ರಾವಣನ ಹತ್ತು ತಲೆಗಳಲ್ಲಿ ಹತ್ತು ಅಂಶಗಳು ಪ್ರತಿನಿಧಿಸುತ್ತವೆ
ಹತ್ತು ತಲೆ, ಇಪ್ಪತ್ತು ಕೈ ಹುಟ್ಟುತ್ತಲೇ ರಾವಣನಿಗೆ ಇರಲಿಲ್ಲ. ಈತ ಬ್ರಹ್ಮಶ್ರೀ ಪುಲಸ್ತ್ಯನ ಮಗ ವಿಶ್ರವಸುವಿನ ಪುತ್ರ. ಈತನ ತಾಯಿ ಕೈಕಸಿ. ಈಕೆ ರಾಕ್ಷಸರ ರಾಜ ಸುಮಾಲಿಯ ಮಗಳು. ಈತ ಐಶ್ವರ್ಯಕ್ಕೆ ಅಧಿಪತಿ ಕುಬೇರನ ಸಹೋದರನೂ ಹೌದು. ಈತನಿಗೆ ವಿಶ್ರಾವಣ ಎಂಬಹೆಸರೂ ಇದೆ. ತಾಯಿಯ ಮೂಲಕ ರಾಕ್ಷಸ ಕುಲ ಉದ್ಧಾರದ ಜವಾಬ್ದಾರಿ ಈತನ ಹೆಗಲ ಮೇಲಿತ್ತು.
ರಾವಣ ಮಹತ್ವಾಕಾಂಕ್ಷಿ. ಅಮರತ್ವದ ಕನಸು ಹೊತ್ತು ಬ್ರಹ್ಮನನ್ನು ಕುರಿತು ಸಾವಿರ ವರ್ಷ ತಪಸ್ಸು ಮಾಡಿದ. ಈ ತಪಸ್ಸಿನ ಮಧ್ಯೆ ಬ್ರಹ್ಮ ಒಲಿಯದಿದ್ದಾಗ ತನ್ನ ತಲೆಯನ್ನೇ ಕತ್ತರಿಸಿ ಹಾಕುತ್ತಿದ್ದ. ಆಗ ಹೊಸ ತಲೆ ಮೂಡುತ್ತಿತ್ತು. ಬಹಳ ಕಾಲದ ತಪಸ್ಸಿನ ಬಳಿಕ ಮತ್ತೆ ಹತಾಶೆಯಿಂದ ತಲೆ ಕತ್ತರಿಸಿಕೊಳ್ಳುತ್ತಿದ್ದ. ಅದು ಪುನಃ ಹುಟ್ಟಿಕೊಳ್ಳುತ್ತಿತ್ತು. ಹೀಗೆ ಸುಮಾರು ಹತ್ತು ಬಾರಿ ತನ್ನ ತಲೆ ಕತ್ತರಿಸಿದ ಮೇಲೆ ಬ್ರಹ್ಮ ಪ್ರತ್ಯಕ್ಷನಾದ. ಕತ್ತರಿಸಿದ ಅಷ್ಟೂ ತಲೆಗಳನ್ನೂ ಈತನಿಗೆ ಪುನಃ ನೀಡಿ ‘ದಶ ಶಿರ’ನನ್ನಾಗಿಸಿದ. ಹತ್ತು ತಲೆಗೆ ಇಪ್ಪತ್ತು ಕೈಯೂ ಬಂತು.
‘ಏನು ವರ ಬೇಕು?’ ಎಂದು ಬ್ರಹ್ಮ ಕೇಳಿದಾಗ, ರಾವಣನ ಬೇಡಿಕೆ ‘ಅಮರತ್ವ’ಕ್ಕಾಗಿ ಇತ್ತು. ಆದರೆ ರಾಕ್ಷಸನಾಗಿ ಮುಂದುವರಿಯುವ ರಾವಣನಿಗೆ ಅಮರತ್ವದ ವರ ನೀಡಿದರೆ ಲೋಕದ ಕಥೆ ಏನಾಗಬೇಡ. ಬ್ರಹ್ಮ ಈ ವರ ನೀಡಲು ನಿರಾಕರಿಸಿದ. ಹಾಗಾದರೆ, ತನಗೆ ದೇವತೆಗಳಿಂದ, ದಾನವರಿಂದ ಸಾವು ಬರಬಾರದು ಎಂಬ ವರ ಕೇಳಿದ. ಬ್ರಹ್ಮ ಮುಗುಳ್ನಗುತ್ತಾ ‘ತಥಾಸ್ತು’ ಎಂದ. ಮುಂದೆ ಮಾನವ ದೇಹಿ ರಾಮನಿಂದ ರಾವಣನ ವಧೆಯಾದ ಕಥೆ ನಿಮಗೆಲ್ಲ ತಿಳಿದದ್ದೇ.
ರಾವಣನ ಹತ್ತು ತಲೆಗಳಿಗೆ ಮತ್ತೊಂದು ಒಳನೋಟವೂ ಇದೆ. ಈ ತಲೆಗಳು ಮನುಷ್ಯನ ನೆಗೆಟಿವ್ ಮನಸ್ಥಿತಿಯ ಸಂಕೇತ. ಕಾಮ, ಕ್ರೋಧ, ಮೋಹ, ಮದ, ಮತ್ಸರ ಮೊದಲಾದ ಹತ್ತು ಅಂಶಗಳನ್ನು ರಾವಣನ ಈ ಹತ್ತು ತಲೆಗಳು ಪ್ರತಿನಿಧಿಸುತ್ತವೆ. ಇವುಗಳನ್ನು ನಾಶ ಮಾಡಲು ರಾಮನಂಥ ಒಂದು ಸಾತ್ವಿಕ ಮನಸ್ಥಿತಿ ಬೇಕು. ಆ ರಾಮ ಹೊರಗಿಂತ ಬರಬೇಕಿಲ್ಲ. ನಮ್ಮೊಳಗೆ ಇರುವ. ನಮ್ಮೊಳಗಿನ ರಾವಣತ್ವದ ಅಟ್ಟಹಾಸದಲ್ಲಿ ಆ ಮೃದು ಧ್ವನಿ ಕೇಳುತ್ತಿಲ್ಲ. ಸೂಕ್ಷ್ಮವನ್ನು ಆಲಿಸುವ ಶಕ್ತಿ ನಮ್ಮೆಲ್ಲರಲ್ಲಿ ಬೆಳೆಯಲಿ.