ಯುವಕ ಸಂಪತ್‌ನ ಶವ ಸಕಲೇಶಪುರದ ಕಲ್ಲಹಳ್ಳಿ ಬಳಿ ಪ್ರಪಾತದಲ್ಲಿ ಪತ್ತೆ. ಕಾರು ಬಿಟ್ಟು ನಾಪತ್ತೆಯಾಗಿದ್ದ ಸಂಪತ್‌ನನ್ನು ಕೊಲೆ ಮಾಡಿ ಪ್ರಪಾತಕ್ಕೆ ಎಸೆದಿರುವ ಶಂಕೆ. ರಕ್ತದ ಕಲೆಗಳಿರುವ ಕಾರು ಪತ್ತೆಯಾಗಿತ್ತು. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಹಾಸನ (ಮೇ 14): ಮಡಿಕೇರಿಯ ಯುವಕ ಸಂಪತ್ ಇದೀಗ ಪ್ರಪಾತದಲ್ಲಿ ಅನಾಥ ಶವವಾಗಿ ಪತ್ತೆ ಆಗಿದ್ದಾರೆ. ಸಂಪತ್‌ನನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಿ ಕಾರಿನ ಸಮೇತ ಪ್ರಪಾತಕ್ಕೆ ಬೀಸಾಡಿಲಾಗಿದೆ. ಸಂಪತ್‌ ಮೃತದೇಹ ಸಕಲೇಶಪುರ ತಾಲ್ಲೂಕಿನ ಕಲ್ಲಹಳ್ಳಿ ಬಳಿಯ ಪ್ರಪಾತದಲ್ಲಿ ಪತ್ತೆಯಾಗಿದೆ. ಈ ಪ್ರಕರಣವು ಇಡೀ ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಶವವು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಹೊಸದಾಗಿ ಬರ್ಬರವಾಗಿ ಹತ್ಯೆ ಮಾಡಿದ ಅನುಮಾನ ಉಂಟಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹತ್ಯೆ ಪೂರ್ವಾಪರ ಹಿನ್ನಲೆ:
ಮೃತನಾಗಿರುವ ಸಂಪತ್ ಕೊಡಗು ಜಿಲ್ಲೆ ಮಡಿಕೇರಿ ಮೂಲದವನು. ಏಪ್ರಿಲ್ 9 ರಂದು ತನ್ನ ಗೆಳೆಯನಿಂದ ಕಾರು ತೆಗೆದುಕೊಂಡು ಅವರು ಕೊಡಗು ಜಿಲ್ಲೆಯ ಕುಶಾಲನಗರದಿಂದ ಹಾಸನ ಕಡೆಗೆ ಪ್ರಯಾಣಿಸಿದ್ದರು. ಕಾರು ತೆಗೆದುಕೊಂಡು ಹೋದ ಸಂಪತ್ ಮೂರ್ನಾಲ್ಕು ದಿನಗಳಾದರೂ ಬಾರದೇ ಕಾಣೆ ಆಗಿದ್ದನು. ಸಂಪತ್ ನಾಪತ್ತೆಯಾದ ಹಿನ್ನೆಲೆಯಲ್ಲಿ ಕುಟುಂಬದವರು ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ನೀಡಿದ್ದಾರೆ. ಮರುದಿನ ಏಪ್ರಿಲ್ 10 ರಂದು ಹಾಸನ ಜಿಲ್ಲೆಯ ಕಲ್ಲಹಳ್ಳಿ ಗ್ರಾಮದ ಬಳಿ ಸಂಪತ್ ತೆಗೆದುಕೊಂಡು ಬಂದಿದ್ದ ಕಾರು ಬಿಟ್ಟು ಹೋಗಿರುವುದು ಪತ್ತೆಯಾಯಿತು. ಕಾರಿನಲ್ಲಿ ರಕ್ತದ ಗುರುತುಗಳು ಕಂಡುಬಂದಿವೆ. ಈ ಹಿನ್ನಲೆಯಲ್ಲಿ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಶೋಧ ಕಾರ್ಯ ಹಾಗೂ ಶವ ಪತ್ತೆ:
ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯ ಪೊಲೀಸರು ತಕ್ಷಣ ಶೋಧ ಕಾರ್ಯ ಆರಂಭಿಸಿದರು. ದುರ್ಗಮ ಕಾಡಿನ ಪ್ರದೇಶದಲ್ಲಿ ಒಂದು ಶವ ಹುಡುಕುವುದು ಸವಾಲಿನ ಕೆಲಸವಾಗಿದೆ. ಆದರೂ, ಕೊಲೆ ಪ್ರಕರಣ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸ್ಥಳೀಯ ನುರಿತರೊಂದಿಗೆ ನಾಲ್ಕು ದಿನಗಳ ಕಾಲ ನಿರಂತರ ಶೋಧ ನಡೆಸಿದ ನಂತರ ಕಲ್ಲಹಳ್ಳಿ ಗ್ರಾಮದ ಸಮೀಪವಿರುವ ಪ್ರಪಾತದಲ್ಲಿ ಸಂಪತ್ ಶವ ಪತ್ತೆಯಾಗಿದೆ. ಶವದ ಸ್ಥಿತಿಗತಿ ಮತ್ತು ರಕ್ತದ ಗುರುತುಗಳನ್ನು ಗಮನಿಸಿದಾಗ ಇದೊಂದು ಕ್ರೂರ ಹತ್ಯೆಯಾಗಿದೆ ಎಂದು ಪೊಲೀಸರು ಪ್ರಾಥಮಿಕವಾಗಿ ನಿರ್ಧರಿಸಿದ್ದಾರೆ

ಹತ್ಯೆಯ ಶಂಕೆಗೆ ಹಲವು ಸಾಕ್ಷ್ಯ:
ಪೋಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಸಂಪತ್ ಅವರನ್ನು ಬೇರೆಡೆ ಕೊಲೆ ಮಾಡಲಾಗಿದೆ. ನಂತರ, ಸಂಪತ್ ಬಂದಿದ್ದ ಕಾರಿನಲ್ಲೇ ಶವವನ್ನು ಕಲ್ಲಹಳ್ಳಿ ಪ್ರಪಾತದ ಬಳಿ ತಂದು ಇಲ್ಲಿ ಬಿಸಾಡಲಾಗಿದೆ ಎಂದು ಶಂಕಿಸಲಾಗಿದೆ. ಈ ಘಟನೆ ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಶವವನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸರು ಈ ಸಂಬಂಧ ಇನ್ನಷ್ಟು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈ ಹಿಂದೆ ನಡೆದ ರಾಜಕೀಯ ಸಂಬಂಧಿತ ಪ್ರಕರಣ ಮತ್ತು ಈ ಹತ್ಯೆಯ ನಡುವಿನ ಸಂಬಂಧವನ್ನು ಪರಿಗಣಿಸಿ ತನಿಖೆ ಮುಂದುವರೆಸುತ್ತಿದ್ದಾರೆ.

ಅರ್ಧ ಕೊಳೆತಿರುವ ಮೃತದೇಹ:
ಸಂಪತ್‌ನಲ್ಲಿ ಕೊಲೆ ಮಾಡಿದ ದುಷ್ಕರ್ಮಿಗಳು ತೀರ ಆಳವಾದ ಪ್ರಪಾತಕ್ಕೆ ಬೀಸಾಡಿ ನಾಲ್ಕು ದಿನಗಳು ಕಳೆದಿದ್ದರಿಂದ ಆತನ ಶವ ಅರ್ಧ ಕೊಳೆತು ಹೋಗಿದೆ. ಇಲ್ಲಿ ಯಾವುದೇ ಕಾಡುಪ್ರಾಣಿಗಳು ಶವ ತಿಂದು, ಎಳೆದಾಡಿಲ್ಲ. ಸಂಪತ್ ಶವವನ್ನು ಅರ್ಧ ಕೊಳೆತ ಸ್ಥಿತಿಯಲ್ಲಿಯೇ ಪ್ರಪಾತದಿಂದ ಮೇಲಕ್ಕೆ ತಂದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕೊಲೆ ಎಂದು ಸಾಬೀತಾದಲ್ಲಿ ಪೊಲೀಸರ ತನಿಖೆ ಇನ್ನಷ್ಟು ಚುರುಕು ಆಗಲಿದೆ.