ಗ್ರಾಹಕರೇ ಹುಷಾರ್! ಭಾರತೀಯ ATMಗಳು ಸೇಫ್ ಅಲ್ಲ: ಸೈಬರ್ ದಾಳಿಗೆ ತುತ್ತಾಗದಿರಲು ಹೀಗೆ ಮಾಡಿ
ಭಾರತದ ಸೇರಿದಂತೆ ವಿಶ್ವದ 150ಕ್ಕೂ ರಾಷ್ಟ್ರಗಳ ಮೇಲೆ ಸೈಬರ್ ದಾಳಿ ದೇಶದ ಎಟಿಎಂ ಮೇಲೂ ಪರಿಣಾಮ ಬೀರುವ ಆತಂಕ ಎದುರಾಗಿದೆ. ತಜ್ಞರು ಹೇಳುವ ಪ್ರಕಾರ, ದೇಶದ ಶೇ 70ಕ್ಕೂ ಹೆಚ್ಚು ಎಟಿಎಂಗಳನ್ನು ಹ್ಯಾಕರ್ಗಳು ಸುಲಭವಾಗಿ ಟಾರ್ಗೆಟ್ ಮಾಡಬಹುದು. ಇದು ಸಾಧ್ಯವಾದರೆ ಬ್ಯಾಂಕಿಂಗ್ ವ್ಯವಸ್ಥೆ ಬುಡಮೇಲಾಗುವ ಸಾಧ್ಯತೆ ಇದೆ.
ನವದೆಹಲಿ(ಮೇ.15): ಭಾರತದ ಸೇರಿದಂತೆ ವಿಶ್ವದ 150ಕ್ಕೂ ರಾಷ್ಟ್ರಗಳ ಮೇಲೆ ಸೈಬರ್ ದಾಳಿ ದೇಶದ ಎಟಿಎಂ ಮೇಲೂ ಪರಿಣಾಮ ಬೀರುವ ಆತಂಕ ಎದುರಾಗಿದೆ. ತಜ್ಞರು ಹೇಳುವ ಪ್ರಕಾರ, ದೇಶದ ಶೇ 70ಕ್ಕೂ ಹೆಚ್ಚು ಎಟಿಎಂಗಳನ್ನು ಹ್ಯಾಕರ್ಗಳು ಸುಲಭವಾಗಿ ಟಾರ್ಗೆಟ್ ಮಾಡಬಹುದು. ಇದು ಸಾಧ್ಯವಾದರೆ ಬ್ಯಾಂಕಿಂಗ್ ವ್ಯವಸ್ಥೆ ಬುಡಮೇಲಾಗುವ ಸಾಧ್ಯತೆ ಇದೆ.
ರ್ಯಾನ್ಸಮ್ ಎಂಬ ವೈರಸ್ನಿಂದ ವಿಶ್ವದ 100ಕ್ಕೂ ಅಧಿಕ ದೇಶಗಳ ಕಂಪನಿಗಳು, ಸರ್ಕಾರಿ ಇಲಾಖೆಗಳ ಕಂಪ್ಯೂಟರ್ ಹಾಗೂ ಸರ್ವರ್ಗಳಿಗೆ ಕನ್ನ ಹಾಕುವ ಮೂಲಕ ಹ್ಯಾಕರ್ಸ್ಗಳು ಜಾಗತಿಕ ಮಟ್ಟದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಇದರ ಬೆನ್ನಲ್ಲೇ, ಭಾರತದ ಶೇ. 70 ಎಟಿಎಂಗಳು ಸುರಕ್ಷಿತವಲ್ಲ ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಭಾರತದ ಎಟಿಎಂಗಳ ತಂತ್ರಜ್ಞಾನ ಹಳೆಯದಾಗಿದ್ದು, ಇವುಗಳನ್ನು ಸುಲಭವಾಗಿ ಹ್ಯಾಕ್ ಮಾಡಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವಿಶ್ವದ ಅತಿದೊಡ್ಡ ಸೈಬರ್ ದಾಳಿಯಲ್ಲಿ ಮೊನ್ನೆ ಆಂಧ್ರಪ್ರದೇಶದ ಪೊಲೀಸ್ ಇಲಾಖೆಯ ಕಂಪ್ಯೂಟರ್ಗಳೂ ಹ್ಯಾಕ್ ಆಗಿದ್ದು, ಮಹತ್ವದ ಡಾಟಾ ಹ್ಯಾಕರ್ಸ್ ಪಾಲಾಗಿವೆ ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹ್ಯಾಕರ್ಸ್ಗಳು ಭಾರತದ ಎಟಿಎಂಗಳಿಗೂ ಕನ್ನ ಹಾಕಿದರೆ ಆಶ್ಚರ್ಯವಿಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ರ್ಯಾನ್ಸಮ್ ವೈರಸ್ ಮೂಲಕ ಜಾಗತಿಕ ಮಟ್ಟದಲ್ಲಿ ಹ್ಯಾಕಿಂಗ್ ನಡೆಯುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಹೈಅಲರ್ಟ್ ಘೋಷಿಸಿದೆ. ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು, ಷೇರು ಮಾರುಕಟ್ಟೆ, ಆರ್ಬಿಐ ಶಾಖೆಗಳು, ಪೇಮೆಂಟ್ ಗೇಟ್ವೇ ಗಳಿಗೆ ಸರ್ಕಾರ ಎಚ್ಚರಿಕೆ ನೀಡಿದ್ದು, ವೈರಸ್ ತಡೆಗೆ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಸೂಚಿಸಿದೆ.
ಭಾರತದಲ್ಲಿ ಬಳಕೆಯಾಗುತ್ತಿರುವ ಶೇ. 70ರಷ್ಟು ಎಟಿಎಂಗಳ ತಂತ್ರಾಂಶ ವಿಂಡೋಸ್ ಎಕ್ಸ್ಪಿಯಿಂದ ಕಾರ್ಯ ನಿರ್ವಹಿಸುತ್ತದೆ. ವಿಂಡೋಸ್ ಎಕ್ಸ್ಪಿ ಈಗ ಹಳೆಯದಾಗಿದ್ದು, ಇದರ ಸುರಕ್ಷತಾ ಕ್ರಮ ಮತ್ತಿತರ ಟೂಲ್ಸ್ಗಳ ಪೂರೈಕೆಯನ್ನು 2014ರಲ್ಲೇ ಮೈಕ್ರೊಸಾಫ್ಟ್ ಕಂಪನಿ ಸ್ಧಗಿತಗೊಳಿಸಿದೆ. ಹೀಗಾಗಿ ಈ ಎಟಿಎಂಗಳಲ್ಲಿ ಸುರಕ್ಷತಾ ಅಂಶ ಕಳಪೆಯಾಗಿದೆ. ಹ್ಯಾಕರ್ಸ್ ಗಳಿಗೆ ಇದು ಸುಲಭ ತುತ್ತಾಗಬಹುದು.
ಎಟಿಎಂಗಳ ಮೇಲೆ ಸೈಬರ್ ದಾಳಿ ನಡೆದರೆ ಗಂಭೀರ ಸ್ಥಿತಿ ಎದುರಾಗಲಿದೆ ಎಂದು ತಂತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸೈಬರ್ ದಾಳಿ ಭಾರತ ಹಾಗೂ ಒಟ್ಟಾರೆ ಜಗತ್ತಿನ ಮೇಲೆ ಯಾವ ಪರಿಣಾಮ ಬೀರಿದೆ ಎಂಬುದು ಸೋಮವಾರ ನಿಖರವಾಗಿ ತಿಳಿದುಬರಲಿದೆ.ಶನಿವಾರ ಹಾಗೂ ಭಾನುವಾರ ಐಟಿ ಕಂಪನಿಗಳು, ವಾಣಿಜ್ಯ ಸಂಸ್ಥೆಗಳಿಗೆ ರಜೆ ಇದ್ದುದರಿಂದ ಹೆಚ್ಚಿನ ಹಾನಿ ಬಗ್ಗೆ ವರದಿಯಾಗಿಲ್ಲ. ಕಂಪನಿಗಳ ಉದ್ಯೋಗಿಗಳು ಸೋಮವಾರ ಬೆಳಗ್ಗೆ ಕಂಪ್ಯೂಟರ್ಗೆ ಲಾಗ್ಇನ್ ಆದಾಗ ದಾಳಿಯಿಂದ ಎಷ್ಟು ಹಾನಿಯಾಗಿದೆ ಎಂಬುದರ ಬಗ್ಗೆ ನಿಖರ ಅಂದಾಜು ತಿಳಿಯಲಿದೆ. ಕೆಲ ಸಂಸ್ಥೆಗಳು ಹಾಗೂ ಕಂಪನಿಗಳು ಶುಕ್ರವಾರ ರಾತ್ರಿಯಿಂದಲೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿವೆ. ಶನಿವಾರ ಹಾಗೂ ಭಾನುವಾರ ರಜಾ ಇದ್ದರೂ ತಜ್ಞರನ್ನು ಸಂರ್ಪಸಿ, ಡೇಟಾ ರಕ್ಷಿಸಿಕೊಳ್ಳಲು ಯತ್ನಿಸಿವೆ.
ನೀವೇನು ಮಾಡಬೇಕು?
ಸೈಬರ್ ದಾಳಿಗೆ ತುತ್ತಾಗದಂತೆ ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನಾ ತಂಡ ಕೆಲವು ಸಲಹೆ ನೀಡಿದೆ.
-ದಾಳಿ ನಿಯಂತ್ರಣಕ್ಕೆ ಬರುವವರೆಗೂ ಕಂಪ್ಯೂಟರ್ಗಳಲ್ಲಿ ಇಂಟರ್ನೆಟ್ ಬಳಕೆ ಕಡಿಮೆ ಮಾಡಿ
-ಅವಶ್ಯಕತೆ ಇಲ್ಲದಿದ್ದಲ್ಲಿ, ಕಂಪ್ಯೂಟರ್ಗಳನ್ನು ಅಂತರ್ಜಾಲಕ್ಕೆ ಸಂಪರ್ಕಿಸಲೇ ಬೇಡಿ
-ಇ ಮೇಲ್ಗಳಲ್ಲಿ ಇರುವ ಜಾಲತಾಣ ವಿಳಾಸದ (ಯುಆರ್ಎಲ್) ಲಿಂಕ್ಗಳ ಮೇಲೆ ಕ್ಲಿಕ್ಕಿಸಬೇಡಿ
-ಬೇರೆಯದೇ ಪುಟದಲ್ಲಿ (ಬ್ರೌಸರ್ ವಿಂಡೊ) ಯುಆರ್ಎಲ್ ಅನ್ನು ಬರೆದು, ಜಾಲತಾಣಕ್ಕೆ ಭೇಟಿ ನೀಡಿ
-ವಿಂಡೋಸ್ XP ಕಾರ್ಯಾಚರಣೆ ವ್ಯವಸ್ಥೆಯ (ಒಎಸ್) ಸುರಕ್ಷತಾ ಸೌಲಭ್ಯದ (ಸೆಕ್ಯುರಿಟಿ ಪ್ಯಾಚ್) ಪರಿಷ್ಕೃತ ಆವೃತ್ತಿಯನ್ನು ಅಳವಡಿಸಿಕೊಳ್ಳಿ
'ಇತರ ಒಎಸ್ಗಳ ಸುರಕ್ಷತಾ ವ್ಯವಸ್ಥೆಯನ್ನೂ ಮೇಲ್ದರ್ಜೆಗೆ ಏರಿಸಿ
ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆಗಳು, ರಕ್ಷಣೆ, ಭದ್ರತೆ, ಬಾಹ್ಯಾಕಾಶ ಸಂಶೋಧನೆ ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಈ ಬಗ್ಗೆ ಸಿಇಆರ್ಟಿ ಪತ್ರ ರವಾನಿಸಿದೆ