ಜೆಎನ್ ಯು ವಿದ್ಯಾರ್ಥಿ ಉಮರ್ ಖಾಲೀದ್ ಮೇಲೆ ಗುಂಡಿನ ದಾಳಿ
ದಾಳಿಯಲ್ಲಿ ಉಮರ್ ಖಾಲಿದ್ ಪ್ರಾಣಾಪಾಯದಿಂದ ಪಾರಾಗಿದ್ದು ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಚರ್ಚಾ ಸಮಾರಂಭದ ಅಂಗವಾಗಿ ಕ್ಲಬ್ ಆಗಮಿಸಿದ ವೇಳೆಯಲ್ಲಿ ಬಿಳಿ ಶರ್ಟ್ ಧರಿಸಿದ್ದ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ.
ನವದೆಹಲಿ[ಆ.13]: ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ[ಜೆಎನ್ ಯು] ವಿದ್ಯಾರ್ಥಿ ಉಮರ್ ಖಾಲೀದ್ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿರುವ ಘಟನೆ ನವದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾದ ಹೊರಭಾಗದಲ್ಲಿ ನಡೆದಿದೆ.
ದಾಳಿಯಲ್ಲಿ ಉಮರ್ ಖಾಲಿದ್ ಪ್ರಾಣಾಪಾಯದಿಂದ ಪಾರಾಗಿದ್ದು ದಾಳಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಚರ್ಚಾ ಸಮಾರಂಭದ ಅಂಗವಾಗಿ ಕ್ಲಬ್ ಆಗಮಿಸಿದ ವೇಳೆಯಲ್ಲಿ ಬಿಳಿ ಶರ್ಟ್ ಧರಿಸಿದ್ದ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಉಮರ್ ತಕ್ಷಣ ಕುಸಿದು ಬಿದ್ದರು. ಸ್ಥಳದಲ್ಲಿದ್ದವರು ಅಪರಿಚಿತನನ್ನು ಹಿಡಿಯಲು ಪ್ರಯತ್ನಿಸಿದಾದರೂ ಗಾಳಿಯಲ್ಲಿ ಗುಂಡು ಹಾರಿಸಿ ಪರಾರಿಯಾದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಗಾಯಗೊಂಡ ಉಮರ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಯಾವುದೇ ಗಾಯವಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸರ್ಕಾರಿ ವಿರೋಧಿ ಭಾಷಣಗಳಿಂದ 2 ವರ್ಷಗಳ ಹಿಂದೆ ಖಲೀದ್ ಸುದ್ದಿಯಾಗಿದ್ದರು. ಕೆಲವು ವರ್ಷಗಳ ಹಿಂದೆ ಜೆಎನ್ ಯು ವಿವಿ ಆವರಣದಲ್ಲಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದ ಆರೋಪ ಅವರ ಮೇಲಿತ್ತು.
ಗೌರಿ ಲಂಕೇಶ್ ನೆನಪಿಸಿಕೊಂಡ ಖಾಲಿದ್
ಅಪರಿಚಿತ ವ್ಯಕ್ತಿ ಗುಂಡಿನ ದಾಳಿ ನಡೆಸಲು ಮುಂದಾದಾಗ ನನಗೆ ತುಂಬ ಭಯವಾಗಿತ್ತು. ಆ ಸಂದರ್ಭದಲ್ಲಿ ಗೌರಿ ಲಂಕೇಶ್ ಅವರಿಗೆ ಆದ ಘಟನೆಯನ್ನು ನೆನಪಿಸಿಕೊಂಡೆ. ನನಗೂ ಇನ್ನೇನು ಸಾವು ಸಮೀಪಿಸಿದೆ ಎಂದು ಭಾವಿಸಿಕೊಂಡೆ. ನನ್ನ ಜೀವವನ್ನು ಉಳಿಸಿದ ನನ್ನ ಸ್ನೇಹಿತರಿಗೆ ನಾನು ಆಭಾರಿಯಾಗಿದ್ದೇನೆ. ಕಳೆದ ಎರಡು ವರ್ಷಗಳಿಂದ ಕೆಲವು ಮಾಧ್ಯಮಗಳು ನನ್ನ ವಿರುದ್ಧ ಅಪಪ್ರಚಾರ ಹಾಗೂ ದ್ವೇಷದ ಭಾವನೆ ಮೂಡಿಸುತ್ತಿವೆ ವಿನಃ ಯಾರೊಬ್ಬರೂ ಪ್ರಸ್ತುತ ಸರ್ಕಾರದ ನೀತಿಗಳನ್ನು ಪ್ರಶ್ನಿಸುತ್ತಿಲ್ಲ ಎಂದು ದಾಳಿಯ ನಂತರ ಸುದ್ದಿಸಂಸ್ಥೆಯೊಂದಕ್ಕೆ ಖಾಲಿದ್ ತಿಳಿಸಿದ್ದಾರೆ.