ತಾಲೂಕಿನಲ್ಲಿ ಭತ್ತದ ಬೆಳೆಗೆ ಬೆಂಕಿರೋಗ ಮತ್ತು ತಂತಿಹುಳು ರೋಗಬಾಧೆ ತಗುಲಿದ್ದು, ರೈತರು ಔಷಧೋಪಚಾರ ಕೈಗೊಳ್ಳಬೇಕೆಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜೆ. ವೆಂಕಟೇಶ್ ಹೇಳಿದ್ದಾರೆ

ಹುಣಸೂರು : ತಾಲೂಕಿನಲ್ಲಿ ಭತ್ತದ ಬೆಳೆಗೆ ಬೆಂಕಿರೋಗ ಮತ್ತು ತಂತಿಹುಳು ರೋಗಬಾಧೆ ತಗುಲಿದ್ದು, ರೈತರು ಔಷಧೋಪಚಾರ ಕೈಗೊಳ್ಳಬೇಕೆಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜೆ. ವೆಂಕಟೇಶ್ ಹೇಳಿದ್ದಾರೆ

Add Asianetnews Kannada as a Preferred SourcegooglePreferred

ತಾಲೂಕಿನಲ್ಲಿ ಈ ಸಾಲಿನಲ್ಲಿ 7,450 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಮೋಡ ಮುಸುಕಿದ ವಾತಾವರಣವಿರುವ ಕಾರಣ ಭತ್ತಕ್ಕೆ ಬೆಂಕಿರೋಗ ಸಹಜವಾಗಿ ಬರುತ್ತದೆ. ಅದರೊಂದಿಗೆ ಈ ಬಾರಿ ತಂತಿಹುಳು ರೋಗಬಾಧೆಯೂ ಕಾಣಿಸಿಕೊಂಡಿದೆ ಕಸಬಾ ಮತ್ತು ಹನಗೋಡು ಹೋಬಳಿಗಳ ಗಡಿಭಾಗದ ಗ್ರಾಮಗಳಲ್ಲಿ ರೋಗಬಾಧೆ ಕಾಣಿಸಿಕೊಂಡಿದ್ದು, ತಾಲೂಕಿನಾದ್ಯಂತ ರೋಗಬಾಧೆ ಕಾಣಿಸಿಕೊಂಡಿಲ್ಲ. ರೋಗ ತಗುಲಿರುವ ಜಮೀನುಗಳಲ್ಲಿ ರೈತರು ಔಷಧೋಪಚಾರ ನಡೆಸುವುದು ಅಗತ್ಯ. ಈ ಕುರಿತು ಹೋಬಳಿ ವ್ಯಾಪ್ತಿಯ ರೈತಸಂಪರ್ಕ ಕೇಂದ್ರ ಮತ್ತು ನಗರದ ಸಹಾಯಕ ನಿರ್ದೇಶಕರ ಕಚೇರಿಯನ್ನು ರೈತರು ಸಂಪರ್ಕಿಸಬಹುದಾಗಿದೆ ಎಂದು ಅವರು ಕೋರಿದ್ದಾರೆ.

ಔಷಧೋಪಚಾರ ಹೇಗೆ?

ಬೆಂಕಿರೋಗ ನಿವಾರಣೆಗೆ ಟ್ರೈಸೈಕ್ಲೋಜಾಲ್ 50 ಶಿಲೀಂದ್ರ ನಾಶಕವನ್ನು ಪ್ರತಿ ಲೀಟರ್ ನೀರಿಗೆ 0.6 ಗ್ರಾಂ ಬೆರೆಸಿ ಸಿಂಪಡಿಸಬೇಕು. ತಂತಿಹುಳು ಬಾಧೆ ಕಂಡುಬಂದಲ್ಲಿ ಕ್ಲೋರೋಫರಿಫಾಸ್ ಶೇ. 50 ಇಸಿ ಪ್ರತಿ ಲೀಟರ್ ನೀರಿಗೆ 2 ಎಂಎಲ್ ಮಿಶ್ರಣ ಮಾಡಿ ಭತ್ತದ ಗಿಡದ ಬುಡಕ್ಕೆ ಸಿಂಪಡಿಸಬೇಕು. ಅಥವಾ ಕಾರ್ಬೋಫಿರಾನ್ 3ಜಿ ಔಷಧವನ್ನು ಪ್ರತಿ ಎಕರೆಗೆ 8 ಕೆಜಿ ಪ್ರಮಾಣದಲ್ಲಿ ಭತ್ತದ ಗದ್ದೆಗೆ ಎರಚುವುದರಿಂದ ರೋಗಬಾಧೆ ನಿಯಂತ್ರಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಹೆಚ್ಚು ಇಳುವರಿಯ ಪುಸಾ ತಳಿ ನಿಷೇಧಿಸಲು ನಿರ್ಧಾರ

ಪಟಿಯಾಲಾ: ಹೆಚ್ಚು ನೀರು ಬಳಕೆ ಮಾಡುತ್ತದೆ ಮತ್ತು ಹೆಚ್ಚು ಹುಲ್ಲು ಸಂಗ್ರಹವಾಗುತ್ತದೆ ಎಂಬ ಕಾರಣಕ್ಕೆ ಹೆಚ್ಚು ಇಳುವರಿ ನೀಡುವ 'ಪುಸಾ 44' ಭತ್ತದ ತಳಿಯನ್ನು ಮುಂದಿನ ವರ್ಷದಿಂದ ನಿಷೇಧಿಸಲು ಪಂಜಾಬ್‌ ಸರ್ಕಾರ ನಿರ್ಧರಿಸಿದೆ. ಆದರೆ ಇದಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಪುಸಾ 44 ಭತ್ತದ ತಳಿ ಇತರ ತಳಿಗಳಿಗೆ ಹೋಲಿಸಿದರೆ ಎಕರೆಗೆ 10 ಕ್ವಿಂಟಾಲ್‌ ಹೆಚ್ಚಿನ ಇಳುವರಿ ಕೊಡುತ್ತದೆ. ಅಲ್ಲದೇ ಮತ್ತಷ್ಟು ತಳಿಗಳಿಗೆ ಹೋಲಿಸಿದರೆ ಇದರ ಇಳುವರಿ ಪ್ರಮಾಣ 40 ಕ್ವಿಂಟಾಲ್‌ವರೆಗೂ ಇರುತ್ತದೆ. ಹೀಗಾಗಿ ಇದರ ನಿಷೇಧಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ ಈ ತಳಿಯ ಭತ್ತ ಬೆಳೆಯಲು ಹೆಚ್ಚಿನ ನೀರು ಬಳಕೆಯಾಗುತ್ತದೆ. ಅಲ್ಲದೇ ಬೆಳೆಯ ಬಳಿಕ ಉತ್ಪಾದನೆಯಾಗುವ ಹುಲ್ಲಿನ ಪ್ರಮಾಣವೂ ಸಹ ಅಧಿಕವಾಗಿರುತ್ತದೆ ಎಂಬ ಕಾರಣಕ್ಕೆ ಇದನ್ನು ನಿಷೇಧಿಸುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಪಂಜಾಬ್‌ ಭಾಗದಲ್ಲಿ ಬೆಳೆ ಬೆಳೆದ ಬಳಿಕ ರೈತರು ಹುಲ್ಲನ್ನು ಸುಟ್ಟು ಹಾಕುವುದರಿಂದ ಇದು ಹೆಚ್ಚಿನ ವಾಯುಮಾಲಿನ್ಯಕ್ಕೆ ಕಾರಣವಾಗುತ್ತದೆ ಎಂದು ಸರ್ಕಾರ ಹೇಳಿದೆ. ಇತರ ಭತ್ತದ ತಳಿಗಳಿಗೆ ಹೋಲಿಸಿದರೆ ಅಧಿಕ ಇಳುವರಿ ನೀಡುವ ಇದನ್ನು ನಿಷೇಧ ಮಾಡಿದರೆ ನಾವು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದ್ದೇವೆ. ಒಂದು ವೇಳೆ ಈ ತಳಿಯನ್ನು ನಿಷೇಧಿಸುವುದೇ ಆದರೆ ಉಳಿದ ಭತ್ತದ ತಳಿಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು ಎಂದು ಸರ್ಕಾರದ ನಿರ್ಧಾರದ ವಿರುದ್ಧ ಪಂಜಾಬ್‌ ರೈತರು ಆಕ್ರೋಶ ಹೊರಹಾಕಿದ್ದಾರೆ.