ಕೇಳಿರಿ ಮಲೆನಾಡಿಗರ ಕ್ವಾರಂಟಿನ ಹಾಡು!
1950ರ ಸುಮಾರಿಗೆ ಮಲೆನಾಡಿನಲ್ಲಿ ಪ್ಲೇಗು, ಕಾಲರಾ, ಸಿಡುಬು ಹಾಗು ಮಲೇರಿಯಾ ಕಾಣಿಸಿಕೊಂಡಾಗ ಆಂಗ್ಲ ಸರಕಾರ ಜನರ ರಕ್ಷಣೆಗೆಂದು ಅಲ್ಲಲ್ಲಿ ಕ್ವಾರಂಟೈನ ಕ್ಯಾಂಪುಗಳನ್ನ ಸ್ಥಾಪಿಸಿತ್ತು. ಈ ಸಂದರ್ಭದಲ್ಲಿ ಶಿವಮೊಗ್ಗೆಯ ದಿ. ರಾಮಚಂದ್ರ ಗಿರಿಮಾಜಿಯವರು ಕೆಳದಿಯ ಹೆಣ್ಣು ಮಕ್ಕಳ ಬಾಯಿಂದ, ಬೆಳ್ಳುಳ್ಳಿ ಹಾಡು, ಬೈಸಿಕಲ್ ಹಾಡು, ಪ್ಲೇಗಿನ ಹಾಡು, ತಂಬಾಕಿನ ಹಾಡು, ಎಲೆ ಅಡಿಕೆ ಪದ. ಕೋರ್ಟ್ ಹಾಡು, ತಿಗಣೆ ಹಾಡು, ಮೊದಲಾದವನ್ನ ಕಲೆಹಾಕಿದಂತೆಯೇ ಈ ಕ್ವಾರಂಟೈನ್ ಹಾಡನ್ನೂ ಕಲೆ ಹಾಕಿದ್ದಾರೆ.
- ಡಾ. ನಾ ಡಿಸೋಜ
ಈ ಹಾಡುಗಳಲ್ಲಿ ಆಧುನಿಕ ಬದುಕಿನ ಅಣಕ, ವಿಡಂಬನೆ, ಟೀಕೆ, ತೀಕ್ಷ್ಣವಾದ ವಿಮರ್ಶೆಯನ್ನ ನಮ್ಮ ಹಳ್ಳಿಜನ ಮಾಡಿರುವುದನ್ನ ಕಾಣಬಹುದು. ಈ ಹಾಡುಗಳಲ್ಲಿ ಕೆಲ ಹಾಡುಗಳನ್ನ ದಿ. ರಾಮಚಂದ್ರ ಗಿರಿಮಾಜಿಯವರು ಸಂಗ್ರಹಿಸಿದ್ದು, ಡಾ ನಾ ಡಿಸೋಜ ಅವರು ಸಂಪಾದಿಸಿರುವ ‘ಹೂವ ಚೆಲ್ಲುತ ಬಾ’ ಕೃತಿಯಿಂದ ಆಯ್ಕೆ ಮಾಡಿ ಇಲ್ಲಿ ನೀಡಿದೆ.
ದರ್ಬಾರ್ ಬಹಳ ನಾಜೂಕು
ಕಾಯಿದೆಯು ಬಹಳ ಹೆಚ್ಚಾಯ್ತು
ಕಲಿಯುಗವಾದರೆ ಬಂದೀತು
ಪ್ಲೇಗ್ ರೋಗಾದರೆ ಹೆಚ್ಚಾಯ್ತು
ಗಜಮುಖಗಣಪ ಸರಸ್ವತಿಯ
ಶೃಂಗೇರಿಯಾ ಶಾರದೆಯಾ
ಬೇಡಿಕೊಂಡರುದರ ದೇವರಿಗೆ
ಬಲುಜನ ಬಿದ್ದರು ಕ್ವಾರಂಟಿಗೆ ದರ್ಬಾರ್....
ಊರೊಳಗಿರವುದು ಯತ್ನಿಲ್ಲ
ಊರಾ ಬಿಟ್ಟರೆ ಅನ್ನಿಲ್ಲ
ರೈತರ ಬಿಟ್ಟರೆ ಬುತ್ತಿಲ್ಲ
ಬಡವರು ಉಳಿವುದೇ ದುಸ್ತಾರ ದರ್ಬಾರ್....
ಊರೊಳಗಿರುವರು ಸಾಹುಕಾರರು
ಅರಮನೆಗೊಬ್ಬರು ನೇಮಕಾರರು
ಮೈ ತುಂಬಿರಬೇಕು ಎಚ್ಚರ
ಕ್ವಾರಂಟಿಗೆ ಬಿದ್ದಿರಿ ಎಚ್ಚರ ದರ್ಬಾರ್....
ಇಂದು ಇದು ಕ್ವೀನ್ ಸರಕಾರ
ರಾಣಿಯು ಮಾಡ್ತಾಳೆ ದರ್ಬಾರ
ಸ್ತ್ರೀಯರ ಕಾರ್ಬಾರವಾಯಿತು
ಬಡವರು ಉಳಿವುದು ದುಸ್ತಾರ ದರ್ಬಾರ್....
ಕೊರೋನಾ ತಡೆಗಟ್ಟಲು ಥಟ್ಟಂತ ಹೇಳಬಲ್ಲ ಉಪಾಯಗಳು!