ಜಾತ್ರೆಯಲ್ಲಿ ಪೊಲೀಸ್ -ಯುವಕನ ನಡುವೆ ಬಡಿದಾಟ : ವಿಡಿಯೋ ವೈರಲ್!
ಜಾತ್ರೆಯಲ್ಲಿ ಪೊಲೀಸ್ ಹಾಗೂ ಯುವಕ ಬಡಿದಾಡಿಕೊಂಡಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೆಂಗಳೂರು [ಅ.22]: ವ್ಯಕ್ತಿಯೊಬ್ಬನೊಂದಿಗೆ ಕಾನ್ಸ್ಟೇಬಲ್ ಬಡಿದಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾನ್ಸ್ಟೇಬಲ್ ಮೇಲೆ ಹಲ್ಲೆ ಮಾಡಿದ ಆರೋಪದಡಿ ಬಾಗಲಗುಂಟೆ ನಿವಾಸಿ ಶರತ್ (35) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿ ವಿರುದ್ಧ ಹಲ್ಲೆ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹಾಸನ ಮೂಲದ ಶರತ್ ಕಾರು ಚಾಲಕನಾಗಿದ್ದು, ಪತ್ನಿ ಮತ್ತು ಮಕ್ಕಳ ಜತೆ ಬಾಗಲಗುಂಟೆಯಲ್ಲಿ ನೆಲೆಸಿದ್ದಾನೆ. ಬಾಗಲಗುಂಟೆಯಲ್ಲಿ ಜಾತ್ರೆ ನಡೆಯುತ್ತಿದ್ದು, ಸಾವಿರಾರು ಜನತೆ ಜಮಾಯಿಸಿದ್ದರು. ಆರೋಪಿ ಕುಡಿದು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ. ವಿಷಯ ತಿಳಿದ ಪೊಲೀಸರಿಬ್ಬರು ಸ್ಥಳಕ್ಕೆ ತೆರಳಿದ್ದರು. ಆರೋಪಿಯನ್ನು ಪ್ರಶ್ನಿಸಿದ ಕಾನ್ಸ್ಟೇಬಲ್ ಮೇಲೆ ಆರೋಪಿ ಹಲ್ಲೆ ನಡೆಸಿದ್ದಾನೆ. ಇದಕ್ಕೆ ಪ್ರತಿಯಾಗಿ ಕಾನ್ಸ್ಟೇಬಲ್ ಕೂಡ ಆರೋಪಿಯನ್ನು ಥಳಿಸಿರುವ ವಿಡಿಯೋ ವೈರಲ್ ಆಗಿದೆ.
ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.