Asianet Suvarna News Asianet Suvarna News

ಮುಂದುವರೆದ ಮಳೆ ಆರ್ಭಟ: ಬೆಳಗಾವಿಯಲ್ಲಿ ಸೇತುವೆ, ಮಂದಿರ ಜಲಾವೃತ

ಪಶ್ಚಿಮಘಟ್ಟ ಪ್ರದೇಶವಾದ ಖಾನಾಪುರ ತಾಲ್ಲೂಕಿನಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಕಾಡಂಚಿನ ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ. ಅಲ್ಲದೇ, ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿದೆ. ಮಲಪ್ರಭಾ ನದಿ ಪಕ್ಕದಲ್ಲಿರುವ ಹಬ್ಬಾನಟ್ಟಿ ಮಾರುತಿ ಮಂದಿರ ನೀರಿನಿಂದ ಆವೃತಗೊಂಡಿದೆ. ಎಂ .ಕೆ. ಹುಬ್ಬಳ್ಳಿಯ ಬಳಿಯ ಮಲಪ್ರಭಾ ನದಿಯಲ್ಲೇ ಇರುವ ಗಂಗಾಂಬಿಕೆ ಐಕ್ಯ ಮಂಟಪವನ್ನೂ ನೀರು ಸುತ್ತುವರಿದಿದೆ. ಘಟಪ್ರಭಾ ಜಲಾಶಯದ ಹಿನ್ನೀರಿನಲ್ಲಿರುವ ವಿಠ್ಠಲ- ರುಕ್ಮಿಣಿ ಮಂದಿರ ಜಲಾವೃತಗೊಂಡಿದೆ.

Bridge Temple Flooded in Belagavi due to Heavy Rain grg
Author
First Published Jul 20, 2023, 8:10 PM IST

ಬೆಳಗಾವಿ(ಜು.20): ಬೆಳಗಾವಿ ಜಿಲ್ಲೆ ಮತ್ತು ಮಹಾರಾಷ್ಟ್ರದ ಘಟ್ಟಪ್ರದೇಶದದಲ್ಲಿ ಬುಧವಾರ ಮಳೆ ಆರ್ಭಟ ಜೋರಾಗಿದ್ದು, ಜಿಲ್ಲೆಯ ನದಿಗಳಲ್ಲಿನ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಳವಾಗುತ್ತಿದೆ. ಜಲಾಶಯಗಳ ಮಟ್ಟವೂ ಏರಿಕೆಯಾಗುತ್ತಿದೆ. ಖಾನಾಪುರ ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿನ ಸೇತುವೆ ಜಲಾವೃತಗೊಂಡಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ.

ಪಶ್ಚಿಮಘಟ್ಟ ಪ್ರದೇಶವಾದ ಖಾನಾಪುರ ತಾಲ್ಲೂಕಿನಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಕಾಡಂಚಿನ ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ. ಅಲ್ಲದೇ, ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿದೆ. ಮಲಪ್ರಭಾ ನದಿ ಪಕ್ಕದಲ್ಲಿರುವ ಹಬ್ಬಾನಟ್ಟಿ ಮಾರುತಿ ಮಂದಿರ ನೀರಿನಿಂದ ಆವೃತಗೊಂಡಿದೆ. ಎಂ .ಕೆ. ಹುಬ್ಬಳ್ಳಿಯ ಬಳಿಯ ಮಲಪ್ರಭಾ ನದಿಯಲ್ಲೇ ಇರುವ ಗಂಗಾಂಬಿಕೆ ಐಕ್ಯ ಮಂಟಪವನ್ನೂ ನೀರು ಸುತ್ತುವರಿದಿದೆ. ಘಟಪ್ರಭಾ ಜಲಾಶಯದ ಹಿನ್ನೀರಿನಲ್ಲಿರುವ ವಿಠ್ಠಲ- ರುಕ್ಮಿಣಿ ಮಂದಿರ ಜಲಾವೃತಗೊಂಡಿದೆ.

ಬೆಳಗಾವಿಯಲ್ಲಿ ಚುರುಕಾದ ಮಳೆ: ರೈತನ ಮೊಗದಲ್ಲಿ ಕಳೆ..!

ಬೆಳಗಾವಿ ನಗರ ಹಾಗೂ ತಾಲೂಕು, ಬೈಲಹೊಂಗಲ, ಸವದತ್ತಿ, ರಾಮದುರ್ಗ , ಚನ್ನಮ್ಮನ ಕಿತ್ತೂರು, ಹುಕ್ಕೇರಿ, ಖಾನಾಪುರ, ರಾಯಬಾಗ, ಚಿಕ್ಕೋಡಿ, ನಿಪ್ಪಾಣಿ ಹಾಗೂ ಗೋಕಾಕ ತಾಲ್ಲೂಕಿನ ಎಲ್ಲ ಕಡೆಗಳಲ್ಲೂ ಉತ್ತಮ ಮಳೆ ಆಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಲಪ್ರಭಾ, ಪಾಂಡರಿ ಮತ್ತುಮಹದಾಯಿ ನದಿಗಳು, ಕಳಸಾ, ಬಂಡೂರಿ, ಕೋಟ್ನಿ, ಮಂಗೇತ್ರಿ, ಪಣಸೂರಿ, ತಟ್ಟಿ, ಕುಂಭಾರ, ಬೈಲ… ಮತ್ತಿತರ ಹಳ್ಳ-ಕೊಳ್ಳಗಳಲ್ಲಿಹರಿವು ಹೆಚ್ಚಾಗಿದೆ.

ಸೇತುವೆ ಮುಳುಗಡೆ : 

ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ದಾರೋಳಿ-ಮೋದೆಕೊಪ್ಪ, ಕುಸಮಳಿ- ಜಾಂಬೋಟಿ, ಅಸೋಗಾ-ಭೋಸಗಾಳಿ, ಅಮಟೆ-ಗೋಲ್ಯಾಳಿ, ಲೋಂಡಾ- ವರ್ಕಡ, ಹೆಮ್ಮಡಗಾ-ತಳೇವಾಡಿ, ನೇರಸಾ-ಕೊಂಗಳಾ, ಗವ್ವಾಳಿ, ಅಬನಾಳಿ-ಡೊಂಗರಗಾಂವ, ಶಿರೋಲಿ- ತಿವೋಲಿ, ಚಿಕಲೆ-ಅಮಗಾಂವ, ಮೋದೆಕೊಪ್ಪ-ಕೌಲಾಪುರ ಗ್ರಾಮಗಳ ನಡುವಿನ ಸೇತುವೆಗಳ ಮೇಲೆ ನೀರು ಹರಿಯುತ್ತಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.

ಜೋರಾಗಿ ಬೀಸುತ್ತಿರುವ ಗಾಳಿಯಿಂದಾಗಿ ಅಲ್ಲಲ್ಲಿ ಮರಗಳು ನೆಲಕ್ಕುರುಳಿವೆ. ಹಲವೆಡೆ ವಿದ್ಯುತ್‌ ಕಂಬಗಳು ಉರುಳಿಬಿದ್ದಿವೆ. ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಖಾನಾಪುರ ತಾಲೂಕಿನ ನಾಗರಗಾಳಿ, ಗುಂಡಿ, ಲೋಂಡಾ, ಹೆಮ್ಮಡಗಾ, ನೇರಸೆ, ನೀಲಾವಡೆ, ಜಾಂಬೋಟಿ ಮತ್ತು ಕಣಕುಂಬಿ ಅರಣ್ಯ ಪ್ರದೇಶದ ಸುಮಾರು 50 ಗ್ರಾಮಗಳಿಗೆ ತೆರಳುವ ರಸ್ತೆ ಮುಳುಗಡೆಯಾಗಿ ಸಂಪರ್ಕಕಡಿತಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ತಾಲೂಕಾಡಳಿತ ಜಲಾವೃತಗೊಂಡಿರುವ ಸೇತುವೆಗಳ ಮೇಲೆ ಸಂಚಾರ ನಿಷೇಧಿಸಿದ್ದು, ಜನರು ಸಂಚರಿಸದಂತೆ ಪೊಲೀಸರು ಬ್ಯಾರಿಕೇಡ್‌ ಅಳವಡಿಸಿದ್ದಾರೆ. ಅಲ್ಲದೇ, ಸ್ಥಳದಲ್ಲಿ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

ಖಾನಾಪುರ: ಅನೈತಿಕ ಚಟುವಟಿಕೆ, ಕಾಡಿನಲ್ಲಿ ಜಲಪಾತಗಳ ವೀಕ್ಷಣೆಗೆ ನಿರ್ಬಂಧ

ಜಲಾಶಯಗಳ ಮಟ್ಟ ಏರಿಕೆ

ಮಹಾರಾಷ್ಟ್ರದ ಘಟ್ಟಪ್ರದೇಶದಳಲ್ಲಿಯೂ ಉತ್ತಮ ಮಳೆಯಾಗುತ್ತಿದೆ. ಜಿಲ್ಲೆಯ ಕೃಷ್ಣಾ ದೂಧಗಂಗಾ, ವೇದಗಂಗಾ, ಘಟಪ್ರಭಾ ನದಿಗಳಲ್ಲಿ ನೀರಿನ ಹರಿವು ಹೆಚ್ಚಳವಾಗುತ್ತಿದೆ. ಘಟಪ್ರಭಾ ಜಲಾಶಯದಲ್ಲಿ 13,753 ಕ್ಯುಸೆಕ್‌ ಒಳಹರಿವಿದೆ. ಮಲಪ್ರಭಾ ಜಲಾಶಯದಲ್ಲಿ3851 ಕ್ಯುಸೆಕ್‌ ಒಳಹರಿವಿದೆ. ಜಲಾಶಯಗಳಲ್ಲಿನ ನೀರಿನ ಒಳಹರಿವು ದಿನೇ ದಿನೇ ಏರಿಕೆಯಾಗುತ್ತಿದೆ.

ಗೋಕಾಕ ಜಲಪಾತದಲ್ಲಿ ಸೆಲ್ಪಿಗಾಗಿ ಪ್ರವಾಸಿಗರ ಹುಚ್ಚಾಟ ಮಿತಿಮೀರಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಗೋಕಾಕ ಜಲಪಾತಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ. ಮಳೆ ಸುರಿಯುತ್ತಿರುವುದರಿಂದ ಗೋಕಾಕ ಜಲಪಾತದಲ್ಲಿ ನೀರು ಧುಮ್ಮಿಕ್ಕುವ ಜಾಗಕ್ಕೆ ಇಳಿದು ಜನರು ಸೆಲ್ಫಿ ಕ್ಲಿಕ್‌ ಮಾಡಿಕೊಳ್ಳುತ್ತಿದ್ದಾರೆ. ಬ್ಯಾರಿಕೇಡ್‌ ಹಾಕಿ ಪೊಲೀಸರು ಭದ್ರತೆ ಒದಗಿಸಿದ್ದಾರೆ. ದೂರದಿಂದಲೇ ನಿಂತು ಫಾಲ್ಸ್‌ ವೀಕ್ಷಣೆಗೆ ಅವಕಾಶ ನೀಡಲಾಗಿದೆ.

Follow Us:
Download App:
  • android
  • ios