ಮಗುವಿನ ಮೇಲೆ ಅತ್ಯಾಚಾರ ನಡೆದ 22 ದಿನದಲ್ಲಿ ತೀರ್ಪು
ನಗರದ ರಜ್ವಾಡ ಪ್ರದೇಶದಲ್ಲಿ ಕಳೆದ ಏ.20 ರಂದು 3 ತಿಂಗಳ ಮಗುವಿನ ಮೇಲೆ ಅತ್ಯಾಚಾರಗೈದು, ಹತ್ಯೆ ಮಾಡಿದ್ದ ಪ್ರಕರಣದಲ್ಲಿ ದೋಷಿಗೆ ಇಂದೋರ್ ಜಿಲ್ಲಾ ನ್ಯಾಯಾಲಯ ಶನಿವಾರ ಮರಣ ದಂಡನೆ ವಿಧಿಸಿದೆ. ವಿಶೇಷವೆಂದರೆ ಘಟನೆ ನಡೆದ 22 ದಿನಗಳಲ್ಲಿ ಪ್ರಕರಣದ ತನಿಖೆ, ವಿಚಾರಣೆ ಎಲ್ಲವೂ ಮುಗಿದು ತೀರ್ಪು ನೀಡಲಾಗಿದೆ.
ಇಂದೋರ್: ನಗರದ ರಜ್ವಾಡ ಪ್ರದೇಶದಲ್ಲಿ ಕಳೆದ ಏ.20 ರಂದು 3 ತಿಂಗಳ ಮಗುವಿನ ಮೇಲೆ ಅತ್ಯಾಚಾರಗೈದು, ಹತ್ಯೆ ಮಾಡಿದ್ದ ಪ್ರಕರಣದಲ್ಲಿ ದೋಷಿಗೆ ಇಂದೋರ್ ಜಿಲ್ಲಾ ನ್ಯಾಯಾಲಯ ಶನಿವಾರ ಮರಣ ದಂಡನೆ ವಿಧಿಸಿದೆ. ವಿಶೇಷವೆಂದರೆ ಘಟನೆ ನಡೆದ 22 ದಿನಗಳಲ್ಲಿ ಪ್ರಕರಣದ ತನಿಖೆ, ವಿಚಾರಣೆ ಎಲ್ಲವೂ ಮುಗಿದು ತೀರ್ಪು ನೀಡಲಾಗಿದೆ. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಅತ್ಯಾಚಾರಕ್ಕೆ ಮರಣ ದಂಡನೆ ವಿಧಿಸುವ ಸುಗ್ರೀವಾಜ್ಞೆ ಜಾರಿಯಾದ ಬಳಿಕ, ಮರಣ ದಂಡನೆ ಘೋಷಿಸಲಾದ ಪ್ರಕರಣ ಇದು.
ಏನಾಗಿತ್ತು?: ರಸ್ತೆ ಬದಿ ಬಲೂನ್ ಮಾರುವ ನವೀನ್ ಗಡ್ಕೆ ಎಂಬಾತ ಪತ್ನಿ ಆತನನ್ನು ತೊರೆದಿದ್ದಳು. ಹೀಗಾಗಿ ಆಕೆಯ ಜೊತೆ ಮಾತುಕತೆ ನಡೆಸಿ ಸಂಬಂಧ ಸರಿ ಮಾಡುವಂತೆ ನವೀನ್, ಸಂತ್ರಸ್ತೆ ತಾಯಿಯನ್ನು ಕೋರಿದ್ದ. ಆದರೆ ಆಕೆ ಈತನಿಗೆ ಬೈದು ಕಳುಹಿಸಿದ್ದಳು. ಇದರಿಂದ ಆಕ್ರೋಶಗೊಂಡಿದ್ದ ಆತ ಅದೇ ದಿನ ಮಧ್ಯರಾತ್ರಿ ಮಗುವನ್ನು ಎತ್ತಿಕೊಂಡು ಹೋಗಿ ಸಮೀಪದ ಸ್ಥಳದಲ್ಲೇ ಅತ್ಯಾಚಾರಗೈದು ಬಳಿಕ, ಹತ್ಯೆಗೈದಿದ್ದ.
ಈ ದೃಶ್ಯಗಳೆಲ್ಲಾ ಕಟ್ಟಡವೊಂದರ ಸಮೀಪದ ಸಿಸಿಟೀವಿಯಲ್ಲಿ ಸೆರೆಯಾಗಿದ್ದ ಕಾರಣ ಆತ ಸುಲಭವಾಗಿ ಸಿಕ್ಕಿಬಿದ್ದಿದ್ದ. ಈ ಘಟನೆ ಏ.20 ರಂದು ನಡೆದಿತ್ತು. ಏ.27 ಕ್ಕೆ ಆರೋಪಪಟ್ಟಿ ಸಲ್ಲಿಕೆಯಾಗಿತ್ತು. ಏ.೨೮ರಂದು ನವೀನ ಮೇಲೆ ಆರೋಪ ಹೊರಿಸಲಾಗಿತ್ತು. ಮೇ
1 ರಿಂದ ಪ್ರಕರಣದ ಕುರಿತು ನಿತ್ಯ ವಿಚಾರಣೆ ನಡೆಸಿದ.
ನ್ಯಾ.ವರ್ಷಾ ಶರ್ಮಾ ಮೇ 12 ಕ್ಕೆ ತೀರ್ಪು ಪ್ರಕಟಿಸಿದ್ದಾರೆ. ತೀರ್ಪು ಪ್ರಕಟಣೆ ವೇಳೆ ದೋಷಿಯನ್ನು ಸಮಾಜಕ್ಕೆ ಅಂಟಿದ ಗ್ಯಾಂಗ್ರಿನ್ ಎಂದು ಬಣ್ಣಿಸಿದ ಜಡ್ಜ್, ಇವುಗಳನ್ನು ಕತ್ತರಿಸಿದೇ ಹೋದಲ್ಲಿ ಇದು ಇಡೀ ಸಮಾಜಕ್ಕೆ ಹಬ್ಬುವ ಸಾಧ್ಯತೆ ಇರುತ್ತದೆ. ಇಂಥ ವ್ಯಕ್ತಿಗಳು ಸಮಾಜಕ್ಕೆ ಮಾರಕ. ಸಮಾಜವವನ್ನು ಇಂಥ ವ್ಯಕ್ತಿಗಳಿಂದ ರಕ್ಷಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.