ನಮ್ಮ ಪೂರ್ವಿಕರು ಆಚರಿಸುತ್ತಿದ್ದ ಬಹುತೇಕ ಆಚಾರ, ವಿಚಾರಗಳಿಗೆ ತನ್ನದೇ ಆದ ಅರ್ಥಗಳಿವೆ. ವೈಜ್ಞಾನಿಕ ಕಾರಣವೂ ಇದೆ. ಮನಸ್ಸನ್ನು ನಿಗ್ರಹದಲ್ಲಿಟ್ಟು, ಮಹತ್ತರವಾದದ್ದನ್ನು ಸಾಧಿಸಲು ಇವು ಪೂರಕವಾಗಿರುತ್ತಿದ್ದವು. ಅಂಥ ಆಚಾರಗಳಿಗೆ ಕಾರಣ ಹುಡುಕುವ ಯತ್ನವಿದು..

ಮಹಾಬಲ ಸೀತಾಳಬಾವಿ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಿಂದುಗಳ ಧಾರ್ಮಿಕ ಚಟುವಟಿಕೆಗಳಲ್ಲಿ ಅರಿಶಿನ-ಕುಂಕುಮದ ಬಳಕೆ ವ್ಯಾಪಕವಾಗಿದೆ. ಅದರಲ್ಲೂ ಅರಿಶಿನಕ್ಕೆ ಹೆಚ್ಚು ಮಹತ್ವವಿದೆ. ಕುಂಕುಮವು ಸಿಂಧೂರದ ರೀತಿಯಲ್ಲಿ ಮತ್ತು ಪೂಜೆಗೆ ಮಾತ್ರ ಬಳಕೆಯಾದರೆ, ಅರಿಶಿನವು ಪೂಜೆಗೆ, ಮೈಗೆ ಬಳಿದುಕೊಳ್ಳುವುದಕ್ಕೆ, ಮದುವೆಗಳಲ್ಲಿ ಹಾಗೂ ಕೊನೆಗೆ ಅಡುಗೆಮನೆಯಲ್ಲೂ ಅತಿ ಹೆಚ್ಚು ಬಳಕೆಯಾಗುತ್ತದೆ. ಶುದ್ಧತೆ, ಫಲವಂತಿಕೆ, ಪಾವಿತ್ರ್ಯದ ಸಂಕೇತವಾಗಿ ಅರಿಶಿನವನ್ನು ಬಳಸುತ್ತಾರೆ. ದೇವರ ಅಲಂಕಾರಕ್ಕೆ, ಹಿಶೇಷವಾಗಿ ವಿಷ್ಣು ಪೂಜೆಗೆ ಅರಿಶಿನ ಬಳಸುವುದು ಹೆಚ್ಚು.

ಅರಿಶಿನ ಒಂದು ಅತ್ಯುತ್ತಮ ಗಿಡಮೂಲಿಕೆ. ಅರಿಶಿನದ ಕೊಂಬುಗಳನ್ನು ಆಯುರ್ವೇದದ ಔಷಧಗಳ ತಯಾರಿಕೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಬಳಸಲಾಗುತ್ತದೆ. ಅರಿಶಿನಕ್ಕೆ ಕ್ಯಾನ್ಸರ್ ತಡೆಯುವ ಶಕ್ತಿಯೂ ಇದೆ ಎಂದು ಸಾಕಷ್ಟು ಸಂಶೋಧನೆಗಳು ಹೇಳಿವೆ. ದೇಹಕ್ಕೆ ಇದನ್ನು ಬಳಿದುಕೊಂಡರೆ ಚರ್ಮ ರೋಗಗಳು ಬರುವುದಿಲ್ಲ ಎಂದು ಹೇಳಲಾಗುತ್ತದೆ. 

ಹಾಗೆಯೇ ಇದು ಚರ್ಮದ ಹೊಳಪನ್ನು ಹೆಚ್ಚಿಸುವ ಮೂಲಕ ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುತ್ತದೆ. ಆದರೆ, ಮಾರುಕಟ್ಟೆಯಲ್ಲಿ ಇಂದು ಸಿಗುವ ಅರಿಶಿನದ ಪುಡಿ ಎಲ್ಲ ಸಾಚಾ ಅಲ್ಲ. ಅವುಗಳಲ್ಲಿ ರಾಸಾಯನಿಕ ಬೆರೆಸಿರಬಹುದು. ಶುದ್ಧ ಅರಿಶಿನ ಕೊಂಬನ್ನು ಒಣಗಿಸಿ, ಪುಡಿ ಮಾಡಿದರಷ್ಟೇ ಅದು ಅಸಲಿ ಅರಿಶಿನ. ಪೂಜೆಗೂ, ಚರ್ಮಕ್ಕೂ, ಅಡುಗೆಗೂ ಈ ನೈಸರ್ಗಿಕ ಅರಿಶಿನ ಮಾತ್ರ ಶ್ರೇಷ್ಠ. ಅರಿಶಿನದ ಈ ಎಲ್ಲ ಪ್ರಯೋಜನಗಳನ್ನು ಮನಗಂಡೇ ಅದಕ್ಕೆ ಧಾರ್ಮಿಕ ಮಹತ್ವ ನೀಡಲಾಗಿದೆ. 

ಆಕಾರವಿಲ್ಲದ ದೇವರಿಗೆ ಮೂರ್ತಿ ಪೂಜೆ ಏಕೆ?

ದೇವರಿಗೆ ಅರಿಶಿನ ಶ್ರೇಷ್ಠ ಎಂದರೆ ಅದರ ಬಳಕೆ ಹೆಚ್ಚುತ್ತದೆಯಲ್ಲವೇ? ಹಾಗಾಗಿ. ಕೇವಲ ಅದನ್ನು ಮೈಗೆ ಬಳಿದುಕೊಂಡರೆ ಅಥವಾ ಅಡುಗೆ ಮೂಲಕ ಸೇವಿಸಿದರೆ ಮಾತ್ರ ಪ್ರಯೋಜನ ಅಂತೇನೂ ಇಲ್ಲ. ನಮ್ಮ ಸುತ್ತಮುತ್ತ ಅರಿಶಿನವಿದ್ದರೂ ಸಾಕು, ಅದಕ್ಕೆ ವಾತಾವರಣದಲ್ಲಿರುವ ಅಪಾಯಕಾರಿ ಕೀಟಾಣುಗಳನ್ನು ಹೀರಿಕೊಳ್ಳುವ ಶಕ್ತಿ ಇರುವುದರಿಂದ ಆರೋಗ್ಯಕ್ಕೆ ಒಳ್ಳೆಯದು.