ನಿರ್ಭಯಾ ಪ್ರಕರಣ: ವಿಚಾರಣೆ ವೇಳೆ ಪ್ರಜ್ಞೆ ತಪ್ಪಿ ಬಿದ್ದ ಜಡ್ಜ್ ಭಾನುಮತಿ!
ನಿರ್ಭಯಾ ಪ್ರಕರಣದ ಅರ್ಜಿ ವಿಚಾರಣೆ| ಎಲ್ಲಾ ಅಪರಾಧಿಗಳಿಗೆ ಒಟ್ಟಾಗಿ ಗಲ್ಲು ಬೇಡ ಎಂದು ಕೇಂದ್ರ ಸಲ್ಲಿಸಿದ್ದ ಅರ್ಜಿ ವಿಚಾರಣೆ| ವಿಚಾರಣೆ ವೇಳೆ ಪ್ರಜ್ಞೆ ತಪ್ಪಿ ಬಿದ್ದ ಜಡ್ಜ್ ಭಾನುಮತಿ
ನವದೆಹಲಿ[ಫೆ.14]: ನಿರ್ಭಯಾ ಅತ್ಯಾಚಾರ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ನಲ್ಲಿ 2 ವಿಚಾರಣೆಗಳು ನಡೆದಿವೆ. ಒಂದು ವಿಚಾರಣೆಯಲ್ಲಿ, ಕ್ಷಮಾದಾನ ಅರ್ಜಿ ತಿರಸ್ಕರಿಸಿದ್ದ ರಾಷ್ಟ್ರಪತಿ ನಿರ್ಧಾರ ಪ್ರಶ್ನಿಸಿ ಅಪರಾಧಿ ವಿನಯ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಇನ್ನು ಅಪರಾಧಿಗಳಿಗೆ ಒಟ್ಟಾಗಿ ಗಲ್ಲಿಗೇರಿಸಬಾರದೆಂದು ಸಲ್ಲಿಸಿದ್ದ ಮತ್ತೊಂದು ಅರ್ಜಿ ವಿಚಾರಣೆಯನ್ನು ಒಂದು ವಾರ ಮುಂದೂಡಲಾಗಿದೆ.
ತೀವ್ರ ಜ್ವರದಿಂದ ಪ್ರಜ್ಞೆ ತಪ್ಪಿ ಬಿದ್ದ ಜಡ್ಜ್
ವಿಚಾರಣೆ ವೇಳೆ ಸುಪ್ರೀಂ ನ್ಯಾಯಮೂರ್ತಿ ಆರ್ ಭಾನುಮತಿ ಪ್ರಜ್ಞೆ ತಪ್ಪಿ ಬಿದ್ದ ಪ್ರಸಂಗವೂ ನಡೆದಿದೆ. ಬಳಿಕ ಅವರನ್ನು ಗಾಲಿಕುರ್ಚಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹಾಗೂ ಅರ್ಜಿ ವಿಚಾರಣೆಯನ್ನು ಒಂದು ವಾರ ಮುಂದೂಡಲಾಗಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ 'ಅವರು ತೀವ್ರ ಜ್ವರದಿಂದ ಬಳಲುತ್ತಿದ್ದರು. ವಿಚಾರಣೆಗೂ ಮೊದಲೇ ಅವರ ಆರೋಗ್ಯ ಹದಗೆಟ್ಟಿತ್ತು. ಆದರೆ ಔಷಧಿ ಸೇವಿಸಿ ಅವರು ಈ ವಿಚಾರಣೆಗೆ ಬಂದಿದ್ದರು' ಎಂದಿದ್ದಾರೆ.
7 ವರ್ಷ ಸರಿದರೂ ಸಿಗದ ನ್ಯಾಯ: ಪ್ರತಿಭಟನೆಗೆ ಮುಂದಾದ ನಿರ್ಭಯಾ ತಾಯಿ!
ದೋಷಿಗಳಿಗೆ ಒಟ್ಟಾಗಿ ಗಲ್ಲು ಬೇಡ
ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಅರ್ಜಿಯೊಂದನ್ನು ಸಲ್ಲಿಸಿದ್ದು, ಪ್ರಕರಣದ ನಾಲ್ವರೂ ಅಪರಾಧಿಗಳಿಗೂ ಒಂದೇ ದಿನ, ಒಂದೇ ಬಾರಿ ಗಲ್ಲಿಗೇರಿಸುವ ನಿರ್ಧಾರ ಬೇಡ. ಯಾವ ಅಪರಾಧಿಗಳಿಗೆ ಇನ್ನು ಗಲ್ಲು ಮುಂದೂಡಲು ಕಾನೂನಿನ ಅವಕಾಶವಿಲ್ಲವೋ ಅವರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಕೋರಿದೆ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲಾ ದೋಷಿಗಳಿಗೂ ಒಂದೇ ಬಾರಿ ಗಲ್ಲಿಗೇರಿಸಲು ಆದೇಶ ಹೊರಡಿಸಲಾಗಿದೆ.