ಡೆಂಗ್ಯೂನಿಂದ ಬದುಕುಳಿದವರೊಂದಿಗೊಂದು ಮಾತು ಕಥೆ

By Web DeskFirst Published Oct 17, 2019, 5:12 PM IST
Highlights

ಡೆಂಗ್ಯೂ ರೋಗದಿಂದ ಬಳಲಿದವರ ಸ್ಥಿತಿ ಚಿಂತಾಜನಕ. ಅವರು ಅನುಭವಿಸುವ ಯಾತನೆ, ನೋವು ಅಷ್ಟಿಷ್ಟಲ್ಲ. ಸಾವು ಬದುಕಿನ ಮಧ್ಯೆ ಹೋರಾಡಿ, ಪುನರ್ಜನ್ಮ ಪಡೆದವರೊಂದಿಗೆ ನಡೆದ ಮಾತುಕತೆ ಇಲ್ಲಿದೆ. 

ಮಳೆ-ಬಿಸಿಲಿನ ಆಟ ಶುರುವಾದರೆ ಸಾಕ, ಸೊಳ್ಳೆ ಕಾಟವೂ ಹೆಚ್ಚುತ್ತೆ. ಜತೆಗೆ ಕಾಯಿಲೆಯ ಸರಮಾಲೆಯೇ ಕಾಡಲು ಆರಂಭವಾಗುತ್ತೆ. ಅದರಲ್ಲಿ ಡೆಂಗ್ಯೂ ಅತ್ಯಂತ ಅಪಾಯಕಾರ ರೋಗಗಳಲ್ಲಿ ಇದೂ ಒಂದೆಂದು ಇತ್ತೀಚೆಗೆ ಭಾರತ ಸರಕಾರದ ವರದಿಯೇ ಹೇಳಿದೆ. ಈ ವರ್ಷ ಇದುವರೆಗೆ ದಾಖಲಾದ ಡೆಂಗ್ಯೂ ಪ್ರಕರಣಗಳಲ್ಲಿ ಕರ್ನಾಟಕದ ಪಾಲೇ ಹೆಚ್ಚು, ಅತೀ ಹೆಚ್ಚು 5500ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಇಂಥ ಭಯಾನಕ ರೋಗದಿಂದ ಬಳಲಿ, ಬದುಕುಳಿದವರೊಂದಿಗೆ ಸುವರ್ಣನ್ಯೂಸ್.ಕಾಮ್ ಮಾತನಾಡಿಸಿತು. ತಮ್ಮ ನೋವು, ಅನುಭವಿಸಿದ ಯಾತನೆಯನ್ನು ನಮ್ಮ ವೆಬ್‌ಸೈಟ್‌ನೊಂದಿಗೆ ಹಂಚಿ ಕೊಂಡಿದ್ದು ಹೀಗೆ....

ಪ್ರಸ್ತುತ ಭಾರತವನ್ನು ಕಾಡುತ್ತಿರುವ ಕೀಟ

'ನಾನು ಚೆನ್ನಾಗಿಯೇ ಇದ್ದೆ. ಆದರೆ, ಇದ್ದಕ್ಕಿದ್ದಂತೆ ರಾತ್ರಿ ಜ್ವರ ಬಂತು. ಜ್ವರ ಅಲ್ಲವೇ, ಮಾಮೂಲಿ ಎಂದು ನಿರ್ಲಕ್ಷಿಸಿದೆ. ಆದರೆ, ರಾತ್ರಿ ಇಡೀ ನನ್ನ ನಿದ್ರೆಗೆಡಿಸಿತು . ನಿಲ್ಲುತ್ತೆ ಭಾವಿಸಿದೆ. ಇಲ್ಲ, ಮುಂದುವರಿಯಿತು. ಎರಡು ದಿನವಾದರೂ ಕಡಿಮೆ ಆಗಲಿಲ್ಲ ಈ ಜ್ವರ. ಕೂರಲೂ ಆಗದಂಥ ತಲೆ ಸಿಡಿತ. ಸಂಪೂರ್ಣ ಪರಿಶೀಲಿಸಿದ ನಂತರ, ವೈದ್ಯರು ನನಗೆ ಡೆಂಗ್ಯೂ ಇದೆ ಎಂದು ದೃಢಪಡಿಸಿದರು. ತಕ್ಷಣವೇ ಆಸ್ಪತ್ರೆಗೆ ಅಡ್ಮಿಟ್ ಆದೆ. ಮೊದಲ 1-2  ದಿನ ನನಗೆ ಪ್ರಜ್ಞೆಯೇ ಇರಲಿಲ್ಲ. ಜ್ವರ ಹೆಚ್ಚುತ್ತಲೇ ಇತ್ತು. ಪ್ಲೇಟ್‌ಲೆಟ್ಸ್ ಗಣನೀಯವಾಗಿ ಇಳಿಯುತ್ತಿತ್ತು. ವೈದ್ಯರೂ ಚಿಕಿತ್ಸೆ ಮುಂದುವರಿಸಿದರು. ಏನೋ ಚಿಕಿತ್ಸೆ ಫಲಕಾರಿಯಾಯಿತು. ಬದುಕುಳಿದೆ. ಆ ಯಾತನೆ, ನೋವು ಅಷ್ಟಿಷ್ಟಲ್ಲ. ಅದಕ್ಕೆ ಎಲ್ಲರಿಗೂ ಸೊಳ್ಳೆಯಿಂದ ದೂರ ಇರುವಂತೆ ಹೇಳುತ್ತಲೇ ಇರುತ್ತೇನೆ'

<ಲಕ್ಷ್ಮಿ, ಆರ್‌ಆರ್ ನಗರ, ಬೆಂಗಳೂರು>

ಡೆಂಗ್ಯೂ ಮಳೆಗಾಲದಲ್ಲಿ ಕಾಡೋ ರೋಗವಲ್ಲ, ಸರ್ವಕಾಲಕ್ಕೂ ತರುತ್ತೆ ಕುತ್ತು

'ನನ್ನ ನಿರಂತರ ಜ್ವರಕ್ಕೆ ಡಂಗ್ಯೂ ಕಾರಣವೆಂದು ವೈದ್ಯರು ಹೇಳಿದಾಗ ದಂಗಾಗಿದ್ದೆ. ಅದೂ ನನ್ನ ಜ್ವರದ ಆರಂಭದ ದಿನಗಳು. ಆಗ ತಾನೇ ಪ್ಲೇಟ್‌ಲೆಟ್ಸ್ ಕೌಂಟ್ ಕಡಿಮೆಯಾಗಲು ಆರಂಭವಾಗಿತ್ತು. 20 ಸಾವಿರದವರೆಗೂ ಇಳಿಯಿತು. ಇದು ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ ಎಂದ ವೈದ್ಯರು ಅಪಾಯದ ಮುನ್ಸೂಚನೆ ನೀಡಿದ್ದರು. ಐದು ಸಲ ಪ್ಲೇಟ್‌ಲೆಟ್ಸ್ ಕೊಡಲಾಯಿತು. ತುಸು ಹೆಚ್ಚಾಯಿತು ಎನ್ನುವಷ್ಟರಲ್ಲಿ ಮತ್ತೆ ಡೌನ್ ಆಗುತ್ತಿತ್ತು. ನನ್ನ ಪೋಷಕರು ಬೆಂಗಳೂರಿನಲ್ಲಿ ಇರಲಿಲ್ಲ. ನನ್ನ ಫ್ರೆಂಡ್ಸ್ ಪ್ಲೇಟ್‌ಲೆಟ್ಸ್ ಹೊಂದಿಸಲು ಒದ್ದಾಡಿ ಬಿಟ್ಟರು. ನಾನಂತೂ ಪ್ರಜ್ಞಾಹೀನನಾಗಿದ್ದೆ. ಆಗೊಮ್ಮೆ ಈಗೊಮ್ಮೆ ತುಸು ಪ್ರಜ್ಞೆ ಬರುತ್ತಿತ್ತು. ನನ್ನ ಸ್ನೇಹಿತರ ಒದ್ದಾಟ ನೋಡಿ ತಪ್ಪದಸ್ತ ಭಾವ ನನ್ನನ್ನು ಕಾಡುತ್ತಿತ್ತು. ಐದು ದಿನಗಳ ನಂತರ ಪ್ಲೇಟ್‌ಲೆಟ್ಸ್ ಕೌಂಟ್ ಹೆಚ್ಚಾಗಲು ಆರಂಭವಾಯಿತು. ಆಮೇಲೆ ತುಸು ಸುಧಾರಿಸಿಕೊಂಡೆ. ಆಸ್ಪತ್ರೆಯಿಂದ ಡಿಸ್ಟಾರ್ಜ್ ಆದರೂ ಸಂಪೂರ್ಣ ಗುಣಮುಖನಾಗಲು ಒಂದು ತಿಂಗಳು ತೆಗೆದುಕೊಂಡೆ. ಇಂಥ ಯಾತನೆ ಯಾವ ಶತ್ರುವಿಗೂ ಬರುವುದು ಬೇಡ. ಇಂಥ ನೋವನ್ನು ಅನುಭವಿಸದಂತೆ ನಾನೇ ನಿಯಂತ್ರಿಸಿಕೊಳ್ಳಬಹುದಿತ್ತು.'

ಒಂದೇ ಒಂದು ಸೊಳ್ಳೆಯೂ ಆರೋಗ್ಯಕ್ಕೆ ಮಾರಕ ಎಂಬುದನ್ನು ಡೆಂಗ್ಯೂವಿನ ಬಳಲಿದವರು ಹಂಚಿಕೊಂಡ ಈ ಅನುಭವವಗಳೇ  ಸಾಕ್ಷಿ. ಇವೆಲ್ಲವಕ್ಕೂ ಸುತ್ತಮುತ್ತಲಿನ ವಾತವರಣದಲ್ಲಿ ಸೊಳ್ಳೆಯಾಗದಂತೆ ತಡೆಯುವುದೇ ಬೆಸ್ಟ್ ಸೊಲ್ಯೂಷನ್. 

click me!