Asianet Suvarna News Asianet Suvarna News

ಕೊರೋನಾ ತಡೆಗಟ್ಟಲು ಥಟ್ಟಂತ ಹೇಳಬಲ್ಲ ಉಪಾಯಗಳು!

ಕೊರೋನ ವೈರಸ್‌ ಅಥವ ಕೋವಿಡ್‌-19 ಎಂಬ ಹೆಸರಿರುವ ಈ ವೈರಸ್‌, 185 ದೇಶಗಳ 8.59 ಲಕ್ಷ ಜನರಲ್ಲಿ ಸೋಂಕನ್ನು ಉಂಟು ಮಾಡಿದೆ. 42,335 ಜನರ ಸಾವಿಗೆ ಕಾರಣವಾಗಿದೆ. ಭಾರತದಲ್ಲಿ ಕೊರೋನ ಸೋಂಕಿನ ಮೊದಲ ಪ್ರಕರಣವು ಜನವರಿ 30, 2020ರಂದು ಕಾಣಿಸಿಕೊಂಡಿತು. ಈ ಸೋಂಕಿನ ಮೂಲ ಚೀನಾ. ಈಗ 1397 ಜನರಿಗೆ ಕರೋನ ಸೋಂಕು ಹರಡಿರುವುದು ದೃಡ ಪಟ್ಟಿದೆ. ಇಡೀ ದೇಶದಲ್ಲಿ 35 ಜನರು ಕೊರೋನಾ ಕಾರಣ ಮೃತಪಟ್ಟಿದ್ದಾರೆ. ಕರ್ನಾಟಕದಲ್ಲಿ 102 ಜನರು ಸೋಂಕಿಗೆ ಈಡಾಗಿ, ಮೂವರು ಮರಣಿಸಿದ್ದಾರೆ. ಈ ಅಂಕಿ ಸಂಖ್ಯೆಯನ್ನು ನೋಡಿದರೆ ಭಯವಾಗಬಹುದು. ಆದರೆ ಭಯಪಡಬೇಕಾದ ಅಗತ್ಯವಿಲ್ಲ. ಇದಕ್ಕೆ ಕಾರಣಗಳಿವೆ.

Immediate preventive measures to avoid coronavirus by Dr N. Someswara
Author
Bangalore, First Published Apr 5, 2020, 8:59 AM IST

-ಡಾ ನಾ.ಸೋಮೇಶ್ವರ

ಸತ್ಯಗಳು

ಕೊರೋನ ವೈರಸ್‌ ಸೋಂಕಿನ ಬಗ್ಗೆ ಕೆಲವು ಸತ್ಯಗಳನ್ನು ನಾವು ಮನಗಾಣಬೇಕು.

ಕೊರೋನ ಸೋಂಕಿನ ಮೂಲ ಭಾರತವಲ್ಲ. ಚೀನಾ ಮತ್ತು ಇತರ ದೇಶಗಳಿಂದ ಸೋಂಕನ್ನು ಹೊತ್ತು ತಂದ ಅಂತಾರಾಷ್ಟ್ರೀಯ ಪ್ರಯಾಣಿಕರು ಮಾತ್ರ ಸೋಂಕಿನ ಮೂಲ.

ಕೊರೋನಾ ಸೋಂಕನ್ನು ಪೂರ್ಣ ಪ್ರಮಾಣದಲ್ಲಿ ಗುಣಪಡಿಸುವ ಯಾವುದೇ ಪ್ರಮಾಣಬದ್ಧ ಔಷಧವಿಲ್ಲ. ಜಗತ್ತಿನ ವಿವಿಧ ದೇಶಗಳಲ್ಲಿ ವಿವಿಧ ಔಷಧಗಳನ್ನು ಪ್ರಯೋಗಿಸಿ ನೋಡುತ್ತಿದ್ದಾರದರೂ, ಸಂಪೂರ್ಣವಾಗಿ ಗುಣಪಡಿಸಬಲ್ಲ, ಯಾವುದೇ ಸುರಕ್ಷಿತ ಔಷಧವು ಇದುವರೆಗೂ ದೊರೆತಿಲ್ಲ. ವಾಸ್ತವದಲ್ಲಿ ಕೊರೋನ ಸೌಮ್ಯ ಸ್ವರೂಪದ ವೈರಸ್‌. ಸೋಂಕಿತರಲ್ಲಿ ಶೇ.3ರಷ್ಟುಮಂದಿ ಸಾಯುತ್ತಾರೆ. ನಮಗೆ ಗೊತ್ತಿರುವ ಅತ್ಯಂತ ಭಯಾನಕ ವೈರಸ್‌ ಎಂದರೆ ಇಬೋಲ. ಇಬೋಲ ಸೋಂಕು 90% ಜನರನ್ನು ಕೊಲ್ಲುತ್ತಿತ್ತು. ಈಗ ಸಂಶೋಧನೆಗಳು ನಡೆದು ಸಾವಿನ ಪ್ರಮಾಣ 50% ಆಸುಪಾಸಿನಲ್ಲಿದೆ.

ಕೊರೋನಾಗೆ ನೂರರಲ್ಲಿ ಇಬ್ಬರು ಸತ್ತರೆ, ಕುಡಿತದ ಹಿಂತೆಗೆತಕ್ಕೆ ಒಬ್ಬರು ಸಾಯಬಹುದು!

ಕೊರೋನ ಸೋಂಕು ಅಂಟಿದವರಲ್ಲಿ 81%ರಷ್ಟುಜನರು ವಾರದಲ್ಲಿ ಪೂರ್ಣ ಪ್ರಮಾಣದಲ್ಲಿ ಗುಣಮುಖರಾಗುವರು. 16% ಜನರು ಅಲ್ಪಸ್ವಲ್ಪ ತೊಡಕುಗಳನ್ನು ಅನುಭವಿಸಿ, 2-3 ವಾರಗಳಲ್ಲಿ ಗುಣಮುಖರಾಗುವ ಸಾಧ್ಯತೆಯು ಹೆಚ್ಚು.

ಕೊರೋನ ಸೋಂಕು ಸಾವು ನೋವನ್ನು ಉಂಟು ಮಾಡುವುದು ರೋಗ ನಿರೋಧಕ ಸಾಮರ್ಥ್ಯವು ದುರ್ಬಲವಾಗಿರುವವರಲ್ಲಿ ಮಾತ್ರ. ಹೃದ್ರೋಗಿಗಳು, ಮಧುಮೇಹಿಗಳು, ರಕ್ತದ ಏರೊತ್ತಡ ಪೀಡಿತರು, ಅಸ್ತಮಾ ಮುಂತಾದ ದೀರ್ಘಕಾಲದ ಉಸಿರಾಟ ತೊಂದರೆಗಳಿರುವವರು, ಕ್ಯಾನ್ಸರ್‌ ಚಿಕಿತ್ಸೆಯನ್ನು ತೆಗೆದುಕೊಳ್ಳುತ್ತಿರುವರು, ದೀರ್ಘಕಾಲ ಧೂಮಪಾನ, ಮದ್ಯಪಾನ ಇಲ್ಲವೇ ಮಾದಕ ವಸ್ತುಗಳ ಚಟಕ್ಕೆ ತುತ್ತಾಗಿರುವರು, ಸ್ಟೀರಾಯ್ಡ್‌ ಔಷಧಗಳನ್ನು ದೀರ್ಘಕಾಲ ತೆಗೆದುಕೊಳ್ಳುತ್ತಿರುವರು (ಅಂಗ ಬದಲಿ ಜೋಡಣೆ ಮಾಡಿಸಿಕೊಂಡವರು, ಆಥ್ರ್ರೈಟಿಸ್‌ ರೋಗ ಚಿಕಿತ್ಸೆಯನ್ನು ಪಡೆಯುವವರು, ಅಸ್ತಮ ಪೀಡಿತರು ಇತ್ಯಾದಿ) ಹಾಗೂ 60 ವರ್ಷವನ್ನು ಮೀರಿದ ವೃದ್ಧರು - ಇವರು ಈ 3% ವ್ಯಾಪ್ತಿಯಲ್ಲಿ ಬರುವ ಜನರು. ಇಂಥವರು ರೋಗವೇ ಬರದಿರುವ ಹಾಗೆ ಜೀವನಶೈಲಿಯನ್ನು ರೂಪಿಸಿಕೊಳ್ಳಬೇಕು. ಇವರನ್ನು ‘ದುರ್ಬಲ 3% ಗುಂಪು’ ಎಂದು ಕರೆಯಬಹುದು.

ನಾಲ್ಕು ಹಂತಗಳು

ಕೊರೋನ ಸೋಂಕು ಮಾತ್ರವಲ್ಲ, ಯಾವುದೇ ಸೋಂಕಾದರೂ ಸರಿ, ನಾಲ್ಕು ಹಂತಗಳಲ್ಲಿ ಹರಡುತ್ತದೆ.

ಹಂತ-1

ವಿದೇಶಗಳಲ್ಲಿ ಕೊರೋನ ಸೋಂಕನ್ನು ಅಂಟಿಸಿಕೊಂಡು, ಭಾರತಕ್ಕೆ ಬರುವ ಅಂತರಾಷ್ಟ್ರೀಯ ಪ್ರಯಾಣಿಕರು ಮಾತ್ರ ಮೊದಲ ಹಂತದಲ್ಲಿ ಸೋಂಕು ಪೀಡಿತರಾಗಿರುತ್ತಾರೆ. ಈ ಹಂತದಲ್ಲಿ ಕೊರೋನ ವೈರಸ್‌ ಹೊರಗಿನಿಂದ ಬಂದವರಲ್ಲಿ ಮಾತ್ರ ಬದುಕಿದೆ. ಸ್ಥಳೀಯ ಭಾರತೀಯರಲ್ಲಿ ಇಲ್ಲ. ಸ್ಥಳೀಯವಾಗಿ ಎಲ್ಲೂ ಸೋಂಕಿನ ಆಕರವಿಲ್ಲ. ಈ ಅವಧಿಯಲ್ಲಿ, ಭಾರತದೊಳಗೆ ಬರುವ ಎಲ್ಲಾ ಸೋಂಕು ಪೀಡಿತ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು 14 ದಿನಗಳ ಕಾಲ ಪ್ರತ್ಯೇಕವಾಗಿಟ್ಟು (ಕ್ವಾರಂಟೈನ್‌), ಜನಸಾಮಾನ್ಯರಲ್ಲಿ ಬೆರೆಯಲು ಅವಕಾಶವನ್ನು ಕೊಡಿದಿದ್ದರೆ, ಆ ಸೋಂಕು ಅವರಲ್ಲಿಯೇ ಅವಸಾನವಾಗುತ್ತದೆ. ಪ್ರಸ್ತುತ ಈ ಹಂತವನ್ನು ನಾವು ಮೀರಿದ್ದೇವೆ.

ಹಂತ-2

ವಿದೇಶದಿಂದ ಕೊರೋನ ಸೋಂಕನ್ನು ಅಂಟಿಸಿಕೊಂಡು ಭಾರತಕ್ಕೆ ಬಂದು, ಸ್ಥಳೀಯರೊಡನೆ ಒಡನಾಡಿದಾಗ, ಒಡನಾಡಿದ ಕೆಲವು ಆತ್ಮೀಯರಿಗೆ ಸೋಂಕು ಅಂಟುವ ಸಾಧ್ಯತೆಯು ಹೆಚ್ಚಿರುತ್ತದೆ. ಕಲಬುರಗಿಯ ಸಿದ್ದಿಕಿಯವರು ಕರ್ನಾಟಕದ ಪ್ರಥಮ ಕೊರೋನ ಬಲಿ. ಅವರೊಡನೆ ನಿಕಟವಾಗಿ ಓಡಾಡಿದ ಅವರ ಮಗಳಿಗೆ ಹಾಗೂ ಅವರಿಗೆ ಚಿಕಿತ್ಸೆಯನ್ನು ನೀಡಿದ ವೈದ್ಯರಿಗೆ ಸೋಂಕು ಅಂಟಿಕೊಂಡಿತು. ಮಗಳು ಮತ್ತು ಚಿಕಿತ್ಸೆ ನೀಡಿದ ವೈದ್ಯರು ಸ್ಥಳೀಯ ಭಾರತೀಯರು. ಅವರಿಗೆ ಸೋಂಕು ಯಾರಿಂದ ಅಂಟಿತು ಎನ್ನುವುದು ನಮಗೆ ಖಚಿತವಾಗಿ ತಿಳಿದಿದೆ. ಹಾಗಾಗಿ ಆ ಸೋಂಕಿತರನ್ನು 14 ದಿನಗಳ ಕಾಲ ಪ್ರತ್ಯೇಕವಾಗಿಟ್ಟರೆ (ಕ್ವಾರಂಟೈನ್‌) ಕೊರೋನ ಸೋಂಕು ಅವರಲ್ಲಿಯೇ ಅವಸಾನವಾಗುತ್ತದೆ. ಪ್ರಸ್ತುತ ನಾವೆಲ್ಲ ಈ ಹಂತದಲ್ಲಿದ್ದೇವೆ.

ಕೀಟಾಣುಗಳನ್ನು ದೂರವಿಡುವ ನಿಮ್ಮ ಈ ಟ್ರಿಕ್ಸ್ ನಡೆಯೋಲ್ಲ

ಹಂತ-3

ಒಂದು ವೇಳೆ ಸಿದ್ಧಿಕಿಯವರ ಮಗಳು ಹಾಗೂ ಚಿಕಿತ್ಸೆ ನೀಡಿದ ವೈದ್ಯರು, ರಾಜಾರೋಷವಾಗಿ ನಮ್ಮ ಸಮಾಜದಲ್ಲಿ ಎಲ್ಲೆಂದರಲ್ಲಿ ಓಡಾಡುತ್ತಾ, ಸೋಂಕನ್ನು ಹಂಚಿದರು ಎಂದು ಭಾವಿಸೋಣ. ಹೀಗೆಯೇ ಕರ್ನಾಟಕದಲ್ಲಿ ಎಲ್ಲ ಕೊರೋನ ಸೋಂಕು ಪೀಡಿತರು ವಿಮಾನ, ರೈಲು, ಬಸ್ಸು, ಕಾರುಗಳಲ್ಲಿ ಓಡಾಡಿ, ಮದುವೆ, ಮುಂಜಿ, ಹಬ್ಬ, ಜಾತ್ರೆಗಳಲ್ಲಿ ಪಾಲುಗೊಂಡರೆ, ಸೋಂಕು ಎಲ್ಲರಿಗೂ ಹರಡುತ್ತದೆ. ಇಂತಹ ಪರಿಸ್ಥಿಯಲ್ಲಿ ಸೋಂಕು ಯಾರಿಂದ ಬಂದಿತು, ಯಾವಾಗ ಬಂದಿತು, ಹೇಗೆ ಬಂದಿತು ಎನ್ನುವುದನ್ನು ಗುರುತು ಹಿಡಿಯುವುದು ಅಸಾಧ್ಯವಾಗಿ ಬಿಡುತ್ತದೆ. ಹೀಗಾದರೆ ಸೋಂಕು ಮೂರನೆಯ ಹಂತವನ್ನು ಪ್ರವೇಶಿಸಿದೆ ಎಂದರ್ಥ. ಪ್ರಸ್ತುತ ಭಾರತವು ಈ ಹಂತವನ್ನು ಪ್ರವೇಶಿಸಿಲ್ಲ.

ಹಂತ-4

ಕೊರೋನ ಸೋಂಕು ದುರ್ಬಲ 3% ಗುಂಪಿಗೆ ಬಂದಿತೆಂದರೆ, ಅವರನ್ನು ತುರ್ತು ನಿಗಾ ಘಟಕದಲ್ಲಿ ಇಡಬೇಕಾಗುತ್ತದೆ. ಅವರಿಗೆ ಹಲವು ಸಂದರ್ಭಗಳಲ್ಲಿ ಯಾಂತ್ರಿಕ ಉಸಿರಾಟದ ನೆರವನ್ನು ವೆಂಟಿಲೇಟರ್‌ ಮೂಲಕ ನೀಡಬೇಕಾಗುತ್ತದೆ. ನಮ್ಮ ಇಡೀ ದೇಶದಲ್ಲಿ ಇರುವ ವೆಂಟಿಲೇಟರುಗಳ ಪ್ರಮಾಣ ಸುಮಾರು 40,000. ಒಂದು ವೇಳೆ 40,000 ಕ್ಕೂ ಅಧಿಕ, ದುರ್ಬಲ 3% ಗುಂಪಿನವರು ಸೋಂಕುಗ್ರಸ್ತರಾದರು ಎಂದುಕೊಳ್ಳಿ. ಆಗ ಅವರಿಗೆ ಅಗತ್ಯ ಚಿಕಿತ್ಸೆಯನ್ನು ನೀಡಲು ತುರ್ತು ನಿಗಾ ಘಟಕವಾಗಲಿ, ವೆಂಟಿಲೇಟರ್‌ ಆಗಲಿ ಇರುವುದಿಲ್ಲ. ಅಂತಹವರು ಚಿಕಿತ್ಸೆಯಿಲ್ಲದೆ ಮನೆ ಮನೆಗಳಲ್ಲಿ, ಬೀದಿ ಬೀದಿಗಳಲ್ಲಿ ಸಾಯಬೇಕಾಗುತ್ತದೆ. ಇಟಲಿಯಲ್ಲಿ ಆದದ್ದು ಇದೇ. ಒಂದು ವೇಳೆ ಕೊರೋನ ಸೋಂಕು 3 ಅಥವ 4ನೆಯ ಹಂತವನ್ನು ಪ್ರವೇಶಿಸಿತೆಂದರೆ, ನಮ್ಮ ವೈದ್ಯಕೀಯ ವ್ಯವಸ್ಥೆಯೂ ಕುಸಿದು ಬೀಳುತ್ತದೆ. ಹಾಗಾಗದೇ ಇರಬೇಕಾದರೆ, ನಾವೂ ನೀವೂ ಹಾಗೂ ಪ್ರತಿಯೋರ್ವ ಭಾರತೀಯರು ಮಾಡಲೇ ಬೇಕಾದ ಮುಖ್ಯ ಕೆಲಸಗಳು ಎರಡು ಇವೆ. ಮೊದಲನೆಯದು ಲಾಕ್‌ ಡೌನ್‌ ಪರಿಪಾಲನೆ ಹಾಗೂ ಎರಡನೆಯದು ರೋಗರಕ್ಷಣಾ ಸಾಮರ್ಥ್ಯ ವರ್ಧನೆ.

ಲಾಕ್‌ ಡೌನ್‌

ನಾವು ಲಾಕ್‌ ಡೌನ್‌ ಏಕೆ ಪರಿಪಾಲಿಸಬೇಕು, ಇದರಿಂದ ಕೊರೋನ ಸೋಂಕನ್ನು ಹೇಗೆ ತಡೆಗಟ್ಟಬಹುದು ಎನ್ನುವುದನ್ನು ಅರ್ಥಮಾಡಿಕೊಳ್ಳಲು ಕೊರೋನ ಏರ್ಮಡಿ ಬೆಳವಣಿಗೆಯನ್ನು (expotential growth) ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಏನಿದು ಏರ್ಮಡಿ ಬೆಳವಣಿಗೆ?

ಕೊರೋನಾ ಭಾರತದಲ್ಲಿ ಸಾವಿರಾರು ಜನರನ್ನು ಸಾಯಿಸೊಲ್ಲ, ಯಾಕೆ ಗೊತ್ತಾ?

ಕೊರೋನ ಸೋಂಕು ಒಬ್ಬನಿಗೆ ಇದೆ ಎಂದು ಭಾವಿಸೋಣ. ಅವನು ಒಂದು ದಿನದಲ್ಲಿ ಮೂವರಿಗೆ ಈ ಸೋಂಕನ್ನು ಹರಡಬಲ್ಲ. (ಪ್ರತಿಯೊಂದು ಸೋಂಕಿಗೂ ಒಂದು ಸೋಂಕು ಸಂಖ್ಯೆ ಇರುತ್ತದೆ. ಉದಾಹರಣೆಗೆ ದಡಾರ. ದಡಾರ ಸೋಂಕು ಒಂದು ಮಗುವಿಗೆ ಬಂದರೆ, ಆ ಸೋಂಕು ಒಂದು ದಿನದಲ್ಲಿ 18 ಮಕ್ಕಳಿಗೆ ಹರಡುತ್ತದೆ) ಹಾಗಾಗಿ ಅವನು ಮೊದಲ ದಿನದಂದು ಮೂವರಿಗೆ ಸೋಂಕನ್ನು ಹರಡುತ್ತಾನೆ. ಎರಡನೆಯ ದಿನ, ಈ ಮೂವರು, ಹೊಸದಾಗಿ ಸೋಂಕನ್ನು ಪಡೆದವರು, ಒಬ್ಬೊಬ್ಬರು ಮತ್ತೆ ಮೂವರಿಗೆ ಸೋಂಕನ್ನು ಹರಡುತ್ತಾರೆ. ಅದರೆ ಎರಡನೆಯ ದಿನದ ಕೊನೆಯಲ್ಲಿ ಹೊಸದಾಗಿ 9 ಜನರಿಗೆ ಸೋಂಕು ಅಂಟಿಕೊಳ್ಳುತ್ತದೆ. ಮೂರನೆಯ ದಿನ, ಈ ಒಂಬತ್ತು ಜನರಲ್ಲಿ, ಪ್ರತಿಯೂಬ್ಬರೂ, ಮೂವರು ಮೂವರಿಗೆ ಸೋಂಕನ್ನು ಹರಡುತ್ತಾರೆ. ಹಾಗಾಗಿ ಮೂರನೆಯ ದಿನದ ಅಂತ್ಯಕ್ಕೆ ಸೋಂಕು ಪೀಡಿತರ ಸಂಖ್ಯೆಯು 27 ಆಗುತ್ತದೆ. ನಾಲ್ಕನೆಯ ದಿನ 81 ಜನಕ್ಕೆ, ಐದನೆಯ ದಿನ 243 ಜನಕ್ಕೆ, ಆರನೆಯ ದಿನ 729 ಜನಕ್ಕೆ ಹಾಗೂ 7ನೆಯ ದಿನಕ್ಕೆ 2187 ಜನರಿಗೆ ಹರಡುತ್ತದೆ. ಹೀಗೆ ಪ್ರತಿ ದಿನ ಸೋಂಕು ಪೀಡಿತರ ಪ್ರಮಾಣ ಮುಪ್ಪಟ್ಟು ಹೆಚ್ಚುವ ಪರಿಯನ್ನು ಏರ್ಮಡಿ ಬೆಳವಣಿಗೆ ಎಂದು ಕರೆಯುತ್ತಾರೆ.

ಈಗ ಈ ಏರ್ಮಡಿ ಬೆಳವಣಿಗೆಯನ್ನು ತಡೆಗಟ್ಟುವುದು ಹೇಗೆ? ಮೊದಲ ಸೋಂಕುಗ್ರಸ್ತ ವ್ಯಕ್ತಿ ಸಮಾಜದೊಳಗೆ ಬೆರೆಯದಂತೆ, ಇತರರಿಗೆ ಹರಡದಂತೆ, ಪ್ರತ್ಯೇಕವಾಗಿ ಇಡುವುದು (ಕ್ವಾರ್‌ಂಟೈನ್‌). ಹೀಗೆ ಆತನನ್ನು 14 ದಿನಗಳ ಕಾಲ ಪ್ರತ್ಯೇಕವಾಗಿ ಇಟ್ಟರೆ, ಒಂದು ವಾರದಲ್ಲಿ ಆ ಒಬ್ಬನಿಂದ 2187 ಜನರಿಗೆ ಸೋಂಕು ಹರಡದಂತೆ ತಡೆಗಟ್ಟಬಹುದು. ಎರಡನೆಯದು ಜನಸಾಮಾನ್ಯರು ಮುಕ್ತವಾಗಿ ಓಡಾಡುವುದನ್ನು ನಿಲ್ಲಿಸಿ ತಮ್ಮ ತಮ್ಮ ಮನೆಯಲ್ಲಿ ತಾವಿರುವುದು. ನಾವು ಸೋಂಕುಗ್ರಸ್ತ ಪ್ರತಿಯೊಬ್ಬ ವ್ಯಕ್ತಿಯನ್ನು ಗುರುತಿಸಿ, ಅವನನ್ನು ಪ್ರತ್ಯೇಕವಾಗಿ ಇರಿಸುವುದು (ಕ್ವಾರಂಟೈನ್‌) ಅಸಾಧ್ಯದ ಮಾತು. ನಮ್ಮ ಕೈಗೆ ಸಿಗದೆ ಕಳ್ಳತನದಿಂದ ತಲೆಮರೆಸಿಕೊಂಡು ಓಡಾಡುವವರು ಸಾಕಷ್ಟುಮಂದಿ ಇರುತ್ತಾರೆ. ಅಂತಹವರು ಸದ್ದಿಲ್ಲದ ಹಾಗೆ ಜನ ಸಾಮಾನ್ಯರಿಗೆ ಸೋಂಕನ್ನು ಹರಡುತ್ತಿರುತ್ತಾರೆ. ಜನಸಾಮಾನ್ಯರೂ ಸಹ 3 ವಾರಗಳ ಕಾಲ ಲಾಕ್‌ ಡೌನ್‌ ಪರಿಪಾಲಿಸಿ, ತಮ್ಮ ತಮ್ಮ ಮನೆಗಳಲ್ಲಿ ಇದ್ದರೆ, ಸಾಧ್ಯವಾದಷ್ಟುಬೇಗ ಕೊರೋನ ಮಾಹಾಮಾರಿಗೆ ಇತಿಶ್ರೀ ಹಾಡಬಹುದು.

ಮಿಲಿಟರಿ ಪಡೆ

ಕರೋನ ಸೋಂಕು, ದುರ್ಬಲ ರೋಗರಕ್ಷಣಾ ಸಾಮರ್ಥ್ಯವಿರುವವರಿಗೆ ಬೇಗ ಅಂಟಿಕೊಳ್ಳುತ್ತದೆ ಹಾಗೂ ಸಾವು ನೋವನ್ನು ಉಂಟು ಮಾಡುತ್ತದೆ ಎನ್ನುವುದನ್ನು ತಿಳಿದುಕೊಂಡೆವು. ಹಾಗಾಗಿ ದುರ್ಬಲ 3% ಗುಂಪಿನವರು ಮಾತ್ರವಲ್ಲ, ಪ್ರತಿಯೊಬ್ಬರು ತಮ್ಮ ತಮ್ಮ ರೋಗರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು.

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹೀಗೆ ಮಾಡಿ ಅಂದಿದೆ ಆಯುಷ್‌ ಇಲಾಖೆ

ಏನಿದು ರೋಗ ರಕ್ಷಣಾ ಸಾಮರ್ಥ್ಯ?

ನಮ್ಮ ಭಾರತ ದೇಶವನ್ನು ರಕ್ಷಿಸಲು ಒಂದು ಮಿಲಿಟರಿ ಪಡೆಯಿದೆ. ಹಾಗೆಯೇ ನಮ್ಮ ದೇಹವನ್ನು ರಕ್ಷಿಸಲು ಮಾನವ ದೇಹದ ಮಿಲಿಟರಿ ಪಡೆಯೊಂದಿದೆ. ಅದುವೇ ರೋಗರಕ್ಷಣಾ ವ್ಯವಸ್ಥೆ . ಮಾನವ ದೇಹದ ಮಿಲಿಟರಿ ಪಡೆಯ ಅಸಂಖ್ಯ ಅಕ್ಷಾೌಹಿಣಿ ಸೈನ್ಯವನ್ನು ರೂಪಿಸುವುದು ನಮ್ಮ ಬಿಳಿಯ ರಕ್ತಕಣಗಳು. ಬಿಳಿಯ ರಕ್ತ ಕಣಗಳು ಎನ್ನುವುದು ಹಲವು ನಮೂನೆಯ ಕಣಗಳಿಗೆ ನೀಡಿರುವ ಸಮಷ್ಠಿ ಹೆಸರು. ತಟಸ್ಥಕಣ (್ಞಛ್ಠಿಠ್ಟಿಟphಜ್ಝಿ), ಕ್ಷೀರಕಣ (್ಝyಞphಟ್ಚyಠಿಛಿ), ನೀಲೊಲವಿನ ಕಣ (ಚಿasಟphಜ್ಝಿ) ಕೆಂಪೊಲವಿನ ಕಣ (ಛಿಟsಜ್ಞಿಟphಜ್ಝಿ) ಹಾಗೂ ಬೃಹದೇಕ ಕಣಗಳು (ಞಟ್ಞಟ್ಚyಠಿಛಿ). ಇವುಗಳಲ್ಲಿ ಕ್ಷೀರಕಣಗಳು ಮುಖ್ಯವಾದವು. ಅವುಗಳಲ್ಲಿ ಟಿ-ಕಣಗಳು ಮತ್ತು ಬಿ-ಕಣಗಳು ಎಂಬ ಎರಡು ನಮೂನೆಗಳಿವೆ. ಟಿ-ಕಣಗಳು ಕೊರೋನ ವೈರಸ್ಸುಗಳು ಮಾತ್ರವಲ್ಲ, ಯಾವುದೇ ರೋಗಜನಕವಾದರೂ ಸರಿ, ಅದರ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ, ಬಿ-ಕಣಗಳಿಗೆ ನೀಡುತ್ತದೆ. ಬಿ-ಕಣಗಳು ಆ ರೋಗಜನಕವನ್ನು ನಿಯಂತ್ರಿಸಬಲ್ಲ ಇಲ್ಲವೇ ಸಂಪೂರ್ಣವಾಗಿ ನಾಶಮಾಡಿಬಲ್ಲ ಅಸ್ತ್ರಗಳನ್ನು ತಯಾರಿಸುತ್ತವೆ.

ರಾಮಾಯಣದಲ್ಲಿ ಕಾಕಾಸುರನ ಪ್ರಸಂಗ ಬರುತ್ತದೆ. ರಾಮನು ಕಾಕಾಸುರನ ಮೇಲೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸುತ್ತಾನೆ. ಕಾಕಾಸುರನು ಮೂರು ಲೋಕದಲ್ಲಿ ಅಡಗಿಕೊಳ್ಳಲು ಪ್ರಯತ್ನಿಸುತ್ತಾನೆ. ಅವನು ಎಲ್ಲೇ ಹೋದರೂ ಬ್ರಹ್ಮಾಸ್ತ್ರವು ಅವನನ್ನು ಕೊಲ್ಲಲು ಹುಡುಕಿಕೊಂಡು ಹೋಗುತ್ತದೆ. ನಮ್ಮ ಮಿಲಿಟರಿಯಲ್ಲಿ ಇಂತಹ ಗೈಡೆಡ್‌ ಮಿಸೈಲುಗಳಿವೆ. ಗುರಿ ನಿರ್ದೇಶಿತ ಕ್ಷಿಪಣಿಗಳಿವು. ಒಂದು ವಿಮಾನವನ್ನು ನಾಶಪಡಿಸುವಂತೆ ಗುರಿ ನಿರ್ದೇಶಿತ ಕ್ಷಿಪಣಿಯನ್ನು ಹಾರಿಸಿದರೆ, ಆ ವಿಮಾನವು ಎಲ್ಲೇ ಹಾರಲಿ, ಎಷ್ಟುಸಲ ಬೇಕಾದರೂ ಲಾಗ ಹಾಕಿ ತಪ್ಪಿಸಿಕೊಳ್ಳಲು ಯತ್ನಿಸಲಿ, ಅದನ್ನು ಬಿಡದೆ ಕ್ಷಿಪಣಿಯು ಅಟ್ಟಿಸಿಕೊಂಡು ಹೋಗುತ್ತದೆ. ಅ ವಿಮಾನಕ್ಕೆ ಅಪ್ಪಳಿಸಿ ನಾಶಮಾಡುತ್ತದೆ. ಅಂತಹ ಗುರಿ ನಿರ್ದೇಶಿತ ಕ್ಷಿಪಣಿಗಳನ್ನು ಬಿ-ಕಣಗಳು ತಯಾರಿಸುತ್ತವೆ. ಇವುಗಳ ಹೆಸರೇ ಪ್ರತಿಕಾಯ . ಕೊರೋನ ವೈರಸ್ಸು ನಮ್ಮ ಶರೀರದಲ್ಲಿ ಎಲ್ಲಿಯೇ ಅಡಗಿರಲಿ, ಅದನ್ನು ಹುಡುಕಿಕೊಂದು ಹೋಗಿ ಕೊಲ್ಲುತ್ತದೆ.

ಇವನ್ನು ತಿನ್ನಿ

ಈ ಹಿನ್ನೆಲೆಯಲ್ಲಿ ನಾವು ನಮ್ಮ ರೋಗ ರಕ್ಷಣಾ ಸಾಮರ್ಥ್ಯವನ್ನು ಎರಡು ರೀತಿಯಲ್ಲಿ ಹೆಚ್ಚಿಸಿಕೊಳ್ಳಬಹುದು. ಮೊದಲನೆಯದು ಪೌಷ್ಠಿಕ ಆಹಾರ ಪದಾರ್ಥಗಳ ಸೇವನೆ ಹಾಗೂ ಎರಡನೆಯದು ಇತ್ಯಾತ್ಮಕ ಮನೋಭಾವ. ಪೌಷ್ಠಿಕ ಆಹಾರದಲ್ಲಿ ಪ್ರೊಟೀನುಗಳು ಮುಖ್ಯ. ಪ್ರತಿಕಾಯಗಳ ನಿರ್ಮಾಣಕ್ಕೆ ಉತ್ತಮ ಪ್ರೋಟೀನುಗಳು ಅಗತ್ಯ.

- ಎಲ್ಲ ಕಾಳುಗಳನ್ನು ನೆನೆಹಾಕಿ. ಮೊಳಕೆ ಬರಿಸಿ. ಪ್ರತಿದಿನ ಬೆಳಿಗ್ಗೆ ಒಂದು ಹಿಡಿ ಹಾಗೂ ರಾತ್ರಿ ಒಂದು ಹಿಡಿ ತಿನ್ನುತ್ತಾ ಬನ್ನಿ.

- ಪ್ರತಿ ದಿನ ಎರಡು ಬಾದಾಮಿ, ಎರಡು ಗೋಡಂಬಿ, ಎರಡು ಅಕ್ರೋಡು, ಒಂದು ಚಮಚ ಹಸಿ ಕಡಲೆಕಾಯಿ ಬೀಜ, ಒಂದು ಚಮಚ ಕುಂಬಳ ಬೀಜ ಹಾಗೂ ಒಂದು ಚಮಚ ಸೌತೆ ಬೀಜವನ್ನು ತಿನ್ನುತ್ತಾ ಬನ್ನಿ. ಇವು ಪ್ರತಿಕಾಯಗಳ ನಿರ್ಮಾಣಕ್ಕೆ ಅಗತ್ಯವಾದ ಉತ್ತಮ ಪ್ರೋಟೀನುಗಳನ್ನು ಒದಗಿಸುತ್ತವೆ.

- ರೋಗ ನಿರೋಧಕ ಶಕ್ತಿಯನ್ನು ವರ್ಧಿಸಬಲ್ಲ ಬಣ್ಣದ ತರಕಾರಿಗಳನ್ನು ಹಾಗೂ ಹಣ್ಣುಗಳನ್ನು ವಿಶೇಷವಾಗಿ ಹುಳಿಹಣ್ಣುಗಳನ್ನು ಹೆಚ್ಚಿಗೆ ಸೇವಿಸಬೇಕು.

- ಎರಡನೆಯದು ಭಾರತೀಯ ಸಂಬಾರ ಪದಾರ್ಥಗಳನ್ನು ನಿಯಮಿತವಾಗಿ ಬಳಸುವುದು. ಜೀರಿಗೆ, ಮೆಣಸು, ಶುಂಠಿ, ಅರಸಿನ, ಚಕ್ಕೆ, ಲವಂಗ, ಅಜವಾನ, ಕೊತ್ತಂಬರಿ, ಇಂಗು, ಪುದಿನ, ಹುಣಸೆ, ನಿಂಬೆ, ಈರುಳ್ಳಿ, ಬೆಳ್ಳುಳ್ಳಿ ಇತ್ಯಾದಿಗಳನ್ನು ಅನಾದಿ ಕಾಲದಿಂದಲೂ ಆರೋಗ್ಯವರ್ಧಕಗಳಾಗಿ ಉಪಯೋಗಿಸುತ್ತಾ ಬಂದಿದ್ದೇವೆ. ಇವು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಹೇಗೆ ಹೆಚ್ಚಿಸುತ್ತವೆ ಎನ್ನುವ ಪ್ರಶ್ನೆಯು ನಮ್ಮ ಮನಸ್ಸಿನಲ್ಲಿ ಮೂಡುತ್ತದೆ. ಇದಕ್ಕೆ ಉತ್ತರ ಶತ್ರುವಿನ ಶತ್ರು ನಮ್ಮ ಮಿತ್ರ ಎನ್ನುವ ಸೂತ್ರ. ಮೆಣಸು ಏಕೆ ಖಾರವಾಗಿದೆ? ಚಕ್ಕೆ, ಲವಂಗಗಳೇಕೆ ಅಷ್ಟುಘಾಟು? ಇಂಗುವೇಕೆ ಅಷ್ಟುತೀಕ್ಷ$್ಣ? ಈ ಪ್ರಶ್ನೆಗಳಿಗೆಲ್ಲ ಉತ್ತರ, ಇವೆಲ್ಲ ಸಸ್ಯಗಳು ಕಂಡುಕೊಂಡ ರಕ್ಷಣೋಪಾಯಗಳು. ಸಸ್ಯಗಳಲ್ಲೂ ರೋಗಗಳನ್ನು ಉಂಟು ಮಾಡುವ ಅಸಂಖ್ಯ ಬ್ಯಾಕ್ಟೀರಿಯ, ವೈರಸ್ಸು, ಶಿಲೀಂಧ್ರಗಳಿವೆ. ಇವುಗಳಿಂದ ತನ್ನನ್ನು ಹಾಗೂ ತನ್ನ ಭಾವೀ ಸಂತಾನವನ್ನು (ಅಂದರೆ ಬೀಜಗಳನ್ನು) ರಕ್ಷಿಸಿಕೊಳ್ಳಲು, ಸಸ್ಯಗಳು ತೀಕ್ಷ$್ಣವಾದ ರಾಸಾಯನಿಕಗಳನ್ನು ತಮ್ಮ ಒಡಲಿನಲ್ಲಿ ಸಂಗ್ರಹಿಸಿಕೊಳ್ಳುತ್ತವೆ. ಇದನ್ನು ಅರಿತ ನಮ್ಮ ಪೂರ್ವಜರು, ಸಸ್ಯಗಳ ಆತ್ಮರಕ್ಷಣೆಯ ಅಸ್ತ್ರಗಳನ್ನೇ ತಮ್ಮ ಆತ್ಮ ರಕ್ಷಣೆಗೂ ಬಳಸಿಕೊಂಡರು. ಸಂಬಾರ ಪದಾರ್ಥಗಳನ್ನು ನಿತ್ಯ ಹಿತ-ಮಿತ ಪ್ರಮಾಣದಲ್ಲಿ ಬಳಸಲಾರಂಭಿಸಿದರು. ಇಂತಹವುಗಳಲ್ಲಿ ದಕ್ಷಿಣ ಭಾರತದ ರಸಮ್‌ ಒಂದು ಅದ್ಭುತ ಟಾನಿಕ್‌! ಯಾರು ರಸಮನ್ನು ನಿತ್ಯ ಬಳಸುವರೋ, ಅವರ ಸಾಮಾನ್ಯ ಆರೋಗ್ಯ ಉತ್ತಮವಾಗಿರುತ್ತದೆ.

"

ಇತ್ಯಾತ್ಮಕ ಮನೋಭಾವ

ಯದ್ಭಾವಂ ತದ್ಭವತಿ ಎಂದರು ಭಗವಾನ್‌ ಬುದ್ಧ. ನಾವು ಹೇಗೆ ಯೋಚಿಸುತ್ತವೆಯೋ ಹಾಗೆಯೇ ನಡೆಯುತ್ತದೆ ಎನ್ನುವುದು ಬುದ್ಧನ ಮಾತಿನ ಸಾರಾಂಶ. ಹಾಗಾಗಿ ಕೊರೋನ ಸೋಂಕಿನವಧಿಯಲ್ಲಿ ಅಗತ್ಯ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುವುದರ ಜೊತೆಯಲ್ಲಿ ವಿನಾಕಾರಣ ಹೆದರದೆ ಸಕಾರಾತ್ಮಕವಾಗಿ ಬದುಕನ್ನು ನಡೆಸೋಣ. ಕೊರೋನ ಸೋಂಕು ಬಂದವರಲ್ಲಿ 97% ರಷ್ಟುಜನರು ಪೂರ್ಣ ಗುಣಮುಖರಾಗುತ್ತಾರೆ, ಒಂದು ವೇಳೆ, ನನಗೆ ಸೋಂಕು ಅಂಟಿಕೊಂಡರೂ ಸಹ, ನಾನು ಆ 97% ಜನರಲ್ಲಿ ಒಬ್ಬನಾಗುವೆ ಎಂದು ಧೈರ್ಯವನ್ನು ತಂದುಕೊಳ್ಳೋಣ. ಧೈರ್ಯಂ ಸರ್ವತ್ರ ಸಾಧನಂ. ಇತ್ಯಾತ್ಮಕ ಅಥವ ಸಕಾರಾತ್ಮಕ ನಿಲುವನ್ನು ಹೆಚ್ಚಿಸಬಲ್ಲಂತಹ ಲಘು ವ್ಯಾಯಾಮ, ಪ್ರಾಣಾಯಾಮ, ಯೋಗ ಹಾಗೂ ಧ್ಯಾನದಲ್ಲಿ ತೊಡಗೋಣ. ಧ್ಯಾನವು ರೋಗರಕ್ಷಣಾ ಶಕ್ತಿಯ ಬಲವರ್ಧನೆಗೆ ನೆರವಾಗುತ್ತದೆ ಎನ್ನುವುದನ್ನು ಆಧುನಿಕ ವೈದ್ಯಕೀಯವೂ ಒಪ್ಪಿದೆ. ಹಾಗೆಯೇ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುವ ಧೂಮಪಾನ-ಮಧ್ಯಪಾನದಿಂದ ದೂರವಿರೋಣ. ಹಾಗಾಗಿ ನಾವು-ನೀವು ಮನಸ್ಸು ಮಾಡಿದರೆ, ಈ ಕೊರೋನ ಸೋಂಕನ್ನು ಸುಲುಭವಾಗಿ ನಮ್ಮ ದೇಶದಿಂದ ಓಡಿಸಬಹುದು.

 

Follow Us:
Download App:
  • android
  • ios