ಮುಳುಗಿದ್ದ ಮನೆಗಳಲ್ಲೀಗ ಹಾವುಗಳದ್ದೇ ಹಿಂಡು!
ಕರ್ನಾಟಕದ ಹಲವು ಜಿಲ್ಲೆಗಳು ಪ್ರವಾಹದಿಂದ ಸಂತ್ರಸ್ತರಾಗಿದ್ದು, ಇದೀಗ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹಾವುಗಳ ಕಾಟ ಶುರುವಾಗಿದೆ.
ಅಥಣಿ [ಆ.18] : ಕೃಷ್ಣಾ ತೀರದ ಗ್ರಾಮಗಳಲ್ಲಿ ಪ್ರವಾಹ ಇಳಿದ ಬಳಿಕ ಒಂದೊಂದೇ ಸಮಸ್ಯೆಗಳು ಉದ್ಭವಿಸುತ್ತಿವೆ. ನೆರೆ ಹಿನ್ನೆಲೆಯಲ್ಲಿ ಮನೆ, ಮಠಗಳನ್ನು ಬಿಟ್ಟು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಕೃಷ್ಣಾ ತೀರದ ಗ್ರಾಮಸ್ಥರಿಗೆ ಈಗ ಹಾವುಗಳ ಕಾಟ ಶುರುವಾಗಿದೆ.
ಜಲಾವೃತಗೊಂಡಿದ್ದ ಮನೆಗಳನ್ನೇ ಹಾವುಗಳು ತಮ್ಮ ಆವಾಸ ಸ್ಥಾನ ಮಾಡಿಕೊಂಡಿವೆ. ಪ್ರವಾಹ ತಗ್ಗಿದ ಬಳಿಕ ತಮ್ಮ ಮನೆಗಳತ್ತ ಮುಖ ಮಾಡಿದ ಮಂದಿ, ಮನೆಯಲ್ಲಿನ ದೃಶ್ಯಗಳನ್ನು ಕಂಡು ಹೌಹಾರಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಾಗನೂರು, ಸತ್ತಿ, ಜನವಾಡ ಗ್ರಾಮಗಳ ಮಂದಿ ಪ್ರವಾಹ ಇಳಿಮುಖವಾಯಿತೆಂದು ನಿಟ್ಟುಸಿರು ಬಿಡುವ ಮುನ್ನವೇ, ಹಾವುಗಳ ಕಾಟ ಕಂಡು ಆತಂಕಕ್ಕೆ ಗುರಿಯಾಗಿದ್ದಾರೆ.
ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ನಾಗಪ್ಪನ ದರ್ಶನ: ಕೃಷ್ಣಾ ಪ್ರವಾಹದಿಂದ ಜಲಾವೃತಗೊಂಡಿದ್ದ ನದಿ ತೀರದ ಗ್ರಾಮಗಳ ಮನೆಗಳಲ್ಲಿ ಹಾವುಗಳದ್ದೇ ರಾಜ್ಯಭಾರವಾಗಿದೆ. ಮನೆಗಳ ಬಾಗಿಲು ತೆರೆಯುತ್ತಿದ್ದಂತೆ ನಾಗಪ್ಪ ದರ್ಶನ ಆಗುತ್ತಿದೆ. ನೆರೆ ಇಳಿಯಿತು ಮನೆಯಲ್ಲಿ ವಾಸ ಮಾಡಬೇಕೆಂಬ ಬಯಕೆಯೊಂದಿಗೆ ಬಂದ ನಿರಾಶ್ರಿತರು ತೀವ್ರ ಚಿಂತಾಕ್ರಾಂತರಾಗುತ್ತಿದ್ದಾರೆ.
ಹಾವುಗಳನ್ನು ಕಂಡು ಮನೆಯೊಳಗೆ ಹೋಗಲು ಭಯ ಪಡುತ್ತಿದ್ದಾರೆ. ಕೆಲವರು ಸಣ್ಣ-ಪುಟ್ಟಹಾವುಗಳನ್ನು ಹೊಡೆದು ಹಾಕುತ್ತಿದ್ದರೆ, ದೊಡ್ಡ ಹಾವುಗಳು ತಾವಾಗಿಯೇ ಹೊರ ಹೋಗುವವರೆಗೆ ಕಾಯುತ್ತಿದ್ದಾರೆ. ಹಾವುಗಳು ಮನೆಯಲ್ಲಿ ಅವಿತುಕೊಂಡಿವೆ ಎಂಬ ಸುದ್ದಿ ತಿಳಿದ ಕೆಲ ಗ್ರಾಮಸ್ಥರಂತೂ ಮನೆಗಳತ್ತ ತಲೆ ಹಾಕುತ್ತಿಲ್ಲ. ಇತ್ತ ಪರಿಹಾರ ಕೇಂದ್ರದಲ್ಲಿಯೂ ಇರಲಾರದೆ, ಹಾವುಗಳನ್ನು ಎದುರಿಸಿ ಮನೆಗೂ ಹೋಗಲಾರದಂತಹ ಇಕ್ಕಟ್ಟಿನಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ.