿ ಬೌಲಿಂಗ್ ಮಾಡಿದಿರಿ ಹಾಗೂ ಆಡಿದ್ದೀರಾ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್ ಎಂದು ಟ್ವೀಟ್ ಮಾಡಿದ್ದಾರೆ.
ರಾತ್ರಿ ನಡೆದ ಪಂದ್ಯವು ಒಂದೊಳ್ಳೆಯ ಮ್ಯಾಚ್ ಹಾಗೂ ಒಂದೊಳ್ಳೆಯ ಗೆಲುವಾಗಿತ್ತು. ಚೆನ್ನಾಗಿ ಆಡಿದ್ದೀರಾ, ಅಭಿನಂದನೆಗಳು ನಿಮಗೆ ಎಂದು ವೇಗಿ ಮೊಹಮ್ಮದ್ ಶಮಿ, ಟೀಂ ಇಂಡಿಯಾ ಪ್ರದರ್ಶನವನ್ನು ಕೊಂಡಾಡಿದ್ದಾರೆ.
ಇನ್ನು ನೂರನೇ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ ಮಾಜಿ ನಾಯಕ ವಿರಾಟ್ ಕೊಹ್ಲಿ, ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ವೃದ್ದಿಮಾನ್ ಸಾಹ ಕೂಡಾ ಕೂ ಆ್ಯಪ್ ಮೂಲಕ ಟೀಂ ಇಂಡಿಯಾ ಪ್ರದರ್ಶನವನ್ನು ಗುಣಗಾನ ಮಾಡಿದ್ದಾರೆ.