ಕೇರಳದಲ್ಲಿ ಎಸ್ಡಿಪಿಐನಿಂದ ಆರೆಸ್ಸೆಸ್ ಕಾರ್ಯಕರ್ತನ ಹತ್ಯೆ!
ಕೇರಳದಲ್ಲಿ ಎಸ್ಡಿಪಿಐನಿಂದ ಆರೆಸ್ಸೆಸ್ ಕಾರ್ಯಕರ್ತನ ಹತ್ಯೆ| 8 ಮಂದಿ ಎಸ್ಡಿಪಿಐ ಕಾರ್ಯಕರ್ತರ ಸೆರೆ
ಅಳಪ್ಪುಳ(ಫೆ.26): ಕೇರಳದಲ್ಲಿ ವಿಧಾನಸಭೆ ಚುನಾವಣೆ ಹತ್ತಿರ ಆಗುತ್ತಿರುವಂತೆಯೇ ರಾಜಕೀಯ ಸಂಘರ್ಷ ಭುಗಿಲೆದ್ದಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ)ದ ರಾಜಕೀಯ ಮುಖವಾಣಿ ಎಸ್ಡಿಪಿಐನ ಕಾರ್ಯಕರ್ತರು ಆರ್ಎಸ್ಎಸ್ ಕಾರ್ಯಕರ್ತ ನಾಯ್ಡು ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿರುವ ಘಟನೆ ಕೇರಳದ ಅಳಪ್ಪುಳ ಜಿಲ್ಲೆಯಲ್ಲಿ ಬುಧವಾರ ರಾತ್ರಿ ನಡೆದಿದೆ.
ಚೆರ್ತಾಲಾ ಸಮೀಪದ ನಾಗಮಕುಲನ್ಗರ ಎಂಬಲ್ಲಿ ಎರಡು ಗುಂಪುಗಳ ಮಧ್ಯೆ ಬುಧವಾರ ರಾತ್ರಿ ನಡೆದ ಸಂಘರ್ಷದ ವೇಳೆ ಈ ಕೃತ್ಯ ಎಸಗಲಾಗಿದೆ. ಘಟನೆಯಲ್ಲಿ ಆರ್ಎಸ್ಎಸ್ ಹಾಗೂ ಎಸ್ಡಿಪಿಐನ ಆರು ಮಂದಿ ಕಾರ್ಯಕರ್ತರು ಗಾಯಗೊಂಡಿದ್ದು, ಓರ್ವ ಆರ್ಎಸ್ಎಸ್ ಕಾರ್ಯಕರ್ತನ ಸ್ಥಿತಿ ಗಂಭೀರವಾಗಿದೆ. ಘಟನೆಗೆ ಸಂಬಂಧಿಸಿದಂತೆ ಎಸ್ಡಿಪಿಐನ 8 ಮಂದಿ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ ಆರ್ಎಸ್ಎಸ್ ಕಾರ್ಯಕರ್ತನ ಹತ್ಯೆ ಖಂಡಿಸಿ ಅಳಪ್ಪುಳ ಜಿಲ್ಲೆಯಲ್ಲಿ ಬಜೆಪಿ ಪ್ರತಿಭಟನೆ ನಡೆಸಿದೆ. ಅಲ್ಲದೇ ಕೇರಳ ಸರ್ಕಾರ ಎಸ್ಡಿಪಿಐನ ಪರ ವಹಿಸಿದೆ ಎಂದು ಆರೋಪಿಸಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಇತ್ತೀಚಿನ ಭೇಟಿಯ ಬಳಿಕ ಎಸ್ಡಿಪಿಐ ನಿರಂತರ ರಾರಯಲಿಗಳನ್ನು ಆಯೋಜಿಸುತ್ತಿರುವುದು ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಎಡೆ ಮಾಡಿಕೊಟ್ಟಿದೆ ಎನ್ನಲಾಗಿದೆ