Conman Sukesh: ಸುಕೇಶ್ 200 ಕೋಟಿ ವಸೂಲಿ ಮಾಡಿದ್ದು ಹೇಗೆ?
4 ಪ್ರತ್ಯೇಕ ಸ್ಥಳ, 30 ರಹಸ್ಯ ಭೇಟಿಗಳಲ್ಲಿ ವಸೂಲಿ
10 ರು. ನೋಟಿನ ‘ಕೋಡ್’
ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಸಂಪೂರ್ಣ ವಿವರ
ನವದೆಹಲಿ (ಡಿ.23): ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ರಾರಯನ್ಬಾಕ್ಸಿ ಕಂಪನಿಯ ಮಾಜಿ ಪ್ರವರ್ತಕ ಶಿವೇಂದರ್ ಸಿಂಗ್ರನ್ನು ಜಾಮೀನಿನ ಮೇಲೆ ಬಿಡಿಸಲು ವಂಚಕ ಸುಕೇಶ್ ಚಂದ್ರಶೇಖರ್ ಯಾವೆಲ್ಲಾ ತಂತ್ರಗಳನ್ನು ಬಳಸಿದ್ದ ಎಂಬ ರೋಚಕ ಅಂಶಗಳು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪಪಟ್ಟಿಯಲ್ಲಿದೆ.
ಜೈಲಿನಿಂದಲೇ ಕರೆ: ಶಿವೇಂದರ್ ಜೈಲು ಸೇರಿದ್ದ ವೇಳೆ, ಸುಕೇಶ್ ಕೂಡಾ ತಿಹಾರ್ ಜೈಲಿನಲ್ಲೇ ಇದ್ದ. ಆದರೂ ಅಲ್ಲಿ ಕುಳಿತುಕೊಂಡೇ ಆತ ಶಿವೇಂದರ್ ಪತ್ನಿ ಅದಿತಿಗೆ ದೂರವಾಣಿ ಕರೆ ಮಾಡಿ, ತಾನು ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿ. 200 ಕೋಟಿ ರು. ಕೊಟ್ಟರೆ ನಿಮ್ಮ ಪತಿಗೆ ಜಾಮೀನು ಕೊಡಿಸಲು ನೆರವಾಗುವುದಾಗಿ ನಂಬಿಸಿದ್ದ.
200 ಕೋಟಿ ನೀಡಿಕೆ: ಸುಕೇಶ್ ಕರೆಯನ್ನು ನಂಬಿದ್ದ ಅದಿತಿ, ಒಟ್ಟು 30 ಕಂತುಗಳಲ್ಲಿ 200 ಕೋಟಿ ರು.ಗಳನ್ನು ಸುಕೇಶ್ಗೆ ಹಸ್ತಾಂತರ ಮಾಡಿದ್ದರು. ಹಣ ಸಂಗ್ರಹಿಸಲೆಂದೇ ಸುಕೇಶ್ ತನ್ನ ಇಬ್ಬರು ಆಪ್ತರಾದ ದೀಪಕ್ ಮತ್ತು ಪ್ರದೀಪ್ರನ್ನು ಅದಿತಿ ಬಳಿಗೆ ಕಳುಹಿಸುತ್ತಿದ್ದ. ಹೀಗೆ ಪ್ರತಿ ಬಾರಿ ಹಣ ಸಂಗ್ರಹಿಸಿ ಸುಕೇಶ್ಗೆ ನೀಡುವುದಕ್ಕೆ ತಲಾ 2- 2.50 ಲಕ್ಷ ರು. ಕಮಿಷನ್ ಅನ್ನು ಇಬ್ಬರೂ ಪಡೆಯುತ್ತಿದ್ದರು.
4 ಪ್ರತ್ಯೇಕ ಸ್ಥಳ: 30 ಕಂತುಗಳಲ್ಲಿ 200 ಕೋಟಿ ರು.ಹಣವನ್ನು ದೆಹಲಿಯ ನಾಲ್ಕು ಪ್ರತ್ಯೇಕ ಸ್ಥಳಗಳಲ್ಲಿ ನೀಡಲಾಗಿತ್ತು. ಯಾರಿಗೂ ಅನುಮಾನ ಬಾರದೇ ಇರಲಿ ಎಂದು ಈ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.
10 ರು. ಕೋಡ್: ಪ್ರತಿ ಬಾರಿ ಹಣ ಪಾವತಿಗೂ ಮುನ್ನ ಅದಿತಿಗೆ ಕರೆ ಮಾಡುತ್ತಿದ್ದ ಸುಕೇಶ್ ಪ್ರತ್ಯೇಕ ಕೋಡ್ಗಳನ್ನು ನೀಡುತ್ತಿದ್ದ. ಉದಾಹರಣೆಗೆ ಒಮ್ಮೆ ಹಣ ಪಡೆಯಲು ಬರುವ ವ್ಯಕ್ತಿ 10 ರು.ಮುಖಬೆಲೆಯ ನೋಟು ನೀಡುತ್ತಾನೆ ಎಂದು ಸುಕೇಶ್ ಮಾಹಿತಿ ನೀಡುತ್ತಿದ್ದ. ಹಣ ಪಡೆಯಲು ಬರುತ್ತಿದ್ದ ದೀಪಕ್ ಮತ್ತು ಪ್ರದೀಪ್, ಅದಿತಿಗೆ 10 ರು. ನೋಟು ನೀಡಿದ ಬಳಿಕ ಅದಿತಿ ಅವರಿಗೆ ಹಣ ಪಾವತಿ ಮಾಡುತ್ತಿದ್ದರು ಎಂಬ ಅಂಶಗಳನ್ನು ಆರೋಪಪಟ್ಟಿಯಲ್ಲಿ ದಾಖಲಿಸಲಾಗಿದೆ.
ಏನಿದು ಪ್ರಕರಣ: ಸುಕೇಶ್ ಚಂದ್ರಶೇಖರ್, ಜೈಲಿನೊಳಗೆ ಕುಳಿತೇ 200 ಕೋಟಿ ರು.ಗೂ ಹೆಚ್ಚಿನ ಸುಲಿಗೆ ಮಾಡಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿತ್ತು. ದೆಹಲಿಯ ಉದ್ಯಮಿಯೊಬ್ಬರಿಗೆ 50 ಕೋಟಿ ರು. ವಂಚಿಸಿದ ಪ್ರಕರಣದ ಕುರಿತು ತನಿಖೆ ನಡೆಸಿದ ವೇಳೆ ಸುಕೇಶ್ನ ಬ್ರಹ್ಮಾಂಡ ಅವತಾರ ಪತ್ತೆಯಾಗಿತ್ತು. ಜೈಲಿನಲ್ಲಿ ಇದ್ದುಕೊಂಡೇ ದೆಹಲಿಯಲ್ಲಿ ಕಾರ್ಯಾಚರಣೆ ನಡೆಸಿದ್ದ.
Jacqueline Fernandez in Trouble: ವಜ್ರದ ಕಿವಿಯೋಲೆ, BMW, ದುಬಾರಿ ಗಿಫ್ಟ್ ಪಡೆದ ನಟಿ
ದೆಹಲಿಯ ದೊಡ್ಡ ಉದ್ಯಮ ಸಮೂಹವೊಂದರ ಮಾಲೀಕರನ್ನು ಸಂಪರ್ಕಿಸಿದ್ದ ಸುಕೇಶ್ನ ಇಬ್ಬರು ಸಹಚರರು, ‘ನಿಮ್ಮ ವಿರುದ್ಧ ಪ್ರಕರಣವೊಂದರಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದು, ಅದರಿಂದ ಬಚಾವ್ ಮಾಡಲು 50 ಕೋಟಿ ರು. ನೀಡಬೇಕು’ ಎಂದು ಬೇಡಿಕೆ ಇಟ್ಟಿದ್ದರು. ಇದಕ್ಕೆ ಒಪ್ಪಿದ್ದ ಉದ್ಯಮಿ 50 ಕೋಟಿ ನೀಡಿದ್ದರು. ಬಳಿಕ ತಾವು ಮೋಸ ಹೋಗಿದ್ದು ಗೊತ್ತಾಗಿ ಉದ್ಯಮಿ ಕುಟುಂಬ ದೂರು ನೀಡಿತ್ತು. ತನಿಖೆ ವೇಳೆ ಇದರ ಹಿಂದೆ ಸುಕೇಶ್ ಮತ್ತು ಜೈಲಿನ ಹೊರಗೆ ಆತನ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಸಹಚರರಾದ ದೀಪಕ್ ರಾಮ್ದನಿ ಮತ್ತು ಪ್ರದೀಪ್ ರಾಮ್ದನಿ ಪಾತ್ರ ಕಂಡುಬಂದಿತ್ತು. ಅವರಿಬ್ಬರನ್ನೂ ಬಂಧಿಸಿ, ಪ್ರಕರಣವನ್ನು ಹೆಚ್ಚಿನ ತನಿಖೆಗೆ ಆರ್ಥಿಕ ಅಪರಾಧ ದಳಕ್ಕೆ ವಹಿಸಲಾಗಿತ್ತು. ಈ ವೇಳೆ ಸುಕೇಶ್ ಜೈಲಿನೊಳಗೆ ಇದ್ದುಕೊಂಡೇ ಕನಿಷ್ಠ 190-200 ಕೋಟಿ ರು. ಸುಲಿಗೆ ಮಾಡಿದ್ದ.