BTS-2021| ನಾನು ಕರ್ನಾಟಕದ ಹೆಮ್ಮೆಯ ಪುತ್ರಿ: Apple ಉಪಾಧ್ಯಕ್ಷೆ ಪ್ರಿಯಾ

By Kannadaprabha NewsFirst Published Nov 19, 2021, 6:59 AM IST
Highlights

*   ಉನ್ನತ ಶಿಕ್ಷಣದ ಗುಣಾತ್ಮಕ ಸುಧಾರಣೆಗೆ ಹಲವು ಕ್ರಮ ತಂದಿದೆ
*  4ನೇ ಕೈಗಾರಿಕಾ ಕ್ರಾಂತಿಯಲ್ಲಿ ಮಹತ್ತರ ಪಾತ್ರ ವಹಿಸಲಿದೆ
*  ಬೆಂಗಳೂರು ತಂತ್ರಜ್ಞಾನ ಶೃಂಗ ಏರ್ಪಡಿಸಿದ್ದಕ್ಕೆ ಸಿಎಂ ಬೊಮ್ಮಾಯಿಗೆ ಧನ್ಯವಾದ
 

ಬೆಂಗಳೂರು(ನ.19): ಉನ್ನತ ಶಿಕ್ಷಣ ಕ್ಷೇತ್ರದ ಗುಣಾತ್ಮಕ ಸುಧಾರಣೆಗೆ ಹತ್ತಾರು ಉಪಕ್ರಮಗಳನ್ನು ತಂದಿರುವ ಕರ್ನಾಟಕ ರಾಜ್ಯ ನಾಲ್ಕನೇ ಕೈಗಾರಿಕಾ ಕ್ರಾಂತಿಯಲ್ಲಿ ಮಹತ್ತರ ಪಾತ್ರ ವಹಿಸುವುದರಲ್ಲಿ ಅನುಮಾನವಿಲ್ಲ ಎಂದು ಆ್ಯಪಲ್‌ ಕಂಪನಿ ಉಪಾಧ್ಯಕ್ಷೆ, ಬೆಂಗಳೂರು ಮೂಲದ ಪ್ರಿಯಾ ಬಾಲಸುಬ್ರಮಣ್ಯಂ(Priya Balasubramaniam) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಮೆರಿಕದ(America) ಕ್ಯಾಲಿಫೋರ್ನಿಯಾದಿಂದ(California) ‘ಬಿಟಿಎಸ್‌-2021’ನಲ್ಲಿ(BTS-2021) ವರ್ಚುಯಲ್‌ ಆಗಿ ಪಾಲ್ಗೊಂಡು ಮಾತನಾಡಿದ ಅವರು, ಈಗಿನ ಉದ್ಯಮರಂಗದಲ್ಲಿ ಕೃತಕ ಬುದ್ಧಿಮತ್ತೆ, ಮಶೀನ್‌ ಲರ್ನಿಂಗ್‌, ಆಗ್ಮೆಂಟೆಡ್‌ ವರ್ಚುಯಲ್‌ ರಿಯಾಲಿಟಿ, ರೋಬೋಟಿಕ್ಸ್‌ ಮುಂತಾದ ತಂತ್ರಜ್ಞಾನದ ಧಾರೆಗಳು ಮುಂಚೂಣಿಗೆ ಬಂದಿದ್ದು, ನಿರ್ಣಾಯಕ ಪಾತ್ರ ವಹಿಸುತ್ತಿವೆ. ಭಾರತದಲ್ಲಿ ಯುವಜನರಿಗೆ ಈ ಕಲಿಕೆಗಳನ್ನು ಶಿಕ್ಷಣದ ಅವಿಭಾಜ್ಯ ಅಂಗವಾಗಿಸಬೇಕು ಎಂದು ಅಭಿಪ್ರಾಯಪಟ್ಟರು.

ನ್ಯಾಸ್ಕಾಂನಂತಹ(NASSCOM) ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು 10 ಸಾವಿರ ನವೋದ್ಯಮಗಳ ಮೂಲಕ ವಿದ್ಯಾರ್ಥಿಗಳಿಗೆ(Students) ಸಮಕಾಲೀನ ಉದ್ಯೋಗಗಳಿಗೆ(Jobs) ಬೇಕಾದ ಕೌಶಲ್ಯಗಳನ್ನು ಒದಗಿಸುತ್ತಿರುವ ರಾಜ್ಯ ಸರ್ಕಾರದ(Government of Karnataka) ಕ್ರಮವನ್ನು ಶ್ಲಾಘಿಸಿದ ಅವರು, ಆ್ಯಪಲ್‌(Apple) ಕಂಪನಿಯು 2017ರಿಂದಲೂ ಬೆಂಗಳೂರಿನಲ್ಲೇ(Bengaluru) ತನ್ನ ಐ-ಫೋನುಗಳನ್ನು(iPhone) ಉತ್ಪಾದಿಸುತ್ತಿದೆ. ವಿಶೇಷವಾಗಿ ಬೆಂಗಳೂರು ಮತ್ತು ಒಟ್ಟಾರೆಯಾಗಿ ಭಾರತದೊಂದಿಗೆ(India)ಆಪಲ್‌ ವ್ಯಾಪಕ ಸಹಭಾಗಿತ್ವ ಹೊಂದಿದ್ದು, ದೇಶದಲ್ಲಿ 10 ಲಕ್ಷ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ವಿವರಿಸಿದರು.
ತಮ್ಮ ಸಂಸ್ಥೆ ಬೆಂಗಳೂರಿನ ‘ಎನೇಬಲ್‌ ಇಂಡಿಯಾ’(Enable India) ಸಂಸ್ಥೆಯೊಂದಿಗೂ ಕೈಜೋಡಿಸಿದ್ದು, ಎರಡು ಸಾವಿರ ಮನೆಗಳಿಗೆ ಸೌರದೀಪಗಳನ್ನು ಒದಗಿಸಿದೆ. ಜತೆಗೆ ಬಡ ಕುಟುಂಬಗಳ ಸಾವಿರಾರು ಮಕ್ಕಳಿಗೆ ಕಲಿಕೆಗೆ ಅಗತ್ಯವಾದ ಡಿಜಿಟಲ್‌ ಸಾಧನಗಳನ್ನು ಪೂರೈಸಿದ್ದು, ಅವರ ವಿದ್ಯಾಭ್ಯಾಸಕ್ಕೆ(Education) ನೆರವಾಗುತ್ತಿದೆ ಎಂದು ತಿಳಿಸಿದರು.

BTS 2021; ಸಂಶೋಧನೆಗಳಿಂದ ಕೃಷಿ ಸುಧಾರಣೆಯಾಗಬೇಕು; ವೆಂಕಯ್ಯ ನಾಯ್ಡು

ಕಂಪನಿಯ ಆ್ಯಪ್‌ಗಳಿಂದ ಚಿಲ್ಲರೆ ವ್ಯಾಪಾರ ಕೂಡ ಮುಂಬರುವ ದಿನಗಳಲ್ಲಿ ಸುಲಭವಾಗಲಿದೆ. ಇನ್ನೊಂದೆಡೆ, ಭಾರತದ ಮಕ್ಕಳು(Children) ಸಂಗೀತ, ನೃತ್ಯ, ಭಾಷೆ ಇತ್ಯಾದಿಗಳನ್ನು ತಮ್ಮ ಆ್ಯಪ್‌ಗಳಿಂದ(Application) ಕಲಿಯುತ್ತಿದ್ದಾರೆ. ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಶಕ್ತಿಯಾಗಿರುವ ಕರ್ನಾಟಕ ಮತ್ತು ಭಾರತಗಳು ತಂತ್ರಜ್ಞಾನದ(Technology) ವರ್ಗಾವಣೆಯನ್ನು ಸಮರ್ಥವಾಗಿ ಮಾಡಬಲ್ಲವು ಎಂದರು.

ನಾನು ಕರ್ನಾಟಕದ ಹೆಮ್ಮೆಯ ಪುತ್ರಿ

ಕನ್ನಡದಲ್ಲೇ(Kannada) ತಮ್ಮ ಮಾತು ಆರಂಭಿಸಿದ ಪ್ರಿಯಾ ಬಾಲಸುಬ್ರಮಣ್ಯಂ ‘ನಾನು ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲೇ. ಓದಿದ್ದು ಬೆಂಗಳೂರು ವಿವಿಯ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜಿನಲ್ಲಿ. ಬೆಂಗಳೂರು ತಂತ್ರಜ್ಞಾನ ಶೃಂಗವನ್ನು ಏರ್ಪಡಿಸಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಸೇರಿದಂತೆ ಎಲ್ಲರಿಗೂ ಅಭಿನಂದನೆಗಳು’ ಎಂದು ಹರ್ಷದಿಂದ ನುಡಿದರು. ತಮ್ಮ ಭಾಷಣವನ್ನು ‘ನಾನು ಕರ್ನಾಟಕದ ಹೆಮ್ಮೆಯ ಪುತ್ರಿ!’ ಎಂದು ಹೇಳಿ ಮುಗಿಸಿದರು.

‘ಸ್ಮಾರ್ಟ್‌ ಮ್ಯಾನುಫ್ಯಾಕ್ಚರಿಂಗ್‌’ ವಿಧಾನದ ಮೂಲಕ ಕಂಪನಿಯು ಶೂನ್ಯ ತ್ಯಾಜ್ಯ ಹಾಗೂ ಸುಸ್ಥಿರತೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಭಾರತದ ಅಭಿವೃದ್ಧಿಯಲ್ಲಿ ಆ್ಯಪಲ್‌ ಕಂಪನಿಯು ಮಹತ್ತರ ಪಾತ್ರ ವಹಿಸಲು ಸದಾ ಬದ್ಧತೆ ಹೊಂದಿದೆ ಎಂದು ಭರವಸೆ ನೀಡಿದರು.

BTS 2021; ಕೃಷಿ, ಜೀವವಿಜ್ಞಾನ ಸಂಶೋಧನೆ, ಮಹಿಳಾ ಉದ್ಯಮಶೀತೆ... ಶೃಂಗಸಭೆಗೆ ಬೆಂಗಳೂರು ಸಜ್ಜು

2020ರ ವೇಳೆಗೆ ಭಾರತದಲ್ಲಿ 500 ದಶಲಕ್ಷ ಸ್ಮಾರ್ಟ್ ಫೋನ್ ಬಳಕೆದಾರರಿದ್ದರೆ, ಈಗ ಅದು 820 ದಶಲಕ್ಷಕ್ಕೆ ಹೆಚ್ಚಾಗಿದೆ. ಭಾರತ ಸರ್ಕಾರವು ಕೇವಲ 278 ದಿನಗಳಲ್ಲಿ 100 ಕೋಟಿ ಕೋವಿಡ್ ಲಸಿಕೆ ನೀಡಿರುವುದು ದೊಡ್ಡ ಸಾಧನೆಯಾಗಿದೆ. ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಭವಿಷ್ಯ ಉಜ್ವಲವಾಗಿದ್ದು ದತ್ತಾಂಶಗಳ ಬಳಕೆ ಮತ್ತು ನಿರ್ವಹಣೆ ಮೂಲಕ ಮಹತ್ತನ್ನು ಸಾಧಿಸಬಹುದು.

ರಾಜ್ಯವು ಐಟಿ-ಬಿಟಿ ತಂತ್ರಜ್ಞಾನ, ಬಾಹ್ಯಾಕಾಶ, ವೈಮಾಂತರಿಕ್ಷ, ಸಂಶೋಧನೆ ಮತ್ತು ಅಭಿವೃದ್ಧಿ, ಸೆಮಿಕಂಡಕ್ಟರ್ ಹೀಗೆ ಎಲ್ಲದರಲ್ಲೂ ಇಡೀ ದೇಶಕ್ಕೇ ಅಗ್ರಸ್ಥಾನದಲ್ಲಿದೆ. ಇದರ ಜತೆಗೆ ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಸೃಷ್ಟಿಯಲ್ಲೂ ಪ್ರಥಮ ಸ್ಥಾನದಲ್ಲಿದೆ. ಹೀಗಾಗಿ ರಾಜ್ಯವು ತಂತ್ರಜ್ಞಾನದ ಭವಿಷ್ಯದ ಬೆಳವಣಿಗೆಗೆ ಪ್ರಶಸ್ತ ತಾಣವಾಗಿದೆ.

click me!