ಕಾರವಾರ ಭಟ್ಕಳ ಮಾರ್ಗದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮುಕ್ಕಾಲು ಭಾಗ ಪೂರ್ಣವಾಗಿದ್ದು, ಇನ್ಮುಂದೆ ಇಲ್ಲಿ ಸಂಚರಿಸುವ ವಾಹನ ಸವಾರರು ಟೋಲ್ ಪಾವತಿಸಬೇಕಾಗುತ್ತದೆ. 

ಕಾರವಾರ [ಫೆ.07]: ಕಾರವಾರದಿಂದ ಭಟ್ಕಳ ಗಡಿಯವರೆಗೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ 66 ರ ಚತುಷ್ಪಥ ಕಾಮಗಾರಿಯ ಶೇ. 65 ರಿಂದ 70 ರಷ್ಟು ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಸವಾರರು ಟೋಲ್ ಪಾವತಿಸಲು ಸಿದ್ಧರಾಗಬೇಕಿದೆ. 

Add Asianetnews Kannada as a Preferred SourcegooglePreferred

ಅಂಕೋಲಾ ತಾಲೂಕಿನ ಬೇಲೆಕೇರಿ ಸಮೀಪ ಹಾಗೂ ಹೊನ್ನಾವರ ತಾಲೂಕಿನ ಹಳದಿಪುರ(ಬಡಗಣಿ) ಬಳಿ ಟೋಲ್‌ಗೇಟ್ ವ್ಯವಸ್ಥೆ ಮಾಡಲಾಗಿದೆ. ಶೇ. 75 ಕ್ಕಿಂತ ಹೆಚ್ಚಿನ ಕಾಮಗಾರಿ ಪೂರ್ಣಗೊಂಡರೆ ಮಾತ್ರ ಟೋಲ್ ಪಡೆಯಲು ಕಂಪನಿಗೆ ಅವಕಾಶವಿದೆ. ಈಗಾಗಲೇ ಶೇ. 65 ರಿಂದ 70 ರಷ್ಟು ಕಾಮಗಾರಿಪೂರ್ಣ ಗೊಂಡಿರುವುದರಿಂದ ಶೀಘ್ರದಲ್ಲೇ ಟೋಲ್ ಪಾವತಿ ಮಾಡಬೇಕಾಗುವ ಸಾಧ್ಯತೆಯಿದೆ. ಎರಡೂ ಕಡೆಗಳಲ್ಲಿ ಟೋಲ್ ಕಟ್ಟಡ ನಿರ್ಮಾಣವಾಗಿದ್ದು, ಅಗತ್ಯ
ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಶೇ. 75 ರಷ್ಟು ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆ ಸವಾರರಿಂದ ಹಣ ಪಡೆಯುವ ಸಾಧ್ಯತೆಯಿದೆ.

ಬಡವರ ಲಕ್ಷ ಲಕ್ಷ ಹಣ ನುಂಗಿ ಪೋಸ್ಟ್ ಮ್ಯಾನ್‌ ಪರಾರಿ : ಕಂಗಾಲಾದ ಜನ..

ಶೇ.65 ರಿಂದ 70 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, 2021 ರ ಡಿಸೆಂಬರ್ ಒಳಗೆ ಸಂಪೂರ್ಣ ಕಾಮಗಾರಿ ಪೂರ್ಣಗೊಳಿಸುವ ಸಾಧ್ಯತೆಯಿದೆ. ಭೂಸ್ವಾಧೀನವೇ ಬಾಕಿ ಉಳಿದುಕೊಂಡಿದೆ. ಕುಮಟಾ, ಭಟ್ಕಳ ತಾಲೂಕಿನಲ್ಲಿ ಕೆಲವು ಕಡೆ ಸ್ವಾಧೀನ ಪ್ರಕ್ರಿಯೆ ನಡೆಯಬೇಕಿದೆ. 2021 ರಲ್ಲೇ ಪೂರ್ಣಗೊಳ್ಳಬೇಕಿದ್ದ ಕಾಮಗಾರಿ ಭೂಸ್ವಾಧೀನ, ಮೂಲ ನಕ್ಷೆಯಲ್ಲಿ ಬದಲಾವಣೆ, ಸುರಂಗ ಕೊರೆಯುವುದು, ಗುಡ್ಡ ಅಗೆಯುವುದು ಒಳಗೊಂಡು ವಿವಿಧ ಕಾರಣದಿಂದ ವಿಳಂಬವಾಗುತ್ತಿದೆ.

ಸ್ಥಗಿತವಾಯ್ತು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ...

ಮೂಲ ಹೆದ್ದಾರಿಯಲ್ಲೇ ಭೂಸ್ವಾಧೀನ ಮಾಡಿಕೊಂಡು ಕಾಮಗಾರಿ ಆರಂಭಿಸಲು ಗುತ್ತಿಗೆ ಪಡೆದ ಕಂಪನಿ ಮುಂದಾದಾಗ ಹಲವಾರು ಕಡೆಗಳಲ್ಲಿ ವಿರೋಧ ವ್ಯಕ್ತವಾಗಿತ್ತು. ಪ್ರತಿಭಟನೆಗಳು ನಡೆದಿತ್ತು. ಕಾರವಾರ ತಾಲೂಕಿನಲ್ಲಿ ಹೈದರಾ ಘಾಟ್ ಮೇಲೆ ಬೈಪಾಸ್ ಕಾಮಗಾರಿ ನಡೆಸುವಂತೆ, ಕುಮಟಾದಲ್ಲಿ ಹಂದಿಗೋಣ ಬಳಿ ಬೈಪಾಸ್ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದರು. ಕಾರವಾರದಲ್ಲಿ 4 ಪ್ರತ್ಯೇಕ ಸುರಂಗ ಕೊರೆಯಲಾಗಿದೆ. ಅದರಲ್ಲಿ ನಗರದ ಬಿಲ್ಟ್ ಸರ್ಕಲ್ ಬಳಿ ಒಂದು ಸುರಂಗ ಕೊರೆಯುವ ಕೆಲಸ ಪ್ರಗತಿಯಲ್ಲಿದೆ. 3 ಸುರಂಗ ಪೂರ್ಣಗೊಂಡಿದೆ. ಒಂದು ಸುರಂಗ ಕಾರವಾರ ಕಡೆಯಿಂದ ಅಂಕೋಲಾ ಕಡೆಗೆ ತೆರಳಲು ಹಾಗೂ ಮತ್ತೊಂದು ಅತ್ತ ಕಡೆಯಿಂದ ಇತ್ತ ಕಡೆ ಬರಲು ಇದೆ.