ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧ ಮಸೂದೆ ಪಾಸ್: ಇಲ್ಲಿವೆ ಕಾಯ್ದೆಯಲ್ಲಿರುವ 25 ಅಂಶಗಳು

By Suvarna NewsFirst Published Dec 9, 2020, 9:14 PM IST
Highlights

ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧ ಮಸೂದೆ ಅಂಗೀಕಾರವಾಗಿದ್ದು, ಇನ್ನೇನು ಕಾಯ್ದೆಯಾಗಲಿದೆ. ಇನ್ನು ಈ ಕಾಯ್ದೆಯಲ್ಲಿ 25 ಕಠಿಣ ನಿಯಮಗಳಿದ್ದು, ಅವು ಈ ಕೆಳಗಿನಂತಿವೆ ನೋಡಿ.

ಬೆಂಗಳೂರು, (ಡಿ.09): ಭಾರೀ ವಿರೋಧದ ನಡುವೆಯೂ ವಿಧಾನಸಭೆಯಲ್ಲಿ ಇಂದು (ಬುಧವಾರ) ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರವಾಗಿದೆ. 

ಇನ್ನು ಈ ವಿಧೇಯಕದಲ್ಲಿ ಕಠಿಣ ನಿಯಮಗಳನ್ನು ಅಡಕ ಮಾಡಲಾಗಿದೆ. ವಿಧಾನಪರಿಷತ್ತಿನಲ್ಲಿಯೂ ಅಂಗೀಕಾರಗೊಂಡ ನಂತರ ಇದು ರಾಜ್ಯಪಾಲರ ಒಪ್ಪಿಗೆ ಬಳಿಕ ಕಾಯ್ದೆಯಾಗಿ ಜಾರಿಯಾಗಲಿದೆ. 

ಗೋ ಹತ್ಯೆ ನಿಷೇಧ ಮಸೂದೆ ಪಾಸ್: ಕಾನೂನು ಉಲ್ಲಂಘಿಸಿದ್ರೆ ಜೈಲು, ದಂಡ ಫಿಕ್ಸ್...!

ಬಳಿಕ ಗೋ ಹತ್ಯೆ, ಗೋಮಾಂಸ ಮಾರಾಟ ಕ್ರಿಮಿನಲ್ ಅಪರಾಧವಾಗಲಿದ್ದು, ದಂಡ ಸಹಿತ ಜೈಲು ಶಿಕ್ಷೆ ಗ್ಯಾರಂಟಿ. ಇನ್ನು ಈ  ಗೋ ಹತ್ಯೆ ನಿಷೇಧ  ಕಾಯ್ದೆಯಲ್ಲಿ 25 ಕಠಿಣ ನಿಯಮಗಳಿದ್ದು, ಅವು ಈ ಕೆಳಗಿನಂತಿವೆ ನೋಡಿ.

ಪ್ರಸ್ತಾವಿತ ಕಾಯ್ದೆಯಲ್ಲಿರುವ  ಅಂಶಗಳು
1. ಗೋ ಹತ್ಯೆ ಮಾಡಿದರೆ 3 ವರ್ಷಗಳಿಂದ 7 ವರ್ಷಗಳವರೆಗೆ ಕಾರಾಗೃಹವಾಸ
2. ಮೊದಲ ಬಾರಿ ಜಾನುವಾರು ಹತ್ಯೆ ಮಾಡಿದರೆ 50 ಸಾವಿರ ರೂ.ಗಳಿಂದ 5 ಲಕ್ಷ ರೂ.ವರೆಗೆ ದಂಡ
3. ಎರಡು ಅಥವಾ ಹೆಚ್ಚಿನ ಬಾರಿಯ ಅಪರಾಧಕ್ಕೆ 1 ಲಕ್ಷದಿಂದ 10 ಲಕ್ಷ ರೂ.ದಂಡ ಮತ್ತು ಏಳು ವರ್ಷ ಕಾರಾಗೃಹ ಶಿಕ್ಷೆ
4. ಹಸುಗಳ ಸಾಗಣೆ ಮತ್ತು ಶುಲ್ಕ ವಿಧಿಸಲು, ನಿಯಮ ರಚಿಸಲು, ಅನುಮತಿ ನೀಡಲು ಅಧಿಕಾರ
5. ಉಪವಿಧಿ 2 ಮತ್ತು ನಿಯಮ 18ರ ಪ್ರಕಾರ ಗೋ ವಧಾಗಾರಗಳಲ್ಲಿ ವಿಲೇವಾರಿ ಮಾಡಲು ನಿಯಮ
6. ಸ್ಥಳೀಯ ಆಡಳಿತಕ್ಕೆ ಗೋ ಶಾಲೆ ನಿರ್ವಹಣೆ ಮಾಡುವ ವಿಧಾನಕ್ಕೆ ಸಂಬಂಧಿಸಿದಂತೆ ನಿಯಮ ರೂಪಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ
7. ರಕ್ಷಣೆಗೆ ಸಂಬಂಧಪಟ್ಟಂತೆ ಲೆವಿ ಸಂಗ್ರಹಿಸಲು ಸ್ಥಳೀಯ ಸಂಸ್ಥೆಗಳು ಮತ್ತು ಸರ್ಕಾರಕ್ಕೆ ಅವಕಾಶ
8. ಸಬ್ ಇನ್‌ಸ್ಪೆಕ್ಟರ್ ಅಧಿಕಾರಿಗಳಿಗೆ ಸಕ್ಷಮ ಪ್ರಾಧಿಕಾರದ ಅಧಿಕಾರ
9. ದಾಳಿ ಮಾಡುವುದು, ಪರಿಶೀಲನೆ ಮತ್ತು ವಶಕ್ಕೆ ಪಡೆವ ಅಧಿಕಾರ ಸಬ್ ಇನ್‌ಸ್ಪೆಕ್ಟರ್‌ಗಳಿಗೆ
10. ಗೋವನ್ನು ಅನುಮಾನಾಸ್ಪದವಾಗಿ ಕಟ್ಟಿಕೊಂಡಿದ್ದರೆ ಅಥವಾ ಸಾಗಣೆ ಮಾಡುತ್ತಿದ್ದಾಗ ತನಿಖಾಧಿಕಾರಿಗೆ ಸಹಕಾರ ನೀಡಬೇಕು
11. ವಶಕ್ಕೆ ಪಡೆದ ವಿಚಾರವನ್ನು ತಕ್ಷಣ ಸಬ್ ಡಿವಿಜನ್ ಮ್ಯಾಜಿಸ್ಟ್ರೇಟರ್‌ಗಳಿಗೆ ತಿಳಿಸಿ ಅಲ್ಲಿಂದ ಮುಟ್ಟುಗೋಲು ಹಾಕಿಕೊಳ್ಳುವುದು
12. ಗೋ ಮಾಂಸ ವಶಕ್ಕೆ ಪಡೆದಿದ್ದರೆ ಮನುಷ್ಯನ ಉಪ ಭೋಗಕ್ಕೆ ಉಪಯೋಗವಲ್ಲ ಎಂದು ಪರಿಗಣಿಸಿ ನಾಶಪಡಿಸಬಹುದು
13. ವಶಪಡಿಸಿಕೊಂಡ ಹಸುಗಳನ್ನು ಸಾರ್ವಜನಿಕ ಹರಾಜು ಮಾಡಲು ಅವಕಾಶ
14. ಸೆಕ್ಷನ್ 19ರ ಪ್ರಕಾರ ಯಾವುದೇ ಸಂದರ್ಭದಲ್ಲಿ ವಶಕ್ಕೆ ಪಡೆದ ಹಸುಗಳನ್ನು ಆರೋಪಿತರಿಗೆ ಹಿಂದಿರುಗಿಸುವಂತಿಲ್ಲ
15. ಗೋ ಹತ್ಯೆ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಜಿಲ್ಲೆಗಳಲ್ಲಿ ವಿಶೇಷ ನ್ಯಾಯಾಲಯ ಸ್ಥಾಪನೆ
16. ಆರೋಪಿತರನ್ನು ವಶಕ್ಕೆ ಪಡೆಯುವುದು, ಪ್ರಕರಣ ವಿಲೇವಾರಿ ಸೆಷನ್ ಜಡ್ಜ್ ಹಂತದಲ್ಲೇ ನಡೆಯಬೇಕು
17. ಪ್ರಕರಣ ಮುಗಿದ ಬಳಿಕ ಆರೋಪ ಸಾಬೀತಾದಲ್ಲಿ ಹಸು, ಸಾಗಣೆ, ವಾಹನ, ಸ್ಥಳ ಮುಟ್ಟುಗೋಲು ಹಾಕಿಕೊಳ್ಳಬಹುದು. 18. ಗೋ ರಕ್ಷಣೆಗೆ ಶ್ರಮಿಸುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ
19. ಯಾವುದೇ ಲಸಿಕೆ, ಪ್ರಯೋಗಕ್ಕಾಗಿ ಸರ್ಕಾರ ಸ್ಥಾಪನೆ ಮಾಡಿರುವ ಪ್ರಯೋಗಾಲಯಕ್ಕೆ ಈ ನಿಯಮ ಅನ್ವಯವಾಗಲ್ಲ
20. ಸಾರ್ವಜನಿಕ ಹಿತಕ್ಕಾಗಿ ಪ್ರಾಣಿಯನ್ನು ಕೊಲ್ಲಲೇಬೇಕೆಂದು ಸರ್ಕಾರದಿಂದ ಪ್ರಮಾಣಿತವಾಗಿದ್ದರೆ ಅನ್ವಯವಾಗಲ್ಲ
21. ಸಾಂಕ್ರಾಮಿಕ ರೋಗಗಳ ಜಾನುವಾರುಗಳನ್ನು ಕೊಲ್ಲುವುದಕ್ಕೆ ತೊಂದರೆ ಇಲ್ಲ, ಆದರೆ, ಪಶುವೈದ್ಯಾಧಿಕಾರಿ ಪ್ರಮಾಣಪತ್ರ ಅಗತ್ಯ
22. ಗುಣವಾಗದ ಕಾಯಿಲೆ ಹೊಂದಿದ ಹಸು ಕೊಲ್ಲಲು ಅವಕಾಶವಿದೆ, ಆದರೆ, ಪ್ರಮಾಣ ಪತ್ರ ಅಗತ್ಯ
23. ಹದಿಮೂರು ವರ್ಷ ಮೇಲ್ಪಟ್ಟ ಎಮ್ಮೆ ಮತ್ತು ಕೋಣ ಸೂಕ್ತ ಪ್ರಾಧಿಕಾರದ ಪರವಾನಗಿಯೊಂದಿಗೆ ವಧಿಸಬಹುದು
24. ವಧೆಗೆ ಪಶು ವೈದ್ಯಾಧಿಕಾರಿಯಿಂದ ಪ್ರಮಾಣ ಪತ್ರ ಕಡ್ಡಾಯ
25. ಕರ್ನಾಟಕ ಸೊಸೈಟಿ ಆಕ್ಟ್ ಪ್ರಕಾರ ನೊಂದಾಯಿತ ಸಂಸ್ಥೆಗಳಿಗೆ ಮಾತ್ರ ಗೋ ಶಾಲೆ ನಡೆಸಲು ಅಧಿಕಾರ

click me!