Asianet Suvarna News Asianet Suvarna News

ಮಾಡಿದ್ದುಣ್ಣೋ ಮಹರಾಯ ಎಂದು ನಗುತ್ತಿವೆಯಾ ಚಿಪ್ಪು ಹಂದಿಗಳು?

ಕೊರೋನಾ ಎಂಬುದು ಮನುಷ್ಯನ ಬೇಟೆಯಿಂದ ಬೇಸತ್ತ ಚಿಪ್ಪು ಹಂದಿ ಹಾಗೂ ಬಾವಲಿಗಳ ಯೋಜಿತ ಸಂಚಿರಬಹುದೇ?

Is Collective Karma Catching Up human being now
Author
Bangalore, First Published Apr 17, 2020, 6:11 PM IST

ಅದೊಂದು ಅಮವಾಸ್ಯೆಯ ಅರ್ಧರಾತ್ರಿ. ಕಾಡಿನ ಜೌಗು ಮರಳ ಪ್ರದೇಶದಲ್ಲಿ ಹರಟೆಗಾಗಿ ಒಟ್ಟಾದವು ಚಿಪ್ಪು ಹಂದಿಗಳು. ಒಂದಿಷ್ಟು ಚಿಪ್ಪು ಹಂದಿಗಳು ಹರಟೆ ಹೊಡೆಯುತ್ತಿದ್ದವು. ಆ ಪ್ರಗ್ನೆಂಟ್ ಚಿಪ್ಪುಹಂದಿ ಮರಳಿನಲ್ಲಿ ಹುದುಗುತ್ತಾ ಮೈ ಬೆಚ್ಚಗಾಗಿಸಿಕೊಂಡು ವಿಶ್ರಾಂತಿಸಲು ಪ್ರಯತ್ನಿಸುತ್ತಿತ್ತು. ಇನ್ನೊಂದಿಷ್ಟು ಚಳ್ಳೆಪಿಳ್ಳೆ ಚಿಪ್ಪುಹಂದಿಗಳು ಆಟದಲ್ಲಿ ತೊಡಗಿದ್ದವು. ಈ ಸಂದರ್ಭದಲ್ಲೇ ಮಜವಾಗಿದ್ದ ಹರಟೆಯ ಮಧ್ಯೆ ಒಂದು ಹಂದಿ ಮನುಷ್ಯರ ಹೆಸರೆತ್ತಿತ್ತು. ತಕ್ಷಣ ಚರ್ಚೆ ಗಂಭೀರ ರೂಪಕ್ಕೆ ತಿರುಗಿತು. 

ಬೇಟೆಗಾರರಿಗೆ ಬುದ್ಧಿ ಕಲಿಸೋಣ
ಚಿಪ್ಪುಹಂದಿಗಳ ಚಿಪ್ಪಿನಡಿಯಿರುವ ಚೂರು ಮಾಂಸದಾಸೆಗೆ ಹಾಗೂ ಅವುಗಳ ಚಿಪ್ಪಿನಿಂದ ಔಷಧಿ ತಯಾರಿಸುವ ಅಸಂಬದ್ಧಕ್ಕಾಗಿ ಮನುಷ್ಯ ಪ್ರಾಣಿ ಅವುಗಳ ನಿರಂತರ ಬೇಟೆಯಲ್ಲಿ ತೊಡಗಿದ್ದರಿಂದ ಅವು ಈಗಾಗಲೇ ಶೇ.80ಕ್ಕೂ ಹೆಚ್ಚು ತಮ್ಮವರನ್ನು ಕಳೆದುಕೊಂಡಿದ್ದವು. ಇಂದೋ ನಾಳೆಯೋ ತಾವೂ ಬಲಿಯಾಗುವ ದುಸ್ವಪ್ನ ಅವುಗಳನ್ನು ಪ್ರತಿರಾತ್ರಿ ಕಾಡುತ್ತಿದ್ದುದನ್ನು ಅವು ಅಂದು ಹಂಚಿಕೊಂಡು ನೊಂದವು. ಅಳಿವಿನಂಚಿನಲ್ಲಿರುವ ತಮ್ಮ ಸಂತತಿಯ ಕುರಿತು ನೋವಿನಲ್ಲಿ ಮಾತನಾಡುವಾಗ ಅರಿವಿಲ್ಲದೆಯೇ ಅವುಗಳ ದೃಷ್ಟಿ ತಮ್ಮ ಮುದ್ದಾದ, ಮನುಷ್ಯರಿರುವ ಕ್ರೂರ ಪ್ರಪಂಚದ ಅರಿವಿಲ್ಲದ ಮುಗ್ಧ ಮರಿಗಳತ್ತ ಹೊರಳಿತ್ತು. ಮಕ್ಕಳ ಜೀವಕ್ಕಾಗಿಯಾದರೂ ಈ ಸಮಸ್ಯೆಗೊಂದು ಪರಿಹಾರ ಕಂಡುಕೊಳ್ಳಲೇಬೇಕೆಂದು ನಿರ್ಧರಿಸಿದ ಅವು ಉದ್ದ ನಾಲಿಗೆ ಚಾಚಿ ಎದುರು ಹರಿವ ಇರುವೆಗಳನ್ನು ಎಳೆದುಕೊಂಡು ತಿನ್ನುತ್ತಾ ಏನು ಮಾಡಬಹುದೆಂದು ಯೋಚಿಸತೊಡಗಿದವು.

ಕಾಮಾಟಿಪುರದ ವೇಶ್ಯೆಯರು ಈಗೇನು ಮಾಡುತ್ತಿದ್ದಾರೆ!

ಬುದ್ಧಿವಂತ ಮಾನವನನ್ನು ಮಣಿಸೋದು ಸಾಧ್ಯವೇ?
ತನ್ನ ಮನೆ ಹಿರಿಯರ ಮಾತುಗಳನ್ನು ಕೇಳುತ್ತಿದ್ದ ಬಿಸಿರಕ್ತದ ಚಿಪ್ಪುಹಂದಿಯೊಂದು 'ನಾವು ಮನುಷ್ಯರನ್ನು ಕೊಲ್ಲಬೇಕು. ಮನುಷ್ಯತ್ವವೇ ಇಲ್ಲದ ಅವರು ನಮ್ಮನ್ನು ಹೇಗೆ ಕೊಂದು ನಾಶಪಡಿಸುತ್ತಿದ್ದಾರೋ ಅದಕ್ಕೆ ಅಂಥದೇ ಪ್ರತೀಕಾರ ತೆಗೆದುಕೊಳ್ಳಬೇಕು' ಎಂದಿತು. ಇದನ್ನು ಕೇಳಿದ ಹಿರಿಯ ಚಿಪ್ಪುಹಂದಿಗಳೆಲ್ಲ ಗೊಳ್ಳೆಂದು ನಕ್ಕವು. 'ಇದು ಮೂರ್ಖತನವಷ್ಟೇ. ದೊಡ್ಡ ಸಂಖ್ಯೆಯಲ್ಲಿದ್ದು, ವಿಶ್ವವನ್ನೇ ಆಳುತ್ತಿರುವ ಬುದ್ಧಿವಂತ ಮಾನವ ವರ್ಗವನ್ನು ಮಣಿಸಲು ನಮ್ಮಿಂದ ಹೇಗೆ ತಾನೇ ಸಾಧ್ಯ? ಸುಮ್ಮನೆ, ಆಗುವುದರ ಕುರಿತು ಯೋಚಿಸೋಣ, ನಾವೆಲ್ಲ ಎಲ್ಲಿಯಾದರೂ ಮನುಷ್ಯರ ಕಣ್ಣಿಗೆ ಕಾಣದಂತೆ ವಲಸೆ ಹೋಗಿ ಅಡಗಿಕೊಳ್ಳೋಣ' ಎಂದಿತು ಅಜ್ಜ ಚಿಪ್ಪುಹಂದಿ. 

ಸಹಾಯ ಮಾಡುತ್ತೇನೆಂದ ಬಾವಲಿ
ಇವುಗಳ ಮಾತನ್ನು ಅಲ್ಲಿಯೇ ಮರದಲ್ಲಿ ತಲೆ ಕೆಳಗೆ ಹಾಕಿಕೊಂಡು ನೇತಾಡುತ್ತಿದ್ದ ಬಾವುಲಿ ಕೇಳಿಸಿಕೊಂಡಿತು. ಈ ಬುದ್ಧಿವಂತ ಪಕ್ಷಿ ಮನುಷ್ಯರನ್ನು ಮಣಿಸಲು ನಾನು ನಿಮಗೆ ಸಹಾಯ ಮಾಡುತ್ತೇನೆಂದಿತು. ಈ ಬಗ್ಗೆ ರಾತ್ರಿಯಿಡೇ ಚರ್ಚಿಸಿದ ಬಳಿಕ ಬಾವಲಿಯು ತಾನು ಸಂಗ್ರಹಿಸಿಟ್ಟುಕೊಂಡಿದ್ದ ಅಗೋಚರ ನ್ಯಾನೋ ಮಿಸೈಲ್ ಒಂದನ್ನು ಹಂದಿಗಳಿಗೆ ನೀಡಿತು. ಈ ಮಿಸೈಲನ್ನು ಚಿಪ್ಪುಹಂದಿಗಳೆಲ್ಲ ತಮ್ಮೊಳಗೆ ಸೇರಿಸಿಕೊಂಡು ಮನುಷ್ಯರು ಸಿಕ್ಕಾಗ ಅವರ ಮೇಲೆ ಪ್ರಯೋಗಿಸಲು ಪ್ಲ್ಯಾನ್ ಮಾಡಿದವು.

ಕೊರೋನಾ ನಂತರ ವಂಚಕ ದೇಶ ಚೀನಾ ಮಾಡಿದ್ದೇನು ಗೊತ್ತಾ?

ಪ್ರಗ್ನೆಂಟ್ ಮಿಸ್ಸಿಂಗ್
ಇದಾಗಿ ಕೆಲವೇ ದಿನಗಳಲ್ಲಿ ಪ್ರಗ್ನೆಂಟ್ ಚಿಪ್ಪುಹಂದಿ ಮಾಯವಾಗುತ್ತದೆ. ಮನುಷ್ಯರು ಆಕೆಯನ್ನು ಬೇಟೆಯಾಡಿ ಚೀನಾದ ಜೀವಂತ ಪ್ರಾಣಿಗಳ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಬಿಡುತ್ತಾರೆ. ಇದೀಗ ತಮ್ಮ ಶತ್ರುವಿನ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಸರಿಯಾದ ಸಮಯ. ಗರ್ಭಿಣಿಯ ಶಾಪ ಹಾಗೂ ಸಿಟ್ಟು ತಟ್ಟದೇ ಬಿಡುವುದಿಲ್ಲ. ಆಕೆ ನ್ಯಾನೋ ಮಿಸೈಲನ್ನು ಮನುಷ್ಯರ ಮೇಲೆ ಬಳಸುತ್ತಾಳೆ. ಆ ಮಿಸೈಲ್‌ ಒಬ್ಬರಾದ ಬಳಿಕ ಮತ್ತೊಬ್ಬ ಮನುಷ್ಯರನ್ನು ಬಲಿ ಪಡೆಯುತ್ತಾ ಸಾಗುತ್ತದೆ. ಕಡೆಗೂ ಮನುಷ್ಯರ ವಿರುದ್ಧದ ಹೋರಾಟದಲ್ಲಿ ಚಿಪ್ಪುಹಂದಿಗಳು ಗೆಲ್ಲುತ್ತವೆ. ಇಷ್ಟಕ್ಕೂ ತಾ ಮಾಡಿದ ಪಾಪ ತಾನೇ ಕಳೆಯಬೇಕಲ್ಲವೇ?

Follow Us:
Download App:
  • android
  • ios