ತಿಥಿ ಚಿತ್ರದ ಗಡ್ಡಪ್ಪ ಅವರು ಮಾತನಾಡಿ ಯಾವುದೇ ಅಪಪ್ರಚಾರಕ್ಕೆ ಕಿವಿಗೊಡದಂತೆ ಹೇಳಿದ್ದಾರೆ. ಅವರ ಆರೋಗ್ಯದ ಬಗ್ಗೆ ಅನೇಕ ರೀತಿಯ ಸುದ್ದಿ ಹಬ್ಬುತ್ತಿದ್ದಂತೆ ಅವರು ಸ್ಪಷ್ಟನೆ ನೀಡಿದ್ದಾರೆ.
ಮಂಡ್ಯ : ‘ತಿಥಿ’ ಚಿತ್ರದ ಖ್ಯಾತಿಯ ನಟ, ನೊದೆಕೊಪ್ಪಲು ಗ್ರಾಮದ ಗಡ್ಡಪ್ಪ ಅಲಿಯಾಸ್ ಚನ್ನೇಗೌಡ ಅವರಿಗೆ ಅರೋಗ್ಯದ ಸಮಸ್ಯೆ ಎದುರಾಗಿದೆ. 80 ವರ್ಷ ವಯಸ್ಸಿನ ಗಡ್ಡಪ್ಪ ಅವರು ಪಾಶ್ರ್ವವಾಯುಗೆ ತುತ್ತಾಗಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಎಡಗೈ ಹಾಗೂ ಎಡಭಾಗದ ಮುಖ ಸ್ವಾಧೀನ ತಪ್ಪಿದೆ. ಆದರೂ ಎದ್ದು ಓಡಾಡುತ್ತಿದ್ದಾರೆ. ಮಾತುಗಳು ತೊದಲುತ್ತಿವೆ. ಕುಟುಂಬಸ್ಥರು ಗಡ್ಡಪ್ಪರಿಗೆ ಮಂಡ್ಯ ಮತ್ತು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮನೆಗೆ ಕರೆತಂದಿದ್ದಾರೆ.
‘ಒಂದು ತಿಂಗಳ ಕಾಲ ವೈದ್ಯರು ವಿಶ್ರಾಂತಿ ತೆಗೆದುಕೊಳ್ಳಲು ಸಲಹೆ ಮಾಡಿದ್ದಾರೆ. ನನ್ನನ್ನು ವಯೋ ಸಹಜವಾದ ಅನಾರೋಗ್ಯ ಕಾಡುತ್ತಿದೆ. ಯಾವುದೇ ಅಪಪ್ರಚಾರಕ್ಕೆ ಕಿವಿಗೊಡಬೇಡಿ. ನಾನು ಆರೋಗ್ಯವಾಗಿದ್ದೇನೆ. ಕೆಲವು ದಿನಗಳಲ್ಲೇ ಮತ್ತೆ ಚೇತರಿಸಿಕೊಳ್ಳುತ್ತೇನೆ’ ಎಂದು ಗಡ್ಡಪ್ಪ ತಿಳಿಸಿದರು.
