Asianet Suvarna News Asianet Suvarna News

ಶಿರೋಳದಲ್ಲಿ ಸಂಭ್ರಮದ ರೊಟ್ಟಿ ಜಾತ್ರೆ: ಸಹಸ್ರಾರು ಭಕ್ತರು ಭಾಗಿ

ಅಧ್ಯಾತ್ಮದ ಕಡೆಗೆ ಜನ ಜಾಗೃತರಾಗಬೇಕು:ಸ್ವಾಮೀಜಿ| ಶಿರೋಳ ತೋಂಟದಾರ್ಯ ಮಠದಲ್ಲಿ ರೊಟ್ಟಿ ಜಾತ್ರೆ| ಜಾತ್ರೆಯಲ್ಲಿ ರೊಟ್ಟಿ ಊಟ ಸವಿದ ಭಕ್ತರು|

Roti Fair Held in Shirol in Gadag District
Author
Bengaluru, First Published Jan 18, 2020, 7:41 AM IST

ನರಗುಂದ(ಜ.18): ಪ್ರಸಕ್ತ ದಿನಮಾನಗಳಲ್ಲಿ ಭಾರತೀಯ ಶ್ರೀಮಂತ ಸಂಸ್ಕೃತಿಯನ್ನು ಜನತೆ ಮೆರತು ಇಂದು ಅನ್ಯ ದೇಶದ ಆಚಾರ, ವಿಚಾರವನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದು ವಿಷಾದನೀಯ ಎಂದು ಶಿರೋಳ ತೋಂಟದಾರ್ಯ ಮಠದ ಗುರುಬಸವ ಶ್ರೀಗಳು ಹೇಳಿದ್ದಾರೆ.

ಅವರು ಈಚೆಗೆ ತಾಲೂಕಿನ ಶಿರೋಳ ಗ್ರಾಮದ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವ ಹಾಗೂ ನಮ್ಮೂರ ರೊಟ್ಟಿ ಜಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಗದಗ, ಡಂಬಳ, ಶಿರೋಳ ಗ್ರಾಮದಲ್ಲಿ ಭಕ್ತರಿಂದ ರೊಟ್ಟಿ ಸಂಗ್ರಹ ಮಾಡಿ ಜಾತ್ರಾ ಮಹೋತ್ಸವ ದಿನದಂದು ವಿಶೇಷವಾದ ರೊಟ್ಟಿ ಜಾತ್ರೆಯನ್ನು ಆಚರಣೆಗೆ ತಂದಿದ್ದು ಇಂದು ನಾಡಿನಲ್ಲಿ ಪ್ರಸಿದ್ಧವಾಗಿದೆ.
ನರಗುಂದ, ಬಾದಾಮಿ, ರೋಣ ತಾಲೂಕಿನ ಹಲವಾರು ಗ್ರಾಮಗಳ ಮಠದ ಭಕ್ತರು ಸಾವಿರಾರು ಜೋಳದ ಖಡಕ ರೊಟ್ಟಿಯನ್ನು ಸಂಗ್ರಹ ಮಾಡಿ ಜಾತ್ರೆ ದಿನದಂದು ಎಲ್ಲ ಭಕ್ತರು ಸೇರಿಕೊಂಡು ರೊಟ್ಟಿ ಊಟ ಮಾಡುವುದು ನಡೆದುಕೊಂಡು ಬಂದಿದೆ. ಈ ಜಾತ್ರೆಗೆ ಪ್ರತಿ ವರ್ಷ ಭಕ್ತರು ಸೇರಿಕೊಂಡು ವಿಶೇಷವಾಗಿ ಅದ್ಧೂರಿಯಾಗಿ ಆಚರಣೆ ಮಾಡುವ ಭಕ್ತರ ಶ್ರಮ ದೊಡ್ಡದು ಎಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪ್ರತಿ ವರ್ಷ ಈ ಜಾತ್ರಾ ಮಹೋತ್ಸವ ನಿಮಿತ್ತ ಮಹಾರಥೋತ್ಸವ, ಮಹಾಪೂಜೆ, ರೊಟ್ಟಿ ಜಾತ್ರೆ, ಲಘ ರಥೋತ್ಸವ ಸೇರಿ ಮೂರು ದಿವಸ ಶ್ರೀಮಠದಲ್ಲಿ ಕಾರ್ಯಕ್ರಮಗಳು ಜರುಗುತ್ತವೆ. ಭಾರತೀಯ ಸಂಸ್ಕೃತಿಯಲ್ಲಿ ಆಧ್ಯಾತ್ಮ ಜ್ಞಾನ ತನ್ನದೆಯಾದ ವಿಶೇಷತೆ ಪಡೆದುಕೊಂಡಿದೆ. ಆದ್ದರಿಂದ ಜನತೆ ಅನ್ಯದೇಶದ ಸಂಸ್ಕೃತಿಯನ್ನು ಅಳವಡಿಸಿಕೊಂಡು ನಮ್ಮ ಸಂಸ್ಕೃತಿಯನ್ನು ಕೈ ಬಿಡುತ್ತಿರುವುದು ನೋವು ತಂದಿದೆ. ಆದ್ದರಿಂದ ಸಮಾಜದಲ್ಲಿ ಯುವ ಸಮುದಾಯವು ಭಾರತೀಯ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ಧರ್ಮ ರಕ್ಷಣೆ ಮಾಡಲು ನಾವೆಲ್ಲರೂ ಕಂಕಣ ಬದ್ಧರಾಗಬೇಕು. ಮಲಪ್ರಭೆ ನದಿಗೆ ಈ ವರ್ಷ ಪ್ರವಾಹ ಬಂದು ಈ ಭಾಗದ ಕೃಷಿ ಪ್ರಧಾನ ನಾಡಿನಲ್ಲಿ ರೈತ ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿದರೂ ಸಹ ತೋಂಟದಾರ್ಯ ಮಠದ ಮಹಾರಥೋತ್ಸವ ಹಾಗೂ ರೊಟ್ಟಿಜಾತ್ರೆಯನ್ನು ಹೆಚ್ಚು ಸಂಭ್ರಮದಿಂದ ಆಚರಣೆ ಮಾಡಿದ್ದು ಸಂತೋಷ ತಂದಿದೆ ಎಂದು ಹೇಳಿದರು.

ತಾಪಂ ಸದಸ್ಯ ಪಿ.ಎಲ್‌. ತಿರಕನಗೌಡ್ರ ಮಾತನಾಡಿ, ಶಿರೋಳ ಜಾತ್ರಾ ಮಹೋತ್ಸವದಲ್ಲಿ ಪ್ರತಿ ವರ್ಷ ಗ್ರಾಮೀಣ ಕ್ರೀಡೆಯಾದ ಕುಸ್ತಿಯನ್ನು ಏರ್ಪಡಿಸಲಾಗುವುದು, ಈ ಕ್ರೀಡೆಯಲ್ಲಿ ರಾಜ್ಯ ಮತ್ತು ಅಂತಾರಾಜ್ಯಗಳಿಂದ ಕುಸ್ತಿ ಪಟುಗಳು ಆಗಮಿಸಿ ಭಾಗವಹಿಸಿದ್ದು ಜಾತ್ರೆಗೆ ಮೆರಗು ಬಂದಿದೆ ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷ ಹನಮಂತ ಕಾಡಪ್ಪನವರ, ಗುರುಬಸಯ್ಯ ನಾಗಲೋಟಮಠ, ರಮಜಾನಸಾಬ ನದಾಫ, ನಿತೀಶ ಕುಬಸದ, ಡಾ. ವೆಂಕಟೇಶ, ದ್ಯಾಮಣ್ಣ ಕಾಡಪ್ಪನವರ, ವಿರೂಪಾಕ್ಷಪ್ಪ ಶಲ್ಲಿಕೇರಿ, ಶ್ರೀಧರ ಶೀಪ್ರಿ, ಶರಣಪ್ಪ ಕುರುವಿನಶಟ್ಟಿ, ಡಾ. ಸತೀಶ ಚವಾಣ, ಡಾ. ವೀರಣ್ಣ ಬ್ಯಾಳಿ ಇದ್ದರು

Follow Us:
Download App:
  • android
  • ios