Asianet Suvarna News Asianet Suvarna News

ಬರದ ನಾಡು ಕೋಲಾರದಲ್ಲೊಬ್ಬ ಮಾದರಿ ಸಾವಯವ ಕೃಷಿಕ: ಈತನ ತೋಟದಲ್ಲಿದೆ ಎರೆಹುಳುಗಳ ತವರು ಮನೆ

ಆ ರೈತ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಾ ಸಂಸಾರ ನೌಕೆಯನ್ನ ನಡೆಸುತ್ತಿದ್ದರು. ಆದರೆ ಆ ಬದುಕು ತೃಪ್ತಿ ಕೊಡದ ಹಿನ್ನಲೆ ಸಾವಯವ ಕೃಷಿ ಜೀವನಕ್ಕೆ ಕಾಲಿಟ್ಟರು. ಇಂದು ಆ ಕೃಷಿಯಲ್ಲಿ ಲಕ್ಷ ಲಕ್ಷ ಸಂಪಾದನೆ ಮಾಡುವುದರ ಜೊತೆಗೆ ಸಾವಯವ ಕೃಷಿ ಪಂಡಿತನಾಗಿದ್ದೇನೆ.

model farmer in kolar organic farming earthworm in the garden gvd
Author
Bangalore, First Published Apr 22, 2022, 8:40 PM IST

ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ.

ಕೋಲಾರ (ಏ.22): ಆ ರೈತ (Farmer) ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಾ ಸಂಸಾರ ನೌಕೆಯನ್ನ ನಡೆಸುತ್ತಿದ್ದರು. ಆದರೆ ಆ ಬದುಕು ತೃಪ್ತಿ ಕೊಡದ ಹಿನ್ನಲೆ ಸಾವಯವ ಕೃಷಿ (Organic Farming) ಜೀವನಕ್ಕೆ ಕಾಲಿಟ್ಟರು. ಇಂದು ಆ ಕೃಷಿಯಲ್ಲಿ ಲಕ್ಷ ಲಕ್ಷ ಸಂಪಾದನೆ ಮಾಡುವುದರ ಜೊತೆಗೆ ಸಾವಯವ ಕೃಷಿ ಪಂಡಿತನಾಗಿದ್ದೇನೆ. ತನ್ನ ಕೃಷಿ ಭೂಮಿಯನ್ನೇ ಎರೆಹುಳುವಿನ (Earthworm) ತವರು ಮನೆ ಅನ್ನುವಂತೆ ಮಾಡಿದ್ದಾನೆ. ಏನದು ಆ ರೈತನ ಸಾಧನೆ ಅಂತೀರಾ ಈ ವರದಿ ನೋಡಿ.  ಒಂದೆಡೆ ಮನೆಯಂಗಳದಲ್ಲಿ ದೇಸಿ ಹಸುಗಳ ಆರೈಕೆ. ಹಸುವಿನ ಗಂಜಲದಿಂದ ಕೀಟನಾಶಕ ತಯಾರಿಕೆ. ಮತ್ತೊಂದೆಡೆ ಎರೆಹುಳುಗಳ ಸಾಕಾಣಿಕೆ ಟ್ಯಾಂಕ್‌ನಲ್ಲಿ ಮಣ್ಣಿನ ತುಂಬೆಲ್ಲಾ ತುಂಬಿ ತುಳುಕುತ್ತಿರುವ ಎರೆಹುಳುಗಳು. 

ಈ ದೃಶ್ಯಗಳು ಕಂಡು ಬಂದಿದ್ದು ಕೋಲಾರ ತಾಲೂಕಿನ ಚಿಟ್ನಹಳ್ಳಿ ಗ್ರಾಮದಲ್ಲಿ. ಚಿಟ್ನಹಳ್ಳಿಯ ರೈತ ನಾಗರಾಜ್ ಕಳೆದ ಹಲವು ವರ್ಷಗಳಿಂದ ಸಾವಯವ ಕೃಷಿ ಮಾಡುವ ಮೂಲಕ ಯಶಸ್ವಿ ಮಾದರಿ ರೈತನಾಗಿದ್ದಾರೆ. ಮೊದಲು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ್, ತನಗೆ ಕೃಷಿಯಲ್ಲಿ ಆಸಕ್ತನಾಗಿ ಅಲ್ಲೇ ಹೊಸ ಬದುಕು ಕಟ್ಟಿಕೊಳ್ಳಬೇಕು ಅಂತಾ ನಿರ್ಧರಿಸಿ ಕೆಲವು ವರ್ಷಗಳ ಕಾಲ ರಾಸಾಯನಿಕ ಕೃಷಿ ಮಾಡಲು ಶುರು ಮಾಡಿದರು. ಆದರೆ ರಾಸಾಯನಿಕ ಕೃಷಿಯಿಂದ ಬದುಕು ನಶ್ವರ ಅನ್ನೋದನ್ನ ಅರಿತ ನಾಗರಾಜ್ ಸಾಂಪ್ರದಾಯಿಕ ಹಾಗೂ ರಾಸಾಯನಿಕ ಮುಕ್ತ ಸಾವಯವ ಕೃಷಿ ಆರಂಭಿಸಿದರು.

ಧರ್ಮಕ್ಕೂ ಮಿಗಿಲಾದ ಭಕ್ತಿ: ಮುಸ್ಲಿಂ ರಾಮ ಭಕ್ತನೊರ್ವರಿಂದ ಶ್ರೀರಾಮ ಕೋಟಿ ವ್ರತ!

ಸಾವಯವ ಕೃಷಿ ಮಾಡಲು ಪ್ರಾರಂಭಿಸಿದ ನಾಗರಾಜ್ ಅವರು ಮೊದಲಿಗೆ ದೇಶಿ ತಳಿಯ ಹಸುಗಳನ್ನ ಸಾಕುತ್ತಾ ಅದರ ಗಂಜಲ ಮತ್ತು ಸಗಣಿಯಿಂದ ಸಾವಯವ ಜೀವಾಂಮೃತ ತಯಾರು ಮಾಡಿದರು. ನಂತರ ಎರೆಹುಳು ತೊಟ್ಟಿಗಳನ್ನು ಮಾಡಿ ಅಲ್ಲಿ ಎರೆಹುಳು ಉತ್ಪಾದನೆ ಮಾಡುವ ಮೂಲಕ ಖರ್ಚಿಲ್ಲದೆ, ತಮ್ಮ ಭೂಮಿಯಲ್ಲಿ ರೇಷ್ಮೆ ಸೇರಿದಂತೆ ಹಲವು ಬಗೆಯ ತರಕಾರಿ ಬೆಳೆಗಳನ್ನು ಬೆಳೆಯುತ್ತಾ ವಾರ್ಷಿಕ ಏಳೆಂಟು ಲಕ್ಷ ಸಂಪಾದನೆ ಮಾಡುವ ಮೂಲಕ ನೆಮ್ಮದಿಯ ಬದುಕು ಕಂಡುಕೊಂಡಿದ್ದಾರೆ. 

model farmer in kolar organic farming earthworm in the garden gvd

ನಾಗರಾಜ್ ಅವರು ಎಷ್ಟರಮಟ್ಟಿಗೆ ಸಾವಯವ ಕೃಷಿಯನ್ನ ಅಳವಡಿಸಿಕೊಂಡಿದ್ದಾರೆ ಅನ್ನೋದಕ್ಕೆ ಅವರ ಎರಡು ಎಕರೆ ಭೂಮಿಯೇ ನಮಗೆ ಪ್ರಯೋಗಶಾಲೆ. ಯಾಕಂದರೆ ಅವ್ರ ಭೂಮಿಯ ಯಾವುದೇ ಭಾಗದಲ್ಲಿ ಅಗೆದರೆ ಸಾಕು ಅಲ್ಲಿ ಸಮೃದ್ದವಾಗಿ ಎರೆಹುಳುಗಳು ಕಂಡುಬರುತ್ತದೆ. ರೈತ ನಾಗರಾಜ್ ಅವರ ಸಾವಯವ ಕೃಷಿಯನ್ನು ನೋಡಲು ಹೊರ ಜಿಲ್ಲೆ, ಹೊರ ರಾಜ್ಯಗಳಿಂದಲೂ ನೂರಾರು ಜನ ರೈತರು ಇಲ್ಲಿಗೆ ಬರುತ್ತಾರೆ. ವಿಷವಿಲ್ಲದ ಆರೋಗ್ಯಕರವಾದ ಕೃಷಿ ಪದ್ದತಿಯನ್ನ ಕಂಡು ಸಂತೋಷ ಪಡುತ್ತಾರೆ. ಇನ್ನು ಇವರ ಸರಳ ಸಾವಯವ ಕೃಷಿ ವಿಧಾನಗಳನ್ನ ಕಂಡು ಸ್ಥಳೀಯ ರೈತರು ಸಾವಯವ ಕೃಷಿ ಪಂಡಿತ ಅಂತಾನೇ ಕರೆಯುತ್ತಾರೆ. 

Kolar: ಪ್ರಾಣಿಗಳೇ ಗುಣದಲ್ಲಿ ಮೇಲು ಎಂದು ಬೀದಿ ಪ್ರಾಣಿಗಳಿಗೆ ಆಸರೆಯಾದ ವ್ಯಕ್ತಿ!

ಅಲ್ಲದೆ ಇವರ ಕೃಷಿ ಪದ್ದತಿಯನ್ನು ಕಂಡು ಜಿಕೆವಿಕೆ, ಕೃಷಿ ವಿಜ್ನಾನ ಕೇಂದ್ರ, ಸೇರಿ ಹಲವು ಸಂಘ ಸಂಸ್ಥೆಗಳು ಇವರಿಗೆ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ನಾಗರಾಜ್ ಅವರ ಕಾರ್ಯಕ್ಕೆ ಸ್ಥಳೀಯರ ರೈತರ ಪ್ರಶಂಸೆ ಕೂಡಾ ಇದೆ. ಒಟ್ಟಿನಲ್ಲಿ, ರಾಸಾಯನಿಕ ಮುಕ್ತ ವ್ಯವಸಾಯ, ವಿಷಮುಕ್ತ ಆಹಾರ ಎನ್ನುವ ಮೂಲಕ ಸಾವಯವ ಕೃಷಿಯಿಂದ ಬದುಕು ಕಟ್ಟಿಕೊಂಡಿರುವ ನಾಗರಾಜ್ ಪ್ರಸಕ್ತ ಸಮಾಜಕ್ಕೆ ನಿಜಕ್ಕೂ ಮಾದರಿ. ವಿಷಮುಕ್ತ ಆಹಾರ ಆರೋಗ್ಯಕರ ಜೀವನಕ್ಕಾಗಿ ಇಡೀ ವಿಶ್ವವೇ ಹೋರಾಟ ಮಾಡುತ್ತಿರುವಾಗ ನಾಗರಾಜ್ ಅವರ ಸಾವಯವ ಕೃಷಿ ಬದುಕು ನಿಜಕ್ಕೂ ಮಾದರಿ.

Follow Us:
Download App:
  • android
  • ios