Fact Check| ದೆಹಲಿಯ ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿದ್ರಾ?
ದೆಹಲಿಯಲ್ಲಿ ಭುಗಿಲೆದ್ದ ಹಿಂಸಾಚಾರ| ಮಸೀದಿ ಸುತ್ತುವರೆದು ಕೇಸರಿ ಧ್ವಜ ಹಾರಿಸಿದ್ರಾ ಉದ್ರಿಕ್ತರು| ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ವಿಡಿಯೋ
ನವದೆಹಲಿ[ಫೆ.26]; ಪೌರತ್ವ ತಿದ್ದುಪಡಿ ಕಾಯ್ದೆ ಪರ ಹಾಗೂ ವಿರೋಧದ ನಡುವಿನ ತಿಕ್ಕಾಟದಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಗಲಾಟೆ ತಡೆಯುವಲ್ಲಿ ಆಡಳಿತ ಯಶಸ್ವಿಯಾಗಿದ್ದರೂ, ಮೃತರ ಸಂಖ್ಯೆ ಹೆಚ್ಚುತ್ತಲೇ ಇದೆ. ಈವರೆಗೂ ಸುಮಾರು 20ಕ್ಕೂ ಅಧಿಕ ಮಂದಿ ಈ ಹಿಂಸಾಚಾರಕ್ಕೆ ಬಲಿಯಾಗಿದ್ದರೆ, 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಹೀಗಿರುವಾಗ ಸೋಶಿಯಲ್ ಮೀಡಿಯಾದಲ್ಲಿ ಹಿಂಸಾಚಾರ ಸಂಬಂಧ ಹಲವಾರು ವದಂತಿಗಳೂ ಹಬ್ಬಲಾರಂಭಿಸಿವೆ. ಸದ್ಯ ಮಸೀದಿಯೊಂದರ ಮೇಲೆ ಕೇಸರಿ ಧ್ವಜ ಹಾರಿಸುತ್ತಿರುವ ವಿಡಿಯೋ ಭಾರೀ ಕೂಡಾ ವೈರಲ್ ಆಗಲಾರಂಭಿಸಿದೆ.
ಹೌದು ಮಸೀದಿಯೊಂದರ ವಿಡಿಯೋ ವೈರಲ್ ಆಗುತ್ತಿದ್ದು, ಇದರ ಮೇಲಿನ ಗುಮ್ಮಟದ ಮೇಲೆ ಹತ್ತಿದ ಕೆಲ ವ್ಯಕ್ತಿಗಳು ಧ್ವಜ ಹಾರಿಸುತ್ತಿರುವುದು ಹಾಗೂ ಹನುಮಾನ್ ಪ್ರತಿಮೆ ಪ್ರತಿಷ್ಟಾಪಿಸುತ್ತಿರುವುದು ಸೆರೆಯಾಗಿದೆ. ಅಲ್ಲದೇ ಮಸೀದಿ ಸುತ್ತುವರೆದ ಉದ್ರಿಕ್ತರು 'ಜೈ ಶ್ರೀರಾಮ್' ಎಂಬ ಘೋಷಣೆ ಕೂಗುತ್ತಿರುವುದೂ ಕೇಳಿ ಬಂದಿದೆ.
ಹೌದು ಫೆಬ್ರವರಿ 25 ರಂದು ದೆಹಲಿಯ ಅಶೋಕ್ ನಗರದಲ್ಲಿ ನಡೆದ ಘಟನೆಯ ವಿಡಿಯೋ ಇದಾಗಿದೆ ಎಂದು ಫ್ಯಾಕ್ಟ್ ಚೆಕ್ ನಲ್ಲಿ ಸಾಬೀತಾಗಿದೆ.
ಈ ಕುರಿತು ವೈರ್ ಪತ್ರಿಕೆಯ ನವೋಮಿ ತಾನೇ ಖುದ್ದು ಈ ಘಟನೆ ನಡೆದಿರುವುದನ್ನು ಕಂಡಿರುವುದಾಗಿ ತಿಳಿಸಿದ್ದಾರೆ. ಆದರೆ ವಿಹಾರ್ ನಲ್ಲಿ ಅಲ್ಲ ಇದು ಅಶೋಕನಗರದಲ್ಲಿ ನಡೆದ ಘಟನೆ ಎಂದಿದ್ದಾರೆ.
ಸದ್ಯ ಭುಗಿಲೆದ್ದ ಹಿಂಸಾಚಾರ ತಡೆಯುವ ನಿಟ್ಟಿನಲ್ಲಿ ಸರ್ಕಾರ ಸೋಶಿಯಲ್ ಮೀಡಿಯಾ ಮೇಲೆ ವಿಶೇಷ ನಿಗಾ ವಹಿಸಿದ್ದು, ಯಾವುದೇ ಸೂಕ್ಷ್ಮ ವಿಚಾರವನ್ನು ಇತರರಿಗೆ ಕಳುಹಿಸುವ ಮುನ್ನ ಸತ್ಯಾಸತ್ಯತೆ ಪರಿಶೀಲಿಸಲು ಮರೆಯದಿರಿ.