ತಿರುಗಿ ಬಿದ್ದಿದ್ದ ಪಾಟೀಲರಿಗೆ ಕಾಂಗ್ರೆಸ್ ಲೇಟ್ ಗಿಫ್ಟ್!
ಅತ್ತ ಸಚಿವ ಸ್ಥಾನವೂ ಸಿಗದೆ, ಇತ್ತ ಕೆಪಿಸಿಸಿ ಅಧ್ಯಕ್ಷ ಗಾದಿಯೂ ಸಿಗದೆ ಕೆಲ ತಿಂಗಳುಗಳ ಹಿಂದೆ ಕಾಂಗ್ರೆಸ್ ಪಕ್ಷದ ವಿರುದ್ಧವೇ ತಿರುಗಿ ನಿಂತಿದ್ದ ಎಂ.ಬಿ.ಪಾಟೀಲರ ಮನವೊಲಿಸಲು ಕಾಂಗ್ರೆಸ್ ಹೊಸ ತಂತ್ರ ಮಾಡಿದೆ.
ಬೆಂಗಳೂರು[ಆ.17] ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಗೆ ಮಾಜಿ ಸಚಿವ ಎಂ.ಬಿ. ಪಾಟೀಲ್ ಅವರ ಸಹೋದರ ಸುನೀಲ್ಗೌಡ ಬಸನಗೌಡ ಪಾಟೀಲ್ ಅವರನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ.
ಗುರುವಾರ ನಡೆದ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲಾ ಘಟಕದ ಮುಖಂಡರ ಸಭೆಯ ನಂತರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಈ ನಿರ್ಧಾರ ಕೈಗೊಂಡರು. ಪ್ರಸ್ತುತ ವಿಜಯಪುರದ ಬಿಎಲ್ಡಿ ಕಾಲೇಜಿನ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸುನೀಲ್ಗೌಡ ಪಾಟೀಲ್ ಅವರನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಥಳೀಯ ಸಂಸ್ಥೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಗೆ ಆಯ್ಕೆ ಮಾಡಿರುವುದು ಕಾಂಗ್ರೆಸ್ ವಲಯದಲ್ಲಿ ಹುಬ್ಬೇರಿಸಿದೆ.
ಸಚಿವ ಸ್ಥಾನ ದೊರೆಯದಿದ್ದರಿಂದ ಅಸಮಾಧಾನಗೊಂಡಿರುವ ಎಂ.ಬಿ. ಪಾಟೀಲ್ ಅವರನ್ನು ಸಮಾಧಾನ ಪಡಿಸಲು ಅವರ ಸಹೋದರನಿಗೆ ಸ್ಥಳೀಯ ಸಂಸ್ಥೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ ಎನ್ನಲಾಗುತ್ತಿದೆ. ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ ಅವರು ಇತ್ತೀಚೆಗೆ ವಿಧಾನಸಭೆಗೆ ಆಯ್ಕೆಗೊಂಡಿದ್ದರಿಂದ, ಅವರು ಪ್ರತಿನಿಧಿಸುತ್ತಿದ್ದ ಈ ಪರಿಷತ್ ಕ್ಷೇತ್ರ ತೆರವಾಗಿತ್ತು.