ಹುತಾತ್ಮ ಯೋಧ ಗುರು ಮೊದಲ ವರ್ಷದ ಪುಣ್ಯಸ್ಮರಣೆ
ಪುಲ್ವಾಮಾದಲ್ಲಿ ಉಗ್ರದಾಳಿಯಲ್ಲಿ ಹುತಾತ್ಮರಾದ ವೀರ ಯೋಧ ಗುರು ಮೊದಲ ವರ್ಷದ ಪುಣ್ಯ ಸ್ಮರಣೆ ನೆರವೇರಿಸಲಾಯಿತು. 2019ರ ಫೆಬ್ರವರಿಯಲ್ಲಿ ಗುರು ಸೇರಿದಂತೆ 40 ಯೋಧರು ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾಗಿದ್ದರು. ಈ ಕುರಿತಾದ ವಿವರ ಇಲ್ಲಿದೆ ನೋಡಿ...
ಮಂಡ್ಯ(ಫೆ.15): ಕಳೆದ ವರ್ಷ ಫೆ.14ರಂದು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ಆತ್ಮಾಹುತಿ ಬಾಂಬ್ ದಾಳಿಗೆ ಬಲಿಯಾದ ಗುಡಿಗೆರೆಯ ವೀರ ಯೋಧ ಗುರು ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಶುಕ್ರವಾರ ನೆರವೇರಿತು. ಇದೇ ವೇಳೆ ದಾಳಿ ವೇಳೆ ಬಲಿಯಾದ ಗುರು ಸೇರಿದಂತೆ 40 ಯೋಧರ ಭಾವಚಿತ್ರಗಳ ಬ್ಯಾನರ್ಗೂ ಪೂಜೆ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಲಾಯಿತು.
ಪುಲ್ವಾಮಾ ಮಕ್ಕಳನ್ನು ಉಮೇಶ್ ಸಂಗ್ರಹಿಸಿದ ಮಣ್ಣಲ್ಲಿ ಕಂಡ ಭಾರತ್ ಮಾ!
ಹುತಾತ್ಮ ಯೋಧ ಎಚ್.ಗುರು ಸಮಾಧಿಯನ್ನು ಹೂಗಳಿಂದ ತ್ರಿವರ್ಣ ಧ್ವಜದಂತೆ ಸಿಂಗರಿಸಲಾಗಿತ್ತು. ಗುರು ತಾಯಿ ಚಿಕ್ಕತಾಯಮ್ಮ, ತಂದೆ ಹೊನ್ನಯ್ಯ, ಸಹೋದರರಾದ ಮಧು, ಆನಂದ್ ಪೂಜೆ ಸಲ್ಲಿಸಿದರು. ಭಾರತೀನಗರದ ಜ್ಞಾನಮುದ್ರಾ ಸೇರಿದಂತೆ ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಸಮಾಧಿ ಸುತ್ತ ಮೇಣದ ಬತ್ತಿ ಹಚ್ಚಿ, ಹುತಾತ್ಮ ಯೋಧನಿಗೆ ನಮನ ಸಲ್ಲಿಸಿದರು.
ಸೊಸೆ ಕಲಾವತಿ ನಮ್ಮೊಂದಿಗಿಲ್ಲ: ಚಿಕ್ಕತಾಯಮ್ಮ
ನಮ್ಮ ಸೊಸೆ ಕಲಾವತಿ ಈಗ ಜೊತೆಯಲ್ಲಿ ಇಲ್ಲ. ನನ್ನ ಮಗನ ಸಾವಿನ ಬಳಿಕ ಕಲಾವತಿ ಬೆಂಗಳೂರಿಗೆ ಹೋಗಿದ್ದಾಳೆ. ನಾವೇನಾದರೂ ಒಟ್ಟಿಗೆ ಇರೋಣ ಅಂದರೆ ನಮ್ಮನ್ನೆ ತಪ್ಪಾಗಿ ಬಿಂಬಿಸುತ್ತಾರೆ. ನನ್ನ ಮಗ ಇದ್ದಾಗ ಸೊಸೆಯನ್ನು ಮಗಳಂತೆ ನೋಡಿಕೊಂಡಿದ್ದೆ. ನನ್ನ ಮಗ ಗುರು ನಮ್ಮಲ್ಲಿ ಏನೇ ಜಗಳವಾದರೂ ಸಮಾಧಾನ ಮಾಡುತ್ತಿದ್ದ. ದೇಶ ಕಾಯುವ ಜೊತೆ ನಮ್ಮ ಮನೆಯನ್ನೂ ಗುರು ಕಾಯುತ್ತಿದ್ದ ಎಂದು ಭಾವುಕರಾದ ಚಿಕ್ಕತಾಯಮ್ಮ, ಗುರು ಹುತಾತ್ಮನಾಗಿ ಒಂದು ವರ್ಷ. ಗುರು ಸಮಾಧಿಗೆ ಪೂಜೆ ಸಲ್ಲಿಸುತ್ತಿದ್ದೇವೆ. ಸೊಸೆ ಕಲಾವತಿ ನಮ್ಮ ಸಂಪರ್ಕದಲ್ಲೇ ಇಲ್ಲ ಎಂದರು.
ಪುಲ್ವಾಮಾ ಹುತಾತ್ಮ, ಮದ್ದೂರಿನ ಗುರು ಸಮಾಧಿಗೆ ಗ್ರಹಣ, ಚಿತ್ತ ಹರಿಸದ ಸರ್ಕಾರ!
ನಾಳೆ ಕಲಾವತಿ ಕುಟುಂಬದಿಂದ ತಿಥಿ ಕಾರ್ಯ
ರಾಮನಗರ: ಹುತಾತ್ಮ ಯೋಧ ಗುರುವಿನ ಕುಟುಂಬದವರು ವರ್ಷದ ತಿಥಿ ಕಾರ್ಯ ಮಾಡಿರುವ ವಿಚಾರ ನಮಗೆ ಗೊತ್ತಿಲ್ಲ. ನಮ್ಮನ್ನು ಕರೆದಿಲ್ಲ. ಫೆ.16ರಂದು ನಮ್ಮ ಕುಟುಂಬವೇ ಗುರುವಿನ ತಿಥಿ ಕಾರ್ಯ ಮಾಡುತ್ತೇವೆ ಎಂದು ಕಲಾವತಿ ತಾಯಿ ಜಯಮ್ಮ ತಿಳಿಸಿದ್ದಾರೆ. ನನ್ನ ಮಗಳು ಒಂದು ತಿಂಗಳ ಮೊದಲೇ ಅತ್ತೆ-ಮಾವ ಅವರೊಂದಿಗೆ ತಿಥಿ ಕಾರ್ಯ ಮಾಡುವ ಬಗ್ಗೆ ಮಾತನಾಡಿದ್ದಳು. ಆದರೆ, ಗುರು ಕುಟುಂಬದವರು ನಾವು ಯಾವ ಕಾರ್ಯವನ್ನೂ ಮಾಡುವುದಿಲ್ಲ ಅಂತೇಳಿ ಫೋನ್ ಕಟ್ ಮಾಡಿದ್ದರು. ಹೀಗಾಗಿ ನಾವುಗಳೇ ಶಾಸ್ತ್ರ ಕೇಳಿ ಫೆ.16ಕ್ಕೆ ಕಾರ್ಯ ನಿಗದಿ ಪಡಿಸಿದ್ದೇವೆ ಎಂದಿದ್ದಾರೆ.