ಬೆಂಗಳೂರಿನ ಹಲವೆಡೆ ಗುಡುಗು ಸಹಿತ ಭಾರೀ ಮಳೆ: ಮರ ಬಿದ್ದು ಬೈಕ್ ಸವಾರ ಸಾವು
ಸಿಲಿಕಾನ್ ಸಿಟಿಯಲ್ಲಿ ಬುಧವಾರ ಸಂಜೆ ವರುಣ ಅರ್ಭಟಿಸಿದ್ದು, 11 ಮರಗಳು ಧರೆಗುರುಳಿದಿವೆ.ಮರ ಬಿದ್ದ ಪರಿಣಾಮ ಓರ್ವ ಬೈಕ್ ಸವಾರ ಮೃತಪಟ್ಟಿದ್ದಾನೆ.
ಬೆಂಗಳೂರು, [ಏ.17]: ಬೇಸಿಗೆ ಬಿಸಿಲಿನ ಝಳದಿಂದ ಪರಿತಪಿಸುತ್ತಿದ್ದ ಸಿಲಿಕಾನ್ ಸಿಟಿ ಮಂದಿಗೆ ಬುಧವಾರ ಸಂಜೆ ಮಳೆರಾಯ ತಂಪೆರೆದಿದ್ದಾನೆ.
ಭಾರೀ ಮಳೆಯಿಂದಾಗಿ ನಗರದಲ್ಲಿ ಒಟ್ಟು 11 ಮರಗಳು ಧರೆಗುರುಳಿವೆ. ಲುಂಬಿನಿ ಗಾರ್ಡನ್ ಬಳಿ ಬೈಕ್ ಸವಾರನ ಮೇಲೆ ಮರ ಬಿದ್ದ ಪರಿಣಾಮ ಬೈಕ್ ಸವಾರ ಮೃತಪಟ್ಟಿದ್ದಾನೆ.
"
ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ : ಬೆಳಗ್ಗೆ ಬೇಗ ಮತದಾನ ಮಾಡಿ
27 ವರ್ಷದ ಕಿರಣ್ ಮೃತ ಯುವಕ. ಮೂಲತಃ ಕುಣಿಗಲ್ ಮೂಲದ ಕಿರಣ್, ಬೆಂಗಳೂರಿನಲ್ಲಿ ಕೊರಿಯರ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಹೆಬ್ಬಾಳದ ಲುಂಬಿಣಿ ಗಾರ್ಡನ್ ಬಳಿ ಕೆಲಸ ಮುಗಿಸಿ ಕೆ.ಆರ್.ಪುರಂನಿಂದ ಹೆಬ್ಬಾಳ ಮಾರ್ಗವಾಗಿ ಮನೆಗೆ ತೆರಳುವಾಗ ಮಳೆ-ಗಾಳಿಗೆ ಮರ ಬಿದ್ದ ಪರಿಣಾಮ ಸ್ಥಳದಲ್ಲೇ ಆತ ಕೊನೆಯುಸಿರೆಳೆದಿದ್ದಾನೆ.
ಕಿರಣ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಎಂಎಸ್ ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದೆ.
ಜೆ.ಪಿ.ನಗರ, ಮೆಜೆಸ್ಟಿಕ್, ಬಿಟಿಎಂ ಲೇಔಟ್, ಚಾಲುಕ್ಯ ಸರ್ಕಲ್, ಎಚ್ಎಸ್ಆರ್ ಲೇಔಟ್, ಮಾರುಕಟ್ಟೆ, ಜಯನಗರ, ಬನಶಂಕರಿ, ಶಿವಾಜಿನಗರ ಸುತ್ತಮುತ್ತ ಭಾರೀ ಮಳೆಯಾಗಿದೆ. ಇದನ್ನು ಹೊರತುಪಡಿಸಿ, ಹಲವು ಕಡೆ ತುಂತುರು ಮಳೆಯ ಸಿಂಚನವಾಗಿದೆ. ದಟ್ಟ ಕಾರ್ಮೋಡ ಕವಿದಿದ್ದು, ಮತ್ತೆ ಮಳೆ ಆರ್ಭಟಿಸುವ ಸಾಧ್ಯತೆ ಇದೆ.