ಹಗ್ಗ ಎಳೆದಾಡಿದ್ರೂ ಬಿಚ್ಚಿಕೊಳ್ಳದ ಧ್ವಜ: ಧ್ವಜಾರೋಹಣ ಇಲ್ಲದೇ ರಾಷ್ಟ್ರಗೀತೆ!
ಬೆಳಗಾವಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಯಡವಟ್ಟು! ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕೊಹೋಳಿ ಭಾಗಿ! ಜಿಲ್ಲಾ ಮೈದಾನದಲ್ಲಿ ಧ್ವಜ ಬಿಚ್ಚಿಕೊಳ್ಳದೇ ಆತಂಕ ಸೃಷ್ಟಿ! ಸಚಿವರು ಹಗ್ಗ ಎಳೆದರೂ ಬಿಚ್ಚಿಕೊಳ್ಳದ ರಾಷ್ಟ್ರಧ್ವಜ! ಧ್ವಜಾರೋಹಣ ಇಲ್ಲದೇ ರಾಷ್ಟ್ರಗೀತೆ
ಬೆಳಗಾವಿ(ಆ.15): 72ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ, ಜಿಲ್ಲಾಡಳಿತ ಆಯೋಜಿಸಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಯಡವಟ್ಟಾಗಿದೆ.
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೋಳಿ ಧ್ವಜಾರೋಹಣ ಮಾಡುವ ವೇಳೆ ಧ್ವಜ ಬಿಚ್ಚಿಕೊಳ್ಳದೇ ಯಡವಟ್ಟಾಗಿದೆ. ರಮೇಶ್ ಜಾರಕಿಹೊಳಿ ಎಷ್ಟೇ ಪ್ರಯತ್ನ ಪಟ್ಟರು ಧ್ವಜ ಬಿಚ್ಚಿಕೊಳ್ಳಲೇ ಇಲ್ಲ.
ಅಲ್ಲದೇ ಸಚಿವರ ಪಕ್ಕದಲ್ಲಿ ನಿಂತಿದ್ದ ಪೊಲೀಸ್ ಅಧಿಕಾರಿ ಕೂಡ ಧ್ವಜದ ಹಗ್ಗವನ್ನು ಜೋರಾಗಿ ಎಳೆದರೂ ಧ್ವಜ ಬಿಚ್ಚಿಕೊಳ್ಳಲಿಲ್ಲ. ಪರಿಣಾಮವಾಗಿ ಧ್ವಜಾರೋಹಣ ಇಲ್ಲದೇ ರಾಷ್ಟ್ರಗೀತೆಯನ್ನು ಹಾಡಲಾಯಿತು.
ಇಷ್ಟೇ ಅಲ್ಲದೇ ರಾಷ್ಟ್ರಗೀತೆ ಮಧ್ಯೆಯೇ ಧ್ವಜವನ್ನು ಕಂಬದಿಂದ ಇಳಿಸಿ ಮತ್ತೆ ಮೇಲೆ ಏರಿಸಲಾಯಿತು. ಧ್ವಜ ಬಿಚ್ಚಿಕೊಳ್ಳದ ಕಾರಣ ಮೈದಾನದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತಾದರೂ ಕೊನೆಯಲ್ಲಿ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಹಗ್ಗವನ್ನು ಕಟ್ ಮಾಡುವ ಮೂಲಕ ಧ್ವಜಾರೋಹಣ ಸರಾಗವಾಗಿ ನೆರವೇರುವಂತೆ ನೋಡಿಕೊಂಡರು.