ಇಂಗ್ಲೆಂಡ್ನಲ್ಲಿ ಕಳೆದ 2 ದಶಕದಿಂದ ಭಾರತ ತಂಡದ ಬಸ್ ಡ್ರೈವರ್ ಆಗಿರೋ ಜೆಫ್ ಗುಡ್ವಿನ್, ತಂಡದ ರೋಚಕ ಕಹಾನಿ ಹೇಳಿದ್ದಾರೆ. ಭಾರತ ತಂಡ ಹಾಗೂ ಇತರ ತಂಡದ ಕುರಿತು ಜೆಫ್ ಹೇಳಿರೋದೇನು? ಸುರೇಶ್ ರೈನಾ ಕುರಿತು ಡ್ರೈವರ್ ಹೇಳಿದ ಘಟನೆ ಯಾವುದು? ಇಲ್ಲಿದೆ ವಿವರ.
ಲಂಡನ್(ಜು.22): ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಸದ್ಯ ಟೆಸ್ಟ್ ಸರಣಿಗೆ ತಯಾರಿ ನಡೆಸುತ್ತಿದೆ. ಈ ನಡುವೆ ಟೀಂ ಇಂಡಿಯಾ ಕುರಿತು ತಂಡದ ಬಸ್ ಡ್ರೈವರ್ ರೋಚಕ ಕತೆಗಳನ್ನ ಬಹಿರಂಗ ಪಡಿಸಿದ್ದಾರೆ.
ಜೆಫ್ ಗುಡ್ವಿನ್ ಕಳೆದ 2 ದಶಕಗಳಿಂದ ಇಂಗ್ಲೆಂಡ್ನಲ್ಲಿ, ಟೀಂ ಇಂಡಿಯಾಗೆ ಬಸ್ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತದ ಜೊತೆಗೆ ಇಂಗ್ಲೆಂಡ್ ಪ್ರವಾಸ ಕೈಗೊಳ್ಳೋ ಎಲ್ಲಾ ತಂಡಕ್ಕೆ ಬಸ್ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಜೆಫ್ ಗುಡ್ವಿನ್ ಪ್ರಕಾರ, ವೃತ್ತಿಪರತೆ ಹೊಂದಿರೋ ವಿಶ್ವದ ಏಕೈಕ ತಂಡ ಭಾರತ. ಹೊಟೆಲ್ನಿಂದ ಸಮಯಕ್ಕೆ ಸರಿಯಾಗಿ ಬಸ್ ಹತ್ತುತ್ತಾರೆ. ಪಂದ್ಯ ಮುಗಿದ ಬಳಿಕ ತಕ್ಕ ಸಮಯದಲ್ಲೇ ಕ್ರೀಡಾಂಗಣದಿಂದ ಹೊಟೆಲ್ಗೆ ತೆರಳಲು ಬಸ್ ಹತ್ತುತ್ತಾರೆ. ಈ ಮೂಲಕ ಸಮಯವನ್ನ ಚಾಚು ತಪ್ಪದೆ ಪಾಲಿಸುತ್ತಾರೆ ಎಂದಿದ್ದಾರೆ.
ಇತರ ದೇಶದ ತಂಡಗಳು ಪಂದ್ಯ ಮುಗಿದ ಬಳಿ ಪಾರ್ಟಿಯಲ್ಲಿ ಹೆಚ್ಚಿನ ಸಮಯ ಕಳೆಯುತ್ತಾರೆ ಎಂದು ಗುಡ್ವಿನ್ ಹೇಳಿದ್ದಾರೆ. ಆದರೆ ಭಾರತ ತಂಡ ಶಿಸ್ತಿನಿಂದ ಕೂಡಿದೆ. ಇತರ ಯಾವುದೇ ತಂಡಗಳಿಗೂ ಹೊಲಿಸಿದರೆ ಭಾರತೀಯ ಕ್ರಿಕೆಟಿಗರು ಪ್ರೀತಿ ಪಾತ್ರರು ಎಂದಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಎಂದರೆ ಗುಡ್ವಿನ್ಗೆ ಅಚ್ಚುಮೆಚ್ಚು.
ಹಿಂದಿನ ಪ್ರವಾಸದಲ್ಲಿ ಜೆಫ್ ಗುಡ್ವಿನ್ ಪತ್ನಿ ಅನಾರೋಗ್ಯಕ್ಕೆ ತುತ್ತಾಗಿದ್ದರು. ಈ ವೇಳೆ, ಸುರೇಶ್ ರೈನಾ ತಾವು ಸಹಿ ಹಾಕಿದ ಜರ್ಸಿಯನ್ನ ಹರಾಜಿಗೆ ನೀಡಿದ್ದರು. ಈ ಮೂಲಕ ಹಣ ಒದಗಿಸಿದ್ದರು. ಈ ಘಟನೆಯನ್ನ ಜೆಫ್ ಗುಡ್ವಿನ್ ಯಾವತ್ತು ಮರೆಯಲ್ಲ ಎಂದಿದ್ದಾರೆ. 1999 ವಿಶ್ವಕಪ್ನಿಂದ ಇಲ್ಲೀವರೆಗೆ ಟೀಂ ಇಂಡಿಯಾ ಕ್ರಿಕೆಟಿಗರ ಬಸ್ ಡ್ರೈವರ್ ಆಗಿ ಜೆಫ್ ಗುಡ್ವಿನ್ ಕಾರ್ಯನಿರ್ವಹಿಸುತ್ತಿದ್ದಾರೆ.
