ಟಂಟಂಗೆ ಅಪರಿಚಿತವಾಹನ ಡಿಕ್ಕಿ: ನಾಲ್ವರ ಸಾವು|ತಂಗಿಯ ಸೀಮಂತ ಕಾರ್ಯಕ್ಕೆ ಬುತ್ತಿರೊಟ್ಟಿ ಕೊಟ್ಟು ಬರುವಾಗ ನಡೆದ ದುರ್ಘಟನೆ|ಮೃತರು ಗುಳೇದಗುಡ್ಡ ಪಟ್ಟಣದ ನಿವಾಸಿಗಳು ಎಂದು ತಿಳಿದುಬಂದಿದೆ|ಅಮೀನಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು|

ಬಾಗಲಕೋಟೆ/ಗುಳೇದಗುಡ್ಡ[ನ.7]: ತಂಗಿಯ ಸೀಮಂತ ಕಾರ್ಯಕ್ಕೆ ಬುತ್ತಿರೊಟ್ಟಿ ಕೊಟ್ಟು ಬರುವಾಗ ಅಪರಿಚಿತ ವಾಹನವೊಂದು ಟಂಟಂಗೆ ಡಿಕ್ಕಿ ಹೊಡೆದು ಟಂಟಂ ಚಾಲಕ ಸಹಿತ ನಾಲ್ವರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಕಮತಗಿ ಪಟ್ಟಣದ ಹೊರ ವಲಯ ದನೇಕಾರ ಕಾಲೋನಿ ಬಳಿ ಮಂಗಳವಾರ ರಾತ್ರಿ ನಡೆದಿದೆ.

Add Asianetnews Kannada as a Preferred SourcegooglePreferred

ಗುಳೇದಗುಡ್ಡದ ನಿವಾಸಿಗಳಾದ ಸಂಗಮೇಶ ಬಸವರಾಜ್ ಕಿತ್ತಲಿ (25),ಬಸು ಚಿನ್ನಪ್ಪ ತೋರಗಲ್ಲ (26) ಸ್ಥಳದಲ್ಲಿಯೇ ಮೃತಪಟ್ಟರೆ, ವಿಠ್ಠಲ ವಗ್ಗಾ (23)ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ವಿಠ್ಠಲ ವಗ್ಗಾ ಅವರತಂಗಿಯ ಸೀಮಂತ ಕಾರ್ಯಕ್ಕೆ ಇಳಕಲ್ಲ ಸಮೀಪದ ದೋಟಿಹಾಳ ಗ್ರಾಮಕ್ಕೆ ಬುತ್ತಿರೊಟ್ಟಿ ಕೊಟ್ಟು ವಾಪಸ್ಸು ಬರುವಾಗ ಈ ದುರ್ಘಟನೆ ನಡೆದಿದೆ. ಇನ್ನೊಬ್ಬನ ಹೆಸರು ತಿಳಿದು ಬಂದಿಲ್ಲ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ನಾಲ್ವರು ಗುಳೇದಗುಡ್ಡ ಪಟ್ಟಣದ ನಿವಾಸಿಗಳು ಎಂದು ತಿಳಿದುಬಂದಿದೆ. ಕಮತಗಿಯಿಂದ ಗುಳೇದಗುಡ್ಡಕ್ಕೆ ಹೋಗುವಾಗ ಈ ಘಟನೆ ನಡೆದಿದೆ. ಈ ಕುರಿತು ಅಮೀನಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಕುರಿತು ಪೊಲೀಸರು ಇನ್ನೂ ಹೆಚ್ಚಿನ ಮಾಹಿತಿ ಪಡೆಯುತ್ತಿದ್ದಾರೆ. 

ಕಮತಗಿ ಕ್ರಾಸ್ ಹತ್ತಿರದ ರಾಜ್ಯ ಹೆದ್ದಾರಿಯಲ್ಲಿ ಮಂಗಳವಾರ ರಾತ್ರಿ ಟಂಟಂ ಹಾಗೂ ಅಪರಿಚಿತ ವಾಹನ ನಡುವೆ ಉಂಟಾದ ಅಪಘಾತದಲ್ಲಿ ಮೃತರಾದ ನಗರದ ಯುವಕರ ಶವಗಳನ್ನು ನಗರಕ್ಕೆ ಬುಧವಾರ ಬೆಳಿಗ್ಗೆ ತಂದಾಗ ಮೃತಕುಟಂಬದ ಆಕ್ರಂದನ ಮುಗಿಲುಮುಟ್ಟಿತ್ತು. ನಗರದ ಹೊಸಪೇಟೆ ಓಣಿಯ ನಿವಾಸಿಗಳಾದ ಬಸವರಾಜ ಚಿನ್ನಪ್ಪ ತೊರಗಲ್ಲ, ವಿಠ್ಠಲ ಭೀಮಪ್ಪ ವಗ್ಗಾ, ಸಂಗಮೇಶ ಬಸವರಾಜ ಕಿತ್ತಲಿ ಅಪಘಾತದಲ್ಲಿ ಮೃತಪಟ್ಟರೆ, ನೂರಂದಪ್ಪ ಲಕ್ಕುಂಡಿ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದು ಬಾಗಲಕೋಟೆಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. 

ಬಸವರಾಜ ತೊರಗಲ್ಲ ಓಣಿಯಲ್ಲಿ ಸಣ್ಣ ಹೊಟೇಲ್ ಇಟ್ಟುಕೊಂಡು ಜೊತೆಗೆ ಟಂಟಂ ಓಡಿಸುತ್ತಿದ್ದರು. ವಿಠ್ಠಲ ವಗ್ಗಾ ಟೈಲರಿಂಗ್ ವೃತ್ತಿ ಮಾಡುತ್ತಿದ್ದರು. ಸಂಗಮೇಶ ಕಿತ್ತಲಿ ಫೋಟೋಗ್ರಾಫರಾಗಿದ್ದರು. ನೂರಂದಪ್ಪ ಲಕ್ಕುಂಡಿ ಬಟ್ಟೆ ಅಂಗಡಿ ಕೆಲಸ ಮಾಡುತ್ತಿದ್ದಾರೆ. ಅಪಘಾತದ ಸಾವಿನಿಂದಾಗಿ ಇಡೀ ಓಣಿ ದುಃಖದಲ್ಲಿ ಮುಳುಗಿತ್ತು.