ಕರ್ನಾಟಕದಲ್ಲಿ 8.41 ಲಕ್ಷ ಮಕ್ಕಳಿಗೆ ಜೆಇ ಮಿದುಳು ಜ್ವರ ಲಸಿಕೆ

By Govindaraj SFirst Published Dec 7, 2022, 12:37 PM IST
Highlights

ಜೆಇ ಮಿದುಳು ಜ್ವರ (ಜಪಾನೀಸ್‌ ಎನ್‌ ಸೆಫಲೈಟಿಸ್‌) ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ವಿಶೇಷ ಲಸಿಕಾ ಅಭಿಯಾನ ನಡೆಯುತ್ತಿದ್ದು, ಕಳೆದ ಎರಡು ದಿನಗಳಲ್ಲಿ 8.41 ಲಕ್ಷ ಮಕ್ಕಳಿಗೆ ಲಸಿಕೆ ನೀಡಲಾಗಿದೆ. 

ಬೆಂಗಳೂರು (ಡಿ.07): ಜೆಇ ಮಿದುಳು ಜ್ವರ (ಜಪಾನೀಸ್‌ ಎನ್‌ ಸೆಫಲೈಟಿಸ್‌) ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ವಿಶೇಷ ಲಸಿಕಾ ಅಭಿಯಾನ ನಡೆಯುತ್ತಿದ್ದು, ಕಳೆದ ಎರಡು ದಿನಗಳಲ್ಲಿ 8.41 ಲಕ್ಷ ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ನಿರ್ದೇಶನದಂತೆ ಬಾಗಲಕೋಟೆ, ದಕ್ಷಿಣ ಕನ್ನಡ, ಗದಗ, ಹಾಸನ, ಹಾವೇರಿ, ಕಲಬುರಗಿ, ತುಮಕೂರು, ರಾಮನಗರ, ಉಡುಪಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಸೋಮವಾರದಿಂದ ಅಭಿಯಾನ ಹಮ್ಮಿಕೊಳ್ಳಲಾಗಿದೆ. 1-15 ವರ್ಷ ವಯಸ್ಸಿನ ಮಕ್ಕಳಿಗೆ ಒಂದು ಡೋಸ್‌ ಲಸಿಕೆ ನೀಡಲಾಗುತ್ತಿದೆ. 

ಅಭಿಯಾನದಲ್ಲಿ ಮೊದಲ ದಿನ 4,22, 932 ಮಕ್ಕಳು, ಎರಡನೇ ದಿನ 418272 ಮಕ್ಕಳು ಸೇರಿ ಒಟ್ಟಾರೆ 841204 ಮಕ್ಕಳು ಲಸಿಕೆ ಪಡೆದುಕೊಂಡಿದ್ದಾರೆ. ಆಯಾ ಜಿಲ್ಲೆಗಳ ಆರೋಗ್ಯ ಸಂಸ್ಥೆಗಳು, ಅಂಗನವಾಡಿ ಕೇಂದ್ರ ಹಾಗೂ ಸಮುದಾಯದ ಇನ್ನಿತರ ಪ್ರದೇಶಗಳಲ್ಲಿ ಲಸಿಕಾಕರಣಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಕೇಂದ್ರ ಸರ್ಕಾರ ಉಚಿತವಾಗಿ ಜೆನವ್ಯಾಕ್‌ ಜೆಇ ಲಸಿಕೆಗಳನ್ನು ಉಚಿತವಾಗಿ ಸರಬರಾಜು ಮಾಡಿದೆ.

ಹಳ್ಳಿ ಹಕ್ಕಿ ಮತ್ತೆ ಕಾಂಗ್ರೆಸ್‌ನತ್ತ?: ಖರ್ಗೆ ಬಳಿಕ ಸಿದ್ದು ಭೇಟಿ

ಮೆದುಳು ಜ್ವರ ತಡೆಗಟ್ಟುವ ನಿಟ್ಟಿನಲ್ಲಿ ಲಸಿಕೆ ಹಾಕಿ: ಮೆದುಳು ಜ್ವರ ತಡೆಗಟ್ಟುವ ನಿಟ್ಟಿನಲ್ಲಿ ಪಾಲಕ-ಪೋಷಕರು ತಮ್ಮ ಮಕ್ಕಳಿಗೆ ಲಸಿಕೆಯನ್ನು ತಪ್ಪದೇ ಹಾಕಿಸಬೇಕೆಂದು ಎಂದು ಜಿ.ಪಂ. ಮುಖ್ಯಕಾರ್ಯನಿರ್ವಾಣಾಧಿಕಾರಿ ಡಾ.ಗಿರೀಶ ಡಿ ಬದೋಲೆ ಅವರು ತಿಳಿಸಿದರು. ಕಲಬುರಗಿ ನಗರದ ಹಳೆ ಜೇವರ್ಗಿ ರಸ್ತೆಯಲ್ಲಿರುವ ಜೀವನ ಪ್ರಕಾಶ ಶಾಲೆಯಲ್ಲಿ ಮೆದುಳು ಜ್ವರಕ್ಕೆ ಜಪಾನೀಸ್‌ ಎನ್ಸಿಫಲಾಟಿಸ್‌ ಲಸಿಕೆ ಅಭಿಯಾನ 1ರಿಂದ 15 ವರ್ಷದ ಮಕ್ಕಳಿಗೆ ಲಸಿಕೆ ಚಾಲನೆ ನೀಡಿ ಮಾತನಾಡಿದರು.

ಡಿ.25ರ ವರೆಗೆ ಕಲಬುರಗಿ ಜಿಲ್ಲೆಯಾದ್ಯಂತ 1 ರಿಂದ 15 ವರ್ಷದೊಳಗಿನ ಮಕ್ಕಳಿಗೆ ಉಚಿತವಾಗಿ ಜಪಾನೀಸ್‌ ಎನ್ಸಿಫಲಾಟಿಸ್‌ ಲಸಿಕೆ ನೀಡಲು ಅಭಿಯಾನ ಹಮ್ಮಿಕೊಂಡಿದೆ. ಲಸಿಕೆ ಸುರಕ್ಷಿತವಾಗಿದ್ದು, ಪಾಲಕ-ಪೋಷಕರಲ್ಲಿ ಯಾವುದೇ ಭಯ, ಗೊಂದಲ ಬೇಡ ಇದರಿಂದ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ ಎಂದು ಹೇಳಿದರು. ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕ ಡಾ.ಶಂಕ್ರಪ್ಪ ಮೈಲಾರಿ, ಜಿಲ್ಲಾ ಡಿಎಚ್‌ಒ ಡಾ.ರಾಜೇಶ ಮಾಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಾದ್ಯಂತ ಲಸಿಕೆಯನ್ನು ಹಾಕಬೇಕು. ಇದು ಒಂದು ಅಂಟುರೋಗವಾಗಿದ್ದು, ಇದರ ಬಗ್ಗೆ ಮಕ್ಕಳು ಮತ್ತು ಪಾಲಕರು ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಮೂರು ವಾರಗಳ ಕಾಲ ಶಾಲಾ ಮಕ್ಕಳಿಗೆ ಲಸಿಕಾ ಕೇಂದ್ರಗಳನ್ನು ಆಯೋಜಿಸಿದೆ ಜೆ.ಇ. ಲಸಿಕೆಯನ್ನು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ಅಳವಡಿಸಿ 9ರಿಂದ 12 ತಿಂಗಳಲ್ಲಿ ಮೊದಲ ಡೋಸ್‌ ಹಾಗೂ 16-24 ತಿಂಗಳಿಗೆ ಎರಡನೇ ಡೋಸ್‌ ಲಸಿಕೆ ನೀಡಲಾಗುವುದು ಎಂದರು. ಆರ್‌ಸಿಎಚ್‌ ಅಧಿಕಾರಿ ಪ್ರಭುಲಿಂಗ ಮಾನಕರ ಅವರು ಸ್ವಾಗತಿಸಿ ಮಾತನಾಡಿ, ಇತ್ತೀಚೆಗೆ ಗುಜರಾತ್‌, ಮಹಾರಾಷ್ಟ್ರದಲ್ಲಿ ಮೆದುಳು ಜ್ವರ ಕಂಡಬಂದ ಹಿನ್ನೆಲೆಯಲ್ಲಿ ಕರ್ನಾಟಕದ ಆಯ್ದ 10 ಜಿಲ್ಲೆಗಳಾದ ಕಲಬುರಗಿ, ಬಾಗಲಕೋಟೆ, ಗದಗ, ಹಾವೇರಿ, ಉಡುಪಿ, ತುಮಕೂರು, ಹಾಸನ, ದಕ್ಷಿಣ ಕನ್ನಡ, ರಾಮನಗರ ಹಾಗೂ ಯಾದಗಿರಿಗಳಲ್ಲಿ ತೀವ್ರ ನಿಗಾ ವಹಿಸಿ ಅಭಿಯಾನ ಹಮ್ಮಿಕೊಂಡಿದೆ ಎಂದರು.

ರಾಮುಲು ಪಂಚವಟಿಯಲ್ಲಿ ಜನಾರ್ದನ ರೆಡ್ಡಿ ವಾಸ್ತವ್ಯ, ದೇಗುಲಗಳಿಗೆ ಭೇಟಿ

ಕಲಬುರಗಿ ಜಿಲ್ಲೆಯಲ್ಲಿ 1-6 ವರ್ಷದ 1,88,927 ಮಕ್ಕಳು, 6-15 ವರ್ಷದ 5,28,745 ಮಕ್ಕಳು, ಶಾಲೆಯಿಂದ ಹೊರಗುಳಿದ 6,022 ಮಕ್ಕಳು ಸೇರಿ ಒಟ್ಟು 7,20,188 ಮಕ್ಕಳಿಗೆ ಲಸಿಕಾಕರಣದ ಗುರಿ ಹೊಂದಲಾಗಿದೆ. 441 ಅಪಾಯಕಾರಿ ಪ್ರದೇಶಗಳನ್ನು ಗುರುತಿಸಲಾಗಿದೆ. ಇದಕ್ಕಾಗಿ 590 ಲಸಿಕಾ ತಂಡ ರಚಿಸಲಾಗಿದ್ದು, 5,523 ಸೆಷನ್‌ಗಳಲ್ಲಿ ಲಸಿಕೆ ನೀಡಲಿದ್ದಾರೆ. 3,033 ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಬಳಸಿಕೊಳ್ಳಲಾಗುತ್ತಿದೆ. ಲಸಿಕಾ ತಂಡಗಳ ಮೇಲೆ ಮೇಲ್ವಿಚಾರಕರಾಗಿ 148 ಜನ ಕಾರ್ಯನಿರ್ವಹಿಸಲಿದ್ದಾರೆ ಎಂದರು.

click me!